ಸವದಿಗೆ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿಗೆ ಸಪೋರ್ಟ್ ಇಲ್ಲ: ಬೆಂಬಲಿಗರ ಹೈಡ್ರಾಮಾ
Team Udayavani, Nov 17, 2019, 3:48 PM IST
ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಈಗಿರುವ ಬಿಜೆಪಿ ಅಭ್ಯರ್ಥಿ ಕುಮಟಳ್ಳಿಯನ್ನು ಬೆಂಬಲಿಸದಿರಲು ನಿರ್ಧರಿಸಿ ಸವದಿ ನಿವಾಸದ ಎದುರು ಹೈಡ್ರಾಮಾ ನಡೆಸಿದರು.
ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿನಿಂದ ಅಥಣಿಗೆ ಬಂದಿಳಿಯುತ್ತಿದ್ದಂತೆ ರವಿವಾರ ಅವರ ನಿವಾಸ ಎದುರು ಜಮಾಯಿಸಿದ ಬೆಂಬಲಿಗರು ಟಿಕೆಟ್ಗಾಗಿ ಪಟ್ಟು ಹಿಡಿದು ಕುಳಿತರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕೂಡ ಸವದಿ ನಿವಾಸದೊಳಗೆ ಇದ್ದರು. ಕುಮಟಳ್ಳಿಗೆ ಟಿಕೆಟ್ ನೀಡಿದ್ದನ್ನು ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ ನಾವು ಬೆಂಬಲಿಸುವುದಿಲ್ಲ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಶೆಟ್ಟರ ಹಾಗೂ ಸವದಿ ಕಾರ್ಯಕರ್ತರ ಮನವೊಲಿಸಿಲೂ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅನೇಕ ವರ್ಷಗಳಿಂದ ಬಿಜೆಪಿಯ ಭದ್ರ ಬುನಾದಿ ಹಾಕಿರುವ ಕ್ಷೇತ್ರದಲ್ಲಿ ಸವದಿಗೆ ಟಿಕೆಟ್ ನೀಡದಿರುವುದು ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವದಿ ಹಾಗೂ ಶೆಟ್ಟರ ಅವರನ್ನು ಹೊರಗೆ ಬಿಡದೇ ಮನೆ ಎದುರೇ ನಿಲ್ಲಿಸಿದರು. ಮನವೊಲಿಸಿ ಅಲ್ಲಿಂದ ಶೆಟ್ಟರ ಹೊರ ಹೋದರು. ಆದರೆ ಸವದಿ ಅವರನ್ನು ಹೊರಗೆ ಬಿಡದಿದ್ಗದಾಗ, ಕಾರ್ಯಕರ್ತರ ಕೈ ಮುಗಿದ ಸವದಿ, ಬಿಡ್ರಪ್ಪಾ ಸಾಕು. ಪಕ್ಷದ ನಿರ್ಧಾರಕ್ಕೆ ತಲೆ ಬಾಗಬೇಕು ಎಂದು ಹೇಳಿ ಹೊರ ನಡೆದರು.