ಶಾಸ್ತ್ರೀಯ ಸಂಗೀತ ಅನಂತವಾದುದು: ಚಿನ್ನಾ
Team Udayavani, Aug 27, 2019, 5:55 AM IST
ಕಾಸರಗೋಡು : ಸಂಗೀತದ ಆಳವನ್ನು ತಿಳಿಯಲು ಒಂದು ಜನ್ಮ ಸಾಲದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಶಾಸ್ತ್ರೀಯ ಸಂಗೀತ ಅನಂತವಾದುದು. ಸಂಗೀತ ಒಲಿಯಬೇಕಾದರೆ ನಿರಂತರ ಅಭ್ಯಾಸ, ಶ್ರದ್ಧೆ, ತ್ಯಾಗ, ಅಚಲವಾದ ವಿಶ್ವಾಸ, ಮನೋಬಲ ಬೇಕಾಗುತ್ತದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಹೇಳಿದರು.
ವಿದ್ಯಾನಗರದ ಚಿನ್ಮಯ ಕಾಲನಿಯಲ್ಲಿ ರುವ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಆಶ್ರಯದಲ್ಲಿ ಕಾಸರಗೋಡು ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ನಲ್ಲಿ ಆಯೋಜಿಸಿದ ಶ್ರಾವಣ ಸಂಧ್ಯಾ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ. ಇತ್ತೀಚೆಗೆ ಸಂಗೀತ ಚಿಕಿತ್ಸೆ ಕೂಡ ಆರಂಭ ಗೊಂಡಿದ್ದು, ಹಲವು ಕಾಯಿಲೆಗಳು ಸಂಗೀತ ದಿಂದ ವಾಸಿ ಮಾಡಿದ ಉದಾಹರಣೆ ಗಳು ಇವೆ. ಕಾಸರಗೋಡಿನಲ್ಲಿ ಸಂಗೀತ ಪರಂಪರೆಯೇ ಇದೆ. ಆದರೆ ಕಾಸರ ಗೋಡಿನ ಸಂಗೀತ ಕಲಾವಿದರನ್ನು ಕರ್ನಾಟಕ-ಕೇರಳ ಸರಕಾರ ಗುರುತಿಸಿಲ್ಲ. ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ ಹಲ ವಾರು ಸಂಗೀತ ಕಲಾವಿದರನ್ನು ಕೊಡುಗೆ ಯಾಗಿ ನೀಡಿದೆ. ಈ ಶಾಲೆ ಸರಸ್ವತಿ ಇರುವ ದೇವಾಲಯವಿದ್ದಂತಿದೆ. ಈ ಶಾಲೆಯ ಶಿಕ್ಷಕಿ ಉಷಾ ಈಶ್ವರ ಭಟ್ ಮತ್ತು ಈಶ್ವರ ಭಟ್ ಅವರು ಸಂಗೀತಕ್ಕೆ ನೀಡಿದ ಕೊಡುಗೆ ಅಪಾರವಾದುದು. ಮುಂದೆಯೂ ಈ ಸಂಸ್ಥೆಯಿಂದ ಇನ್ನಷ್ಟು ಸಂಗೀತ ಕಲಾವಿದರ ಸೃಷ್ಟಿಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಾಹಿತರಾಗಿ ರಜತ ವರ್ಷವನ್ನು ಪೂರೈಸಿದ ಉಷಾ ಈಶ್ವರ ಭಟ್-ಈಶ್ವರ ಭಟ್ ದಂಪತಿಯನ್ನು ಅವರ ಶಿಷ್ಯ ವರ್ಗ ಗೌರವಿಸಿತು.
ಕಾರ್ಯಕ್ರಮದಲ್ಲಿ ಹಿರಿಯ ವೃದಂಗ ವಿದ್ವಾನ್ ಬಾಬು ರೈ, ವಿದ್ವಾನ್ ಪಾಲಾ^ಟ್ ಆರ್. ಸ್ವಾಮಿನಾಥನ್ ಮತ್ತು ವಿದ್ವಾನ್ ಚೇರ್ತಲ ಎಸ್. ದಿನೇಶ್ ಉಪಸ್ಥಿತರಿದ್ದರು. ಸತ್ಯನಾರಾಯಣ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಈಶ್ವರ ಭಟ್ ವಂದಿಸಿದರು.
ಬಳಿಕ ಪಾಲಾ^ಟ್ನ ಚೆಂಬೈ ಮೆಮೋರಿ ಯಲ್ ಸರಕಾರಿ ಮ್ಯೂಸಿಕ್ ಕಾಲೇಜಿನ ಪ್ರಾಧ್ಯಾಪಕ ವಿವೇಕ್ ಮೂಝಿಕುಲಂ ಅವರಿಂದ ಸಂಗೀತ ಕಛೇರಿ ನಡೆಯಿತು. ಸ್ವಾಮೀನಾಥನ್ ವಯಲಿನ್ನಲ್ಲಿ, ಚೇರ್ತಲ ಎಸ್.ದಿನೇಶ್ ಮೃದಂಗದಲ್ಲಿ, ವೆಳ್ಳಿಕೋತ್ ಪಿ.ರಾಜೀವ್ಗೋಪಾಲ್ ಮೋರ್ಸಿಂಗ್ನಲ್ಲಿ ಸಹಕರಿಸಿದರು.