ಬೌದ್ಧ ಮಂದಿರಗಳ ಮೇಲೆ ದಾಳಿ ಶಂಕೆ
Team Udayavani, Apr 30, 2019, 6:05 AM IST
ಕೊಲೊಂಬೊ: ಶ್ರೀಲಂಕಾದಲ್ಲಿ ಈಸ್ಟರ್ ರವಿವಾರ ಸಂಭವಿಸಿದ ಭೀಕರ ಉಗ್ರ ದಾಳಿಯ ಅನಂತರ ಈಗ ಬೌದ್ಧ ಮಂದಿರಗಳಿಗೆ ದಾಳಿ ಭೀತಿ ಎದುರಾಗಿದೆ.
ಮಹಿಳಾ ಆತ್ಮಾಹುತಿ ಬಾಂಬರ್ಗಳನ್ನು ಬಳಸಿಕೊಂಡು ಬೌದ್ಧ ದೇಗುಲಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಶ್ರೀಲಂಕಾ ಗುಪ್ತಚರ ದಳ ಮಾಹಿತಿ ನೀಡಿದ್ದು, ಈಸ್ಟರ್ ಸ್ಫೋಟ ನಡೆಸಿರುವ ನ್ಯಾಷನಲ್ ತೌಹೀದ್ ಜಮಾತ್ನ ಉಗ್ರರೇ ಈ ಸ್ಫೋಟಗಳನ್ನೂ ನಡೆಸುವ ಹುನ್ನಾರ ಮಾಡಿದ್ದಾರೆಂದು ಗುಪ್ತಚರ ಎಚ್ಚರಿಸಿದೆ.
ಕೆಲವೇ ದಿನಗಳ ಹಿಂದೆ ಸೈಂತಮುರುತು ಪ್ರದೇಶದಲ್ಲಿ ಶ್ರೀಲಂಕಾ ಪೊಲೀಸರು ದಾಳಿ ನಡೆಸಿದಾಗ ಬೌದ್ಧರ ಉಡುಪುಗಳು ಪತ್ತೆಯಾಗಿದ್ದವು. ಇದು ತನಿಖಾ ಸಂಸ್ಥೆಗಳಿಗೆ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಗಿರಿಯುಲಾ ಎಂಬ ಪ್ರದೇಶದಲ್ಲಿರುವ ಜವುಳಿ ಅಂಗಡಿಯೊಂದರಿಂದ ಮಾರ್ಚ್ 29ರಂದು 9 ಜೊತೆ ಬೌದ್ಧರ ಉಡುಪುಗಳನ್ನು ಖರೀದಿಸಿದ್ದು ತಿಳಿದುಬಂದಿದೆ. ಈ ಉಡುಪುಗಳನ್ನು ಧರಿಸಿಕೊಂಡ ಮಹಿಳೆಯರು ಬೌದ್ಧ ಮಂದಿರಗಳನ್ನು ಪ್ರವೇಶಿಸುವಂತೆ ಮಾಡಿ, ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಹಳೆ ಮುಖ್ಯಸ್ಥರ ವಜಾ, ಹೊಸ ಮುಖ್ಯಸ್ಥರ ನೇಮಕ: ಈಸ್ಟರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಪದವಿಗೆ ರಾಜೀನಾಮೆ ಸಲ್ಲಿಸಲು ನಿರಾಕರಿಸಿದ ಶ್ರೀಲಂಕಾ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಅವರನ್ನು ಶ್ರೀಲಂಕಾ ಅಧ್ಯಕ್ಷರು ಅಮಾನತು ಮಾಡಿದ್ದಾರೆ. ಶ್ರೀಲಂಕಾ ಪೊಲೀಸ್ನ ಉಪ ಮುಖ್ಯಸ್ಥರಾಗಿದ್ದ ಚಂದನ ವಿಕ್ರಮರತ್ನೆ ಅವರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿ ರಾಷ್ಟ್ರಾಧ್ಯಕ್ಷ ಸಿರಿಸೇನಾ ಆದೇಶ ಹೊರಡಿಸಿದ್ದಾರೆ.