ಪುತ್ತೂರು: ಗಾಂಧಿ ಕಟ್ಟೆ ತಾತ್ಕಾಲಿಕ ತೆರವು
Team Udayavani, Mar 18, 2019, 5:49 AM IST
ಪುತ್ತೂರು: ನಗರದ ಹೃದಯ ಭಾಗದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧೀಜಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ರಸ್ತೆಗೆ ಸಮನಾಂತರವಾಗಿ ಮರು ನಿರ್ಮಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ.
ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ ಮತ್ತು ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಈ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೇ ಜಾಗದಲ್ಲಿ ಅಶ್ವತ್ಥ ಮರವೂ ಇದೆ. ಪುತ್ತೂರು ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ ಸಂದರ್ಭದಲ್ಲೂ ಗಾಂಧಿಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು. ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಮಹತ್ವ ಮತ್ತು ಪ್ರಸ್ತುತತೆ ಕುರಿತು ಹಲವು ಬಾರಿ ಚರ್ಚೆ, ಗೊಂದಲಗಳು ನಡೆದಿದ್ದವು. ಕೆಲವರು ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪರ ಮಾತನಾಡಿದರೆ, ಇನ್ನು ಕೆಲವರು ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ವ್ಯತ್ಯಾಸಗಳನ್ನು ಮಾಡಿಕೊಳ್ಳುವ ಪರ ನಿಂತು ನಿರಂತರ ವಾದ -ಪ್ರತಿವಾದಗಳು ನಡೆಯುತ್ತಿದ್ದವು.
ಈ ಮಧ್ಯೆ ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಸುತ್ತಲೂ ಮಣ್ಣಿನ ಕುಸಿತ ಉಂಟಾಗಿ ಅಪಾಯದ ಸ್ಥಿತಿಯೂ ಕಾಣಿಸಿಕೊಂಡಿತ್ತು. ಗಾಂಧಿ ಕಟ್ಟೆಯ ನಿರ್ವಹಣೆಯೂ ಸಮರ್ಪಕವಾಗಿರಲಿಲ್ಲ. ಅಶ್ವತ್ಥ ಮರದ ಗೆಲ್ಲುಗಳನ್ನು ಸವರುವ ಸಂದರ್ಭದಲ್ಲೂ ಪುತ್ತೂರಿನ ಹಿರಿಯರ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಪಕ್ಷಿಗಳಿಗೆ ತೊಂದರೆಯಾಗುವ ಮತ್ತು ಐತಿಹಾಸಿಕ ಜಾಗದಲ್ಲಿ ವ್ಯತ್ಯಾಸ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ರವಿವಾರ ಗಾಂಧಿಕಟ್ಟೆ, ಪ್ರತಿಮೆ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗಿದೆ. ಜೆಸಿಬಿ ಮೂಲಕ ಸಮತಟ್ಟುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ.
8 ಲಕ್ಷ ರೂ. ಯೋಜನೆ
ಈ ಜಾಗದ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ.
-ರೂಪಾ ಟಿ. ಶೆಟ್ಟಿ
ಪೌರಾಯುಕ್ತರು, ನಗರಸಭೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು