ಅಸಮರ್ಪಕ ಚರಂಡಿಯಿಂದಾಗಿ ಕಲುಷಿತಗೊಳ್ಳುತ್ತಿದೆ ಬಾವಿ ನೀರು
Team Udayavani, May 19, 2019, 6:10 AM IST
ಕಾರ್ಕಳ: ಚರಂಡಿ ನಿರ್ವಹಣೆಯಿಲ್ಲದ ಕಾರಣ ಪಕ್ಕದ ಬಾವಿ ನೀರು ಕಲುಷಿತವಾಗುತ್ತಿರುವ ದುಃಸ್ಥಿತಿ ಬಂಗ್ಲೆಗುಡ್ಡೆಯಲ್ಲಿ ನಿರ್ಮಾಣವಾಗಿದೆ. ಚರಂಡಿಯ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗದೇ ಭೂಮಿ ಸೇರುವಂತಾಗಿದ್ದು, ಮಲಿನ ನೀರು ಬಾವಿ ಸೇರುತ್ತಿದೆ. ಸ್ಥಳೀಯ ನಾಗರಿಕರು ಕುಡಿಯುವ ನೀರಿಗಾಗಿ ಇಲ್ಲಿನ ಬಾವಿಯನ್ನೇ ಅವಲಂಬಿಸಿದ್ದು, ಇದೀಗ ಬಾವಿ ನೀರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.
ರೋಗದ ಭೀತಿ
ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯಲು ಬಿಡುವುದರಿಂದ ಪರಿಸರ ಪೂರ್ತಿ ಗಬ್ಬುನಾತ ಬೀರುತ್ತಿದೆ. ಸೊಳ್ಳೆ ಉತ್ಪಾದನಾ ತಾಣವಾಗಿಯೂ ಮಾರ್ಪಡಾಗಿದೆ. ಸೊಳ್ಳೆ ಕಾಟ ರೋಗ ಹರಡುವ ಭೀತಿ ಸƒಷ್ಟಿಸಿದೆ. ಆದರೂ ಕ್ರಿಮಿನಾಶಕ ಸಿಂಪಡಿಸುವ ಕಾರ್ಯಕ್ಕೆ ಕಾರ್ಕಳ ಪುರಸಭೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚಪ್ಪಡಿ ಅಳವಡಿಸಿಲ್ಲ
ಚರಂಡಿಗೆ ಹಾಸು ಅಳವಡಿಸದೇ ಇರುವುದು ಕೂಡ ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇರುವುದರಿಂದ ಪೋಷಕರು ಆತಂಕಗೊಂಡು ಮಕ್ಕಳನ್ನು ಅಂಗನವಾಡಿ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.