ಹಿಮಾಚಲ ವಿರುದ್ಧ ಹಿನ್ನಡೆ ಕಂಡ ಕರ್ನಾಟಕ
ರಾಜ್ಯ ಬೌಲರ್ಗಳನ್ನು ಕಾಡಿದ ಪ್ರಿಯಾಂಶು, ರಿಷಿ ಧವನ್
Team Udayavani, Dec 26, 2019, 11:28 PM IST
ಮೈಸೂರು: ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಪ್ರವಾಸಿ ಹಿಮಾಚಲ ಪ್ರದೇಶ ತಂಡ ರಣಜಿ ಲೀಗ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ 166ಕ್ಕೆ ಉತ್ತರವಾಗಿ 2ನೇ ದಿನದ ಆಟದ ಅಂತ್ಯಕ್ಕೆ 7 ವಿಕೆಟಿಗೆ 235 ರನ್ ಗಳಿಸಿದೆ.
ಸದ್ಯದ ಮುನ್ನಡೆ 69 ರನ್.
32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹಿಮಾಚಲ ಪ್ರದೇಶ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕುವ ಭೀತಿಗೆ ಸಿಲುಕಿತ್ತು. ಆದರೆ ಗುರುವಾರ ಬ್ಯಾಟಿಂಗ್ ಮುಂದುವರಿಸಿ, ನಿಧಾನ ಗತಿಯ ಆಟವಾಡಿ ರಾಜ್ಯ ಬೌಲರ್ಗಳನ್ನು ಕಾಡಿತು. ಆರಂಭಿಕ ಬ್ಯಾಟ್ಸ್ ಮನ್ ಪ್ರಿಯಾಂಶು ಖಾಂಡೂರಿ (69) ಹಾಗೂ ನಿಖೀಲ್ ಗಂಗಾr (46) 5ನೇ ವಿಕೆಟಿಗೆ 90 ರನ್ ಜತೆಯಾಟ ನಿರ್ವಹಿಸಿ ತಂಡವನ್ನು ಆತಂಕದಿಂದ ಪಾರು ಮಾಡಿದರು. ಇವರಿಬ್ಬರ ಜತೆಯಾಟವನ್ನು ಜೆ. ಸುಚಿತ್ ಮುರಿದರು. ಅನಂತರ ಕ್ರೀಸ್ ಇಳಿದ ರಿಷಿ ಧವನ್, ಪ್ರಿಯಾಂಶುಗೆ ಉತ್ತಮ ಸಾಥ್ ಕೊಟ್ಟರು. ಇದರಿಂದ ತಂಡ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ರಿಷಿ ಧವನ್ (72) ಹಾಗೂ ಆಕಾಶ್ ವಸಿಷ್ಠ (18) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-166. ಹಿಮಾಚಲ ಪ್ರದೇಶ-7 ವಿಕೆಟಿಗೆ 235 (ರಿಷಿ ಧವನ್ ಬ್ಯಾಟಿಂಗ್ 72, ಪ್ರಿಯಾಂಶು ಖಾಂಡೂರಿ 69, ನಿಖೀಲ್ ಗಂಗಾr 46, ಕೌಶಿಕ್ 48ಕ್ಕೆ 3, ಪ್ರತೀಕ್ 40ಕ್ಕೆ 2).
ರಿಷಿ ಧವನ್ ದಿಟ್ಟ ಬ್ಯಾಟಿಂಗ್
ಪ್ರಿಯಾಂಶು-ನಿಖೀಲ್ ಗಂಗಾr 5ನೇ ವಿಕೆಟಿಗೆ ಕ್ರೀಸ್ ಆಕ್ರಮಿಸಿಕೊಂಡು ತಂಡದ ನೆರವಿಗೆ ನಿಂತರು. ಆರಂಭಿಕ ಪ್ರಿಯಾಂಶು 240 ಎಸೆತಗಳನ್ನು ತಡೆದು ನಿಂತರು (8 ಬೌಂಡರಿ). ನಿಖೀಲ್ ಆಟವೂ ಎಚ್ಚರಿಕೆಯಿಂದ ಕೂಡಿತ್ತು. ಅವರ 46 ರನ್ 103 ಎಸೆತಗಳಿಂದ ದಾಖಲಾಯಿತು (5 ಬೌಂಡರಿ, 1 ಸಿಕ್ಸರ್).
ರಿಷಿ ಧವನ್ ಬ್ಯಾಟಿಂಗ್ ಸ್ಫೋಟಕವಾಗಿತ್ತು. 96 ಎಸೆತ ಎದುರಿಸಿರುವ ಧವನ್ 7 ಬೌಂಡರಿ, 3 ಸಿಕ್ಸರ್ ಸಿಡಿಸುವ ಮೂಲಕ ರಾಜ್ಯಕ್ಕೆ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಉಳಿದ 3 ವಿಕೆಟ್ಗಳನ್ನು ಬೇಗನೇ ಉರುಳಿಸಿ ದೊಡ್ಡ ಮೊತ್ತ ಪೇರಿಸಿದರಷ್ಟೇ ಕರ್ನಾಟಕ ಮೇಲುಗೈ ಸಾಧಿಸೀತು.ಕರ್ನಾಟಕ ಪರ ವಿ. ಕೌಶಿಕ್ 3, ಪ್ರತೀಕ್ ಜೈನ್ 2 ವಿಕೆಟ್ ಉರುಳಿಸಿದ್ದಾರೆ.