ಮನೆ, ಬಾವಿ ಕುಸಿತ, ಮನೆಗೆ ನುಗ್ಗಿದ ಮಲಿನ ನೀರು
ವಿರಾಮ ನೀಡಿದ ಮಳೆ
Team Udayavani, Jul 26, 2019, 5:08 AM IST
ಕಾಸರಗೋಡು: ಕಳೆದ ಆರು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಕ್ಷೀಣಿಸಿದ್ದು, ಗುರುವಾರ ಬೆಳಗ್ಗಿನಿಂದ ಮಳೆ ಸುರಿದಿಲ್ಲ. ಬಿಸಿಲು ಗೋಚರಿಸಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ, ಬಾವಿ ಕುಸಿದಿದ್ದು, ಮನೆಯೊಂದಕ್ಕೆ ಮಲಿನ ನೀರು ನುಗ್ಗಿದೆ.
ಬೆದ್ರಡ್ಕದ ಪೆರಿಯಡ್ಕ-ಕೆಲ್ ರಸ್ತೆ ಬದಿಯ ನಿವಾಸಿ ಸುನಿಲ್ ಕುಮಾರ್ ಅವರ ಮನೆಗೆ ಮಲಿನ ನೀರು ನುಗ್ಗಿದೆ. ಬಾವಿಗೂ ಸೇರಿದ್ದು ನೀರು ಬಳಸ ದಂತಾಗಿದೆ. ಕಾಸರಗೋಡು ನಗರದ ಬೀರಂತಬೈಲ್ನಲ್ಲಿ ದಿನೇಶ್ ಅವರ ಮನೆಯ ಬಾವಿ ಕುಸಿದು ಬಿದ್ದಿದ್ದು, ಮನೆಗೂ ಅಪಾಯ ಎದುರಾಗಿದೆ.
ಪೆರ್ಮುದೆ-ಧರ್ಮತ್ತಡ್ಕ ರಸ್ತೆ ಬಾಳಿಕೆಯಲ್ಲಿ ತೋಡಿನ ಬದಿ ಕುಸಿದು ಬಿದ್ದಿದ್ದು, ರಸ್ತೆ ಅಪಾಯದಲ್ಲಿದೆ. ರಸ್ತೆಯ ಬದಿಯಲ್ಲಿ ರಕ್ಷಣೆಗಾಗಿ ನಿರ್ಮಿಸಿದ ಕಬ್ಬಿಣದ ಬೇಲಿ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಲ್ಲಿದೆ.
ನೀರಲ್ಲಿ ಮುಳುಗಿದ ರಸ್ತೆ
ಮಂಗಲ್ಪಾಡಿ ಪಂ.ನ ಶಿರಿಯದಿಂದ ವಾನಂದೆ, ವೀರನಗರ ಪ್ರದೇಶ ಸಂಪರ್ಕಿ ಸುವ ರಸ್ತೆಯ ಅಂಬಟೆ ಕುದಿಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆ ಯಲ್ಲಿ ವ್ಯಾಪಕ ನೀರು ತುಂಬಿರುವು ದರಿಂದ ವಿದ್ಯಾರ್ಥಿ ಗಳ ಸಹಿತ ಪರಿಸರ ನಿವಾಸಿ ಗಳಿಗೆ, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕರಿಂಬಿಲಕ್ಕೆ ಜಿಲ್ಲಾಧಿಕಾರಿ ಭೇಟಿ
ರಸ್ತೆಗೆ ಗುಡ್ಡ ಜರಿದು ಬಿದ್ದು ವಾಹನ ಸಂಚಾರ ಮೊಟಕುಗೊಂಡಿರುವ ಬದಿಯಡ್ಕ ಬಳಿಯ ಕರಿಂಬಿಲಕ್ಕೆ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ|ಡಿ.ಸಜಿತ್ಬಾಬು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಲೋಕೋಪಯೋಗಿ ಇಲಾಖೆ, ಕೆಎಸ್ಇಬಿ ಅಧಿಕಾರಿಗಳು, ಗುತ್ತಿಗೆದಾರರು ಮೊದಲಾದವರು ಜೊತೆಗಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯತ್ ಸದಸ್ಯ ಅವಿನಾಶ್ ರೈ, ವಾರ್ಡ್ ಸದಸ್ಯ ವಿಶ್ವನಾಥ ಪ್ರಭು ಹಾಗು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದು, ಸಮಸ್ಯೆಗೆ ತುರ್ತು ಪರಿಹಾರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಮಸ್ಯೆ ಪರಿಹರಿಸಲು ಆಗ್ರಹ
ಕರಿಂಬಿಲದಲ್ಲಿ ಗುಡ್ಡೆ ಕುಸಿದು ಉಂಟಾದ ಸಾರಿಗೆ ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದ್ದು ಈ ಸ್ಥಿತಿಗೆ ಕಾರಣವಾಗಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಗುಡ್ಡ ಕುಸಿತದಿಂದಾಗಿ ಈ ದಾರಿಯಲ್ಲಿ 2 ದಿನಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಶಾಲಾ ವಿದ್ಯಾರ್ಥಿ ಗಳ ಸಹಿತ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿ ಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ ಎಂದು ಶ್ರೀಕಾಂತ್ ಹೇಳಿದ್ದಾರೆ.