ಗೋಡ್ಸೆ ಹೇಳಿಕೆ : ಎಫ್ಐಆರ್ ರದ್ದತಿ ಕೋರಿ ಮಧುರೆ ಪೀಠದ ಮೆಟ್ಟಲೇರಿದ ಕಮಲ ಹಾಸನ್
Team Udayavani, May 15, 2019, 5:34 PM IST
ಚೆನ್ನೈ : ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂಬ ತನ್ನ ವಿವಾದಿತ ಹೇಳಿಕೆಗೆ ಸಂಬಂಧಿಸಿ ಅರವಕುರುಚ್ಚಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಗೊಳಿಸಬೇಕೆಂದು ಕೋರಿ ನಟ, ರಾಜಕಾರಣಿ ಕಮಲ ಹಾಸನ್ ಮದ್ರಾಸ್ ಹೈಕೋರ್ಟಿನ ಮಧುರೆ ಪೀಠದ ಮೆಟ್ಟಲು ಹತ್ತಿದ್ದಾರೆ.
ಈ ವಿವಾದಾತ್ಮಕ ಹೇಳಿಕೆ ಸಂಬಂಧವಾಗಿ ಕಮಲ ಹಾಸನ್ ವಿರುದ್ಧ ದಿಲ್ಲಿಯ ಪಟಿಯಾಲಾ ಹೈಕೋರ್ಟಿನಲ್ಲಿ ಕೂಡ ಕೇಸು ದಾಖಲಾಗಿದೆ.
ಕಮಲ ಹಾಸನ್ ಪರವಾಗಿ ಮದ್ರಾಸ್ ಹೈಕೋರ್ಟಿನ ಮಧುರೆ ಪೀಠಕ್ಕೆ ಸಲ್ಲಿಸಲಾಗಿರುವ ಮನವಿಯಲ್ಲಿ ಎಫ್ಐಆರ್ ರದ್ದು ಪಡಿಸಬೇಕೆಂದೂ ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳಬೇಕೆಂದೂ ಕೋರಲಾಗಿದೆ.
ಆದರೆ ರಜಕಾಲದ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವಂತಿಲ್ಲ ಎಂದು ನ್ಯಾಯಾಧೀಶರು ಕಮಲ ಹಾಸನ್ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದಕ್ಕೆ ಮೊದಲು ಬಿಜೆಪಿಯ ಅಶ್ವಿನಿ ಉಪಾಧ್ಯ ಅವರು ಕಮಲ ಹಾಸನ್ ಅವರ ಗೋಡ್ಸೆ ಹೇಳಿಕೆ ಬಗ್ಗೆ ದಿಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಆದರೆ ಇದು ತನ್ನ ಅಧಿಕಾರದ ಭೂವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಿ ಅರ್ಜಿಯ ವಿಚಾರಣೆ ನಿರಾಕರಿಸಿತು.