ಎಣ್ಮೂರು: ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ, ಆದಿಬೈದೇರುಗಳ ನೇಮ
Team Udayavani, Mar 22, 2019, 5:55 AM IST
ಬೆಳ್ಳಾರೆ : ಪಡುಮಲೆಯಲ್ಲಿ ಹುಟ್ಟಿ, ಎಣ್ಮೂರಿನ ಮಣ್ಣಿನಲ್ಲಿ ವೀರ ಮರಣವಪ್ಪಿ ದೈವತ್ವಕ್ಕೇರಿ ಆರಾಧನೆಗೊಳ್ಳುತ್ತಿರುವ ಕೋಟಿ- ಚೆನ್ನಯರ ಸಮಾಧಿ ಹೊಂದಿರುವ ಚಾರಿತ್ರಿಕ ಸ್ಥಳವಾದ ಎಣ್ಮೂರು ಶ್ರೀ ನಾಗಬ್ರಹ್ಮ ಆದಿಬೈದೇರುಗಳ ಗರಡಿಯಲ್ಲಿ ಶ್ರೀ ಆದಿಬೈದೇರುಗಳ ನೇಮ ಸಾವಿರಾರು ಭಕ್ತರ ಸಮಾಗಮದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಾ. 20ರಂದು ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು, ನೇತ್ರಾದಿ ಗರಡಿಯಲ್ಲಿ ದರ್ಶನದ ಬಳಿಕ ರಾತ್ರಿ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಬಳಿಕ ಕಿನ್ನಿದಾರು ಗರಡಿ ಇಳಿಯುವುದು, ಮಾ. 21 ಪ್ರಾತಃಕಾಲ 4 ಗಂಟೆಗೆ ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು, ಬೆಳಗ್ಗೆ 6ಕ್ಕೆ ಕೋಟಿ ಚೆನ್ನೆಯ ದರ್ಶನ, ಬೈದೇರುಗಳ ಸೇಟು, ಅರಿಕೆ ಗಂಧ ಪ್ರಸಾದ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದ.ಕ. ಉಡುಪಿ, ಕಾಸರಗೋಡು ಭಾಗಗಳಿಂದ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರದ ಆನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.