ನನ್ನದು ಶ್ರೀರಾಮನ ರಘುವಂಶ ಎಂದ ಸಂಸದೆ
ಸುಪ್ರೀಂ ಕೋರ್ಟ್ ಬಯಸಿದರೆ ದಾಖಲೆ ನೀಡಲು ಸಿದ್ಧ ಎಂದ ದಿವ್ಯ ಕುಮಾರಿ
Team Udayavani, Aug 11, 2019, 11:54 PM IST
ಜೈಪುರ: ರಾಜಸ್ಥಾನದ ರಾಜ್ಸಮಂಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ದಿವ್ಯ ಕುಮಾರಿ ತಾನು ರಾಮನ ವಂಶಸ್ಥೆ ಎಂದು ಹೇಳಿದ್ದಾರೆ. ತಮ್ಮದ್ದು ರಘುವಂಶವಾಗಿದ್ದು, ನಮ್ಮ ಕುಟುಂಬ ಅಯೋಧ್ಯೆಯಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ಈಗ ದೇಶದ ಗಮನ ಸೆಳೆದಿದೆ. ಅಯೋಧ್ಯೆ ಕುರಿತ ಪ್ರಕರಣಗಳು ಕೋರ್ಟ್ನಲ್ಲಿರ ಬೇಕಾದರೆ ಸಂಸದೆಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನನ್ನದು ಶ್ರೀರಾಮ ಚಂದ್ರನ ರಘುವಂಶ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಸುಪ್ರೀಂ ಕೋರ್ಟ್ ಬಯಸಿದರೆ ಕೋರ್ಟ್ ಗೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ನನ್ನ ತಂದೆ ರಾಮನ 309ನೇ ತಲೆಮಾರು. ನಾವು ರಾಮನ ಪುತ್ರ ಕುಶನ ಕುಟುಂಬವಾಗಿದ್ದು, “ಕುಶ್ವಾಹಾ’ ಅಥವ ‘ಕುಚ್ಚವಾ’ ವರ್ಗ (ಕ್ಲಾನ್) ಕ್ಕೆ ಸೇರಿದ ಕುಟುಂಬ ನಮ್ಮದು ಎಂದು ಅವರು “ಇಂಡಿಯಾ ಟುಡೆ’ಗೆ ಹೇಳಿದ್ದಾರೆ.
ಸರ್ವೋಚ್ಚನ್ಯಾಯಾಲಯದಲ್ಲಿ ವಿವಾದಿತ ರಾಮ ಜನ್ಮ ಭೂಮಿ ಕುರಿತ ಪ್ರಕರಣದ ವಿಚಾರಣೆಗಳು ನಡೆಯುತ್ತಿದೆ. ಈ ವೇಳೆ ಸಂಸದೆಯ ಈ ಹೇಳಿಕೆ ತಿರುವು ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಈ ಸಂಬಂಧ ನ್ಯಾಯಪೀಠ ವಿಚಾರಣೆ ಸಂದರ್ಭ ಅಯೋಧ್ಯೆಯಲ್ಲಿಯೇ ಶ್ರೀರಾಮ ಚಂದ್ರ ಹುಟ್ಟಿದ್ದನೇ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಇದನ್ನು ರಂಜನ್ ಗೋಗೋಯಿ ಅವರು ಹಿರಿಯ ವಕೀಲ ಪ್ರಸನ್ನ ಅವರಲ್ಲಿ ಕೇಳಿದ್ದರು. ಆಗ ಅವರು ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಈಗ ಅಯೋಧ್ಯೆ ಸುತ್ತಮುತ್ತ ರಘು ವಂಶದ ಯಾರಾದರೂ ಸಿಗುತ್ತಾರೆಯೇ ಎಂದು ನಾವು ಹುಡುಕುತ್ತಿದ್ದೇವೆ ಎಂದು ಪೀಠ ಹೇಳಿತ್ತು. ಈ ಮಧ್ಯೆ ಸಂಸದೆ ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ.