ರಾಹುಲ್ಗೆ ಅಗಸ್ಟಾ ಉರುಳು: ಸೋನಿಯಾ ಗಾಂಧಿ ಹೆಸರನ್ನೂ ಹೇಳಿದ ಮೈಕಲ್
Team Udayavani, Dec 30, 2018, 12:30 AM IST
ಹೊಸದಿಲ್ಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಕಾಪ್ಟರ್ ಹಗರಣದಲ್ಲಿ ದಲ್ಲಾಳಿ ಕ್ರಿಶ್ಚಿಯನ್ ಮೈಕಲ್ ಈಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಬಾಯ್ಬಿಟ್ಟಿ ದ್ದಾನೆ. ಇದು ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಆರೋಪ ಮತ್ತು ಪ್ರತ್ಯಾರೋಪ ಗಳಿಗೆ ಕಾರಣವಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯೂ ಇದೆ. ಮೈಕಲ್ನನ್ನು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿ ದಿಲ್ಲಿಗೆ ಕರೆತಂದು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ “ಶ್ರೀಮತಿ ಗಾಂಧಿ’ ಮತ್ತು ಇಟಾಲಿಯನ್ ಮಹಿಳೆಯ ಪುತ್ರ’ ಎಂದುಮೈಕಲ್ ಹೇಳಿದ್ದಾಗಿ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ಗೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮಾಹಿತಿಯಲ್ಲಿ ವಿವರಿಸಲಾಗಿದೆ.
ಏನು ಹೇಳಿದ್ದಾನೆ ಮೈಕಲ್?
ಶ್ರೀಮತಿ ಗಾಂಧಿ ಎಂಬುದಾಗಿ ಮೈಕಲ್ ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ ಅದು ಯಾರನ್ನು ಉಲ್ಲೇಖೀಸಿದೆ ಎಂಬು ದನ್ನು ಈಗಲೇ ಹೇಳಲಾಗದು. ಅಷ್ಟೇ ಅಲ್ಲ, ಇಟಾಲಿಯನ್ ಮಹಿಳೆಯ ಪುತ್ರ, ಈತ ಪ್ರಧಾನಿಯಾಗಲಿರುವ ವ್ಯಕ್ತಿ ಎಂಬು ದಾಗಿಯೂ ಮೈಕಲ್ ಉಲ್ಲೇಖೀಸಿದ್ದಾನೆ.
ಯಾರೀತ “ಆರ್’?
ಅಲ್ಲದೆ ಮೈಕಲ್ ಇತರರ ಜತೆ ನಡೆಸಿದ್ದ ಸಂವಹನದಲ್ಲಿ ಉಲ್ಲೇಖೀಸಿರುವ ಬಿಗ್ ಮ್ಯಾನ್ ಆರ್ (ದೊಡ್ಡ ಮನುಷ್ಯ ಆರ್) ಎಂಬುದು ಯಾರೆನ್ನುವುದನ್ನು ಕಂಡು ಕೊಳ್ಳಲು ಇನ್ನಷ್ಟು ದಿನ ಬೇಕಿದೆ. ಮೈಕಲ್ಗೆ ನಾವು ಇನ್ನಷ್ಟು ಪ್ರಶ್ನೆಗಳನ್ನು ಈ ಬಗ್ಗೆ ಕೇಳಬೇಕಿದೆ. ಹೀಗಾಗಿ ಕಸ್ಟಡಿಯನ್ನು ಇನ್ನಷ್ಟು ದಿನ ವಿಸ್ತರಿಸಬೇಕು ಎಂದು ಕೋರ್ಟ್ಗೆ ಇ.ಡಿ. ಮನವಿ ಮಾಡಿದೆ. ಅಲ್ಲದೆ, ದಿಲ್ಲಿಯ ವಿವಿಧ ಭಾಗಗಳಲ್ಲಿ ಲಂಚ ನೀಡುವುದಕ್ಕಾಗಿ ಭೇಟಿ ನೀಡಿದ ಸ್ಥಳಗಳನ್ನು ತಪಾಸಣೆ ಮಾಡಬೇಕಿದೆ. ಹಣ ಸಾಗಣೆಗೆ ಬಳಸಲಾಗುತ್ತಿದ್ದ ಹೊಸ ನಕಲಿ ಕಂಪೆನಿಗಳ ಮಾಹಿತಿಯೂ ಲಭ್ಯವಾಗಿದ್ದು, ಇವುಗಳ ಪರಿಶೀಲನೆ ನಡೆಸಬೇಕಿದೆ ಎಂದು ಇ.ಡಿ. ಹೇಳಿದೆ.
ವಿಚಾರಣೆ ಮಧ್ಯೆಯೇ ವಕೀಲರಿಂದ ಸಲಹೆ
ಡಿ. 27ರಂದು ಮೈಕಲ್ನನ್ನು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸುತ್ತಿರುವಾಗ ಅವನ ಪರ ವಕೀಲ ಅಲಿಜೋ ಕೆ. ಜೋಸೆಫ್ರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ಕಾಗದದ ಚೀಟಿಯೊಂದನ್ನು ಮೈಕಲ್ಗೆ ಅಲಿಜೋ ನೀಡಿದರು. ಇದನ್ನು ಗಮನಿಸಿದ ಇ.ಡಿ. ಅಧಿಕಾರಿಗಳು ಚೀಟಿಯನ್ನು ಪರಿಶೀಲಿಸಿದಾಗ, ಸೋನಿಯಾ ಗಾಂಧಿ ಬಗ್ಗೆ ಕೇಳಲಾಗುವ ಪ್ರಶ್ನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿವರ ಟೈಪ್ ಆಗಿತ್ತು. ಇದನ್ನು ಅಲಿಜೋ ತನ್ನ ಜೇಬಿನಲ್ಲಿ ಇಟ್ಟುಕೊಂಡು ತಂದಿದ್ದರು ಎಂದು ಇ.ಡಿ. ಹೇಳಿದೆ. ಈ ಮೂಲಕ ಮೈಕಲ್ಗೆ ನೀಡಿರುವ ಕಾನೂನು ಸಹಕಾರವನ್ನೂ ಆತ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ಮೈಕಲ್ಗೆ ನೀಡಿರುವ ಕಾನೂನು ಸೌಲಭ್ಯವನ್ನು ಹಿಂಪಡೆಯಬೇಕು ಎಂದು ಜಾರಿ ನಿರ್ದೇಶನಾಲಯ ಆಗ್ರಹಿಸಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಮೈಕಲ್ ವಕೀಲ ಅಲಿಜೋ ಕೆ ಜೋಸೆಫ್, ಯಾವುದೋ ಒಂದು ವಿಷಯದ ಬಗ್ಗೆ ಮೈಕಲ್ ಗೊಂದಲ ಹೊಂದಿದ್ದರು. ಹೀಗಾಗಿ ಸಹಾಯಕ್ಕಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ವಕೀಲರನ್ನು ಮೈಕಲ್ ಭೇಟಿ ಮಾಡುವ ಸಮಯವನ್ನು ಕೋರ್ಟ್ ನಿಗದಿಪಡಿಸಿದ್ದು, ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ 15 ನಿಮಿಷಗಳವರೆಗೆ ಭೇಟಿ ಮಾಡಬಹುದಾಗಿದೆ ಎಂದು ಸೂಚನೆ ನೀಡಿದೆ.
ಎಚ್ಎಎಲ್ನಿಂದ ಟಾಟಾ ಸಂಸ್ಥೆಗೆ
ಅಗಸ್ಟಾ ಕಾಪ್ಟರ್ ಒಪ್ಪಂದದಲ್ಲಿ ಹಿಂದುಸ್ಥಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕೈಬಿಟ್ಟು ಟಾಟಾ ಸಂಸ್ಥೆಗೆ ಗುತ್ತಿಗೆ ನೀಡಿರುವ ಬಗ್ಗೆ ಮೈಕಲ್ ಮಾತನಾಡಿದ್ದಾನೆ ಎಂದು ಇ.ಡಿ. ಹೇಳಿದೆ.
ಏಳು ದಿನ ವಶಕ್ಕೆ
ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ಇನ್ನೂ ಒಂದು ವಾರದವರೆಗೆ ಮೈಕಲ್ನನ್ನು ಜಾರಿ ನಿರ್ದೇಶ ನಾಲಯದ ವಶಕ್ಕೆ ಒಪ್ಪಿಸಿದೆ.
ಯಾರು ಈ ಮೈಕಲ್?
54 ವರ್ಷದ ಕ್ರಿಶ್ಚಿಯನ್ ಮೈಕಲ್ 3,600 ಕೋಟಿ ರೂ. ಮೌಲ್ಯದ ವಿವಿಐಪಿ ಕಾಪ್ಟರ್ ಹಗರಣದ ಮೂವರು ಮಧ್ಯವರ್ತಿಗಳಲ್ಲಿ ಓರ್ವ ನಾಗಿದ್ದಾನೆ. ಅಗಸ್ಟಾ ವೆಸ್ಟ್ಲ್ಯಾಂಡ್ಗೆ ಒಪ್ಪಂದ ಕೊಡಿಸುವುದಕ್ಕಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈತ ಲಂಚ ನೀಡುತ್ತಿದ್ದ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ 12 ವಿವಿಐಪಿ ಕಾಪ್ಟರ್ಗಳನ್ನು ಖರೀದಿಸುವ ಒಪ್ಪಂದ ಇದಾಗಿತ್ತು. 2014ರಲ್ಲಿ ಇಟಲಿಯಲ್ಲಿ ಈ ಸಂಬಂಧ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಭಾರತ ಸರಕಾರವು ಒಪ್ಪಂದವನ್ನು ರದ್ದುಗೊಳಿಸಿದೆ. ಮೈಕಲ್ಗೆ 225 ಕೋಟಿ ರೂ. ಲಂಚದ ಮೊತ್ತವನ್ನು ಅಗಸ್ಟಾ ಕಂಪನಿ ನೀಡಿತ್ತು ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.
ಕಾಂಗ್ರೆಸ್ ಆರೋಪ
ನೆಹರೂ ಕುಟುಂಬದ ಹೆಸರನ್ನು ಹೇಳುವಂತೆ ಸರಕಾರವು ಮೈಕಲ್ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕುಟುಂಬದ ಹೆಸರನ್ನು ಪ್ರಸ್ತಾವಿಸುವಂತೆ ಸರಕಾರಿ ಸಂಸ್ಥೆಗೆ ಒತ್ತಡ ಹೇರಲು ಚೌಕಿದಾರರು ಯಾಕೆ ಪ್ರಯತ್ನಿಸುತ್ತಿದ್ದಾರೆ? ಬಿಜೆಪಿ ಚಿತ್ರಕಥೆಗಾರರು ಓವರ್ಟೈಂ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್ಪಿಎನ್ ಸಿಂಗ್ ಕಿಡಿಕಾರಿದ್ದಾರೆ.
ಜಾರಿ ನಿರ್ದೇಶನಾಲಯ ಕೋರ್ಟ್ನಲ್ಲಿ ಹೇಳಿದ ಸಂಗತಿ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಶ್ರೀಮತಿ ಗಾಂಧಿಯ ಹೆಸರನ್ನು ಕಾಪ್ಟರ್ ಹಗರಣದ ಆರೋಪಿ ಪ್ರಸ್ತಾವಿಸಿದ್ದಾನೆ. ಅಷ್ಟೇ ಅಲ್ಲ, ಕಾಪ್ಟರ್ ಹಗರಣದಲ್ಲಿ ಹೊಸ ಹೊಸ ಅಡ್ಡ ಹೆಸರು ಬಹಿರಂಗವಾಗಿದೆ.
ಪ್ರಕಾಶ್ ಜಾಬ್ಡೇಕರ್, ಕೇಂದ್ರ ಸಚಿವ