ನನ್ನ ಅನ್ನದಾತರನ್ನು ಕೆಣಕದಿರಿ: ದರ್ಶನ್ ಖಡಕ್ ವಾರ್ನಿಂಗ್
ಅಭಿಮಾನಿಗಳ ಮೇಲೆ ಆರೋಪ ಬಂದ ಹಿನ್ನೆಲೆ
Team Udayavani, Sep 18, 2019, 3:03 AM IST
ಸದ್ಯ ಕನ್ನಡ ಚಿತ್ರರಂಗದಲ್ಲಿ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ವಾರ್ ಜೋರಾಗಿ ನಡೆಯುತ್ತಿದೆ. ಅದು ಬೇರಾರು ಅಲ್ಲ, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ. ಕಳೆದ ಒಂದೆರಡು ವರ್ಷಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಫ್ಯಾನ್ಸ್ವಾರ್ ಈಗ ನೇರಾನೇರ ಅಖಾಡಕ್ಕಿಳಿದು, ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಬಾರಿ ದರ್ಶನ್ ಫ್ಯಾನ್ಸ್ ಕೆರಳಲು ಕಾರಣ, ಅವರ ಮೇಲೆ ಕೇಳಿಬಂದ ಆರೋಪ. “ಪೈಲ್ವಾನ್’ ಚಿತ್ರದ ನೆಗೆಟಿವ್ ಪ್ರಚಾರಕ್ಕೆ ಹಾಗೂ ಚಿತ್ರ ಪೈರಸಿಯಾಗಲು ದರ್ಶನ್ ಅಭಿಮಾನಿಗಳು ಕಾರಣ ಎಂಬಂತೆ ಕೆಲವರು ಬಿಂಬಿಸುತ್ತಿದ್ದಾರೆ.
ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಈ ಬಗ್ಗೆ ದರ್ಶನ್ ಫ್ಯಾನ್ಸ್ ಟ್ವೀಟ್ ಮಾಡಿ, ಸ್ಪಷ್ಟನೆ ಕೂಡಾ ಕೊಟ್ಟಿದ್ದರು.”ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಅಂದ ಮಾತ್ರಕ್ಕೆ ಅವರೇ ಮಾಡಿಸಿದ್ದು ಅಂತಲ್ಲ ಅಥವಾ ಅವರಿಗೆ ಸಂಬಂಧ ಪಟ್ಟವರು ಮಾಡಿದ್ದು ಅಂತಲ್ಲ , ನಿಜವಾದ ಕಳ್ಳರನ್ನು ಹಿಡಿಯಿರಿ , ಆಮೇಲೆ ಇನ್ನೊಬರ ಕಡೆ ಬೆರಳು ಮಾಡಿ ತೋರಿಸಿ …’ ಎಂದಿದ್ದರು. ಈಗ ಸ್ವತಃ ದರ್ಶನ್ ಅಖಾಡಕ್ಕಿಳಿದ್ದು, ಅಭಿಮಾನಿಗಳ ಪರ ನಿಂತಿದ್ದಾರೆ.
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ ?
— Darshan Thoogudeepa (@dasadarshan) September 17, 2019
ಸದ್ಯದ ಫ್ಯಾನ್ಸ್ ವಾರ್ ಅನ್ನು ಗಮನಿಸಿರುವ ದರ್ಶನ್ ಮಂಗಳವಾರ ಮಾಡಿರುವ ಟ್ವೀಟ್ವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ತಮ್ಮ ಅಭಿಮಾನಿಗಳ ಪರವಾಗಿ, “ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು-ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಟ್ವೀಟ್ ಇಬ್ಬರು ಸ್ಟಾರ್ ನಟರ ಹಾಗೂ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಫ್ಯಾನ್ಸ್ವಾರ್ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.