ಸಹಸ್ರಲಿಂಗೇಶ್ವರ ದೇವಸ್ಥಾನ: ದೊಂಪದ ಬಲಿ
Team Udayavani, Mar 22, 2019, 6:03 AM IST
ಉಪ್ಪಿನಂಗಡಿ : ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವಾಲಯದ ಮುಂಭಾಗದ ಸತ್ಯದ ಮಜಲಿನಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ದೊಂಪದ ಬಲಿ ನೇಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನದಲ್ಲಿರುವ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನಿಂದ ದೇವಾಲಯಕ್ಕೆ ಮಂಗಳವಾರ ರಾತ್ರಿ ವಿವಿಧ ಬಿರುದಾವಳಿಯೊಂದಿಗೆ ಪಲ್ಲಕಿಯಲ್ಲಿ ದೈವಗಳ ಭಂಡಾರ ಆಗಮಿಸಿತು. ಬಳಿಕ ಸತ್ಯದ ಮಜಲಿನಲ್ಲಿ ರಾಜನ್ ದೈವ ಕಲ್ಕುಡ, ಕಲ್ಲುರ್ಟಿ, ಶಿರಾಡಿ ದೈವಗಳ ನೇಮ ನಡೆಯಿತು. ಉಪ್ಪಿನಂಗಡಿ ದೇವಾಲಯದ ಜಾತ್ರಾ ಸರಣಿಯಲ್ಲಿ ದೊಂಪದ ಬಲಿ ಕೊನೆಯ ಕಾರ್ಯಕ್ರಮವಾಗಿದೆ.
ಶ್ರೀ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ್ ರಘುನಾಥ್ ರೈ, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ನಂದಾವರ ಉಮೇಶ್ ಶೆಣೈ, ಶ್ರೀ ಕಾಳಿಕಾಂಬಾ ಭಜನ ಮಂಡಳಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ, ದೇವಾಲಯದ ಸಿಬಂದಿ ವೆಂಕಟೇಶ ರಾವ್, ಕೃಷ್ಣ ಪ್ರಸಾದ್ ಭಟ್ ಬಡಿಲ, ದಿವಾಕರ ಗೌಡ ಉಪಸ್ಥಿತರಿದ್ದರು.
15 ಅಡಿ ಉದ್ದದ ಮಾರಿಸೂಟ
ಯಾವುದೇ ಗ್ರಾಮದಲ್ಲಿ ದೊಂಪದ ಬಲಿ ನೇಮ ಅಲ್ಲಿನ ಗದ್ದೆ ಅಥವಾ ಬಯಲಿನಲ್ಲಿ ನಡೆಯುತ್ತದೆ. ತಾತ್ಕಾಲಿಕ ಚಪ್ಪರದಡಿ ದೈವಗಳ ಭಂಡಾರ ಇರಿಸಲಾಗುತ್ತದೆ. ದೊಂಪದ ಬಲಿ ಸಂದರ್ಭ 15 ಅಡಿ ಉದ್ದದ ಮಾರಿಸೂಟೆಯನ್ನು ಹೊತ್ತಿಸಲಾಗುತ್ತದೆ. ಬಿದಿರು, ತೆಂಗಿನ ಮಡಲು, ತೆಂಗಿನ ಸಿಪ್ಪೆ ಇತ್ಯಾದಿಗಳನ್ನು ಸೇರಿಸಿ ಮಾರಿಸೂಟೆಯನ್ನು ತಯಾರಿಸಲಾಗುತ್ತದೆ. ದನ್ನು ಎರಡು ಬಿದಿರುಗಳ ಸಹಾಯದಿಂದ ಬಯಲಿನಲ್ಲಿ ನಿಲ್ಲಿಸಲಾಗುತ್ತದೆ. ದೊಂಪದ ಬಲಿ ಆರಂಭದಿಂದ ಅಂತ್ಯದವರೆಗೆ ಮಾರಿಸೂಟೆ ಬೆಳಗುತ್ತಲೇ ಇರಬೇಕು. ದೊಂಪದ ಬಲಿ ನೇಮದಲ್ಲಿ ಮೊದಲು ಎದ್ದು ನಿಲ್ಲುವ ದೈವದ ಗಗ್ಗರ ಬೂಳ್ಯ ಸ್ವೀಕಾರದ ಬಳಿಕ ಮಾರಿಸೂಟೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ.