ಹೊಸ ಸಿನಿಮಾ ಒಪ್ಪಿಕೊಂಡ ಅಜೇಯ್ರಾವ್
Team Udayavani, Jan 28, 2019, 5:40 AM IST
ಕಾಶಿನಾಥ್ ಪ್ರಮುಖ ಆಕರ್ಷಣೆಯಾಗಿದ್ದ ಓಳ್ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದ ಆನಂದ ಪ್ರಿಯ ಇದೀಗ ಅಜೇಯ್ರಾವ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ಕಥೆ ಮತ್ತು ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಲು ಉತ್ಸಾಹದಲ್ಲಿರುವ ಆನಂದ ಪ್ರಿಯ, ಈ ಬಾರಿ ಹೊಸದೇನನ್ನೋ ಹೇಳಬೇಕು ಎಂಬ ಕಾರಣಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾರೆ.
ಈಗಾಗಲೇ ಹಲವು ಚಿತ್ರಗಳಿಗೆ ಗೀತೆ ರಚನೆ ಹಾಗು ಸಂಭಾಷಣೆ ಮತ್ತು ಚಿತ್ರಕಥೆ ಮಾಡಿರುವ ಆನಂದ ಪ್ರಿಯ ಅವರಿಗೆ ಇದು ನಿರ್ದೇಶನದ ಎರಡನೇ ಸಿನಿಮಾ. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅಜೇಯ್ರಾವ್, ಆನಂದ ಪ್ರಿಯ ಅವರ ಕಥೆ ಕೇಳಿ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ, ಈ ಹೊಸ ಚಿತ್ರದಲ್ಲಿ ಅಜೇಯ್ರಾವ್ ಹಿಂದಿಗಿಂತಲೂ ಹೊಸ ಲುಕ್ನಲ್ಲಿ ಕಂಗೊಳಿಸಲಿದ್ದಾರೆ. ನಿರ್ದೇಶಕ ಆನಂದ ಪ್ರಿಯ ಅವರು ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ.
ಈ ಚಿತ್ರವನ್ನು ಗೋವಿಂದರಾಜ್ ಎ.ಎಚ್. ಮತ್ತು ಕೃಷ್ಣಮೂರ್ತಿ ಅವರುಗಳು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಂತ್ರಜ್ಞರ ದಂಡೇ ಕೆಲಸ ಮಾಡುತ್ತಿರುವುದು ಇನ್ನೊಂದು ವಿಶೇಷ. ಈಗಾಗಲೇ ಅಜೇಯ್ರಾವ್ ಚಿತ್ರಗಳ ಸಂಗೀತ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ವಿ.ಶ್ರೀಧರ್ ಸಂಭ್ರಮ್, ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಶ್ರೀಧರ್ ಸಂಭ್ರಮ್, ಈಗಾಗಲೇ ಅಜೇಯ್ರಾವ್ ಅವರ ಚಿತ್ರಗಳಲ್ಲಿ ಮೆಲೋಡಿ ಮೋಡಿ ಮಾಡಿರುವುದು ಎಲ್ಲರಿಗೂ ಗೊತ್ತು. ಆ ಜಾದು ಈ ಚಿತ್ರದ ಹಾಡುಗಳಲ್ಲೂ ಇರಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಇನ್ನು, ವಿಲಿಯಮ್ ಡೇವಿಡ್ ಈ ಚಿತ್ರಕ್ಕೆ ಛಾಯಾಗ್ರಾಹಕರು. ಸದ್ಯಕ್ಕೆ ಅಜೇಯ್ರಾವ್ ಚಿತ್ರವನ್ನು ಆನಂದ ಪ್ರಿಯ ನಿರ್ದೇಶುವುದು ಪಕ್ಕಾ ಆಗಿದೆ. ಆದರೆ, ಚಿತ್ರಕ್ಕೆ ನಾಯಕಿ ಯಾರು, ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಇತ್ಯಾದಿ ಮಾಹಿತಿ ಸದ್ಯಕ್ಕಿಲ್ಲ. “ತಾಯಿಗೆ ತಕ್ಕ ಮಗ’ ಚಿತ್ರದ ಬಳಿಕ ಅಜೇಯ್ರಾವ್ ಒಪ್ಪಿಕೊಂಡಿರುವ ಚಿತ್ರವಿದು. ಇಲ್ಲೂ ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್ ಇತ್ಯಾದಿ ವಿಷಯಗಳನ್ನು ನಿರೀಕ್ಷಿಸಬಹುದು.