ಗಬ್ಬೂರು ತಾಲೂಕು ಕೇಂದ್ರಕ್ಕಾಗಿ ಜಾಥಾ
Team Udayavani, Mar 1, 2020, 4:32 PM IST
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರನ್ನು ಹೊಸ ತಾಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗಬ್ಬೂರು ತಾಲೂಕು ರಚನೆ ಹೋರಾಟ ಸಮಿತಿ ಸದಸ್ಯರು ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಗಬ್ಬೂರಿನಲ್ಲಿ ಶುಕ್ರವಾರ ಜಾಥಾ ಆರಂಭಿಸಿದ ಸದಸ್ಯರು, ಶನಿವಾರ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಗಬ್ಬೂರು ಈ ಭಾಗದಲ್ಲೇ ದೊಡ್ಡ ಹೋಬಳಿಯಾಗಿದೆ. ವಾಣಿಜ್ಯಿಕವಾಗಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದೆ. ಸುತ್ತಲಿನ ಹತ್ತಾರು ಹಳ್ಳಿಗಳ ಜನತೆ ವ್ಯಾಪಾರ ವಹಿವಾಟಿಗೆ ಇದೇ ಗ್ರಾಮವನ್ನು ಅವಲಂಬಿಸಿದ್ದಾರೆ. ಈ ಹೋಬಳಿ 60ಕ್ಕೂ ಅಧಿಕ ಹಳ್ಳಿಗಳನ್ನು ಒಳಗೊಂಡಿದೆ. ನಾಡ ಕಚೇರಿ, ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪಶು ಆಸ್ಪತ್ರೆ, ಸಹಕಾರ ಸಂಘಗಳು, ವಾಣಿಜ್ಯ ಕೇಂದ್ರಗಳು, ನೀರಾವರಿ ಪ್ರದೇಶ, ಪೊಲೀಸ್ ಠಾಣೆ, ಶಾಲಾ ಕಾಲೇಜುಗಳು ಸೇರಿ ಎಲ್ಲ ಸೌಲಭ್ಯಗಳಿದ್ದು, ತಾಲೂಕು ಕೇಂದ್ರ ರಚಿಸಲು ಸೂಕ್ತವಾಗಿದೆ ಎಂದು ವಿವರಿಸಿದರು.
ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಸಾರಿಗೆ ಸೌಕರ್ಯ ಅನುಕೂಲಕರವಾಗಿದೆ. ಆದರೆ, ಕೆಲ ರಾಜಕೀಯ ಶಕ್ತಿಗಳು ಇನ್ನೂ ಅಭಿವೃದ್ಧಿ ಹೊಂದಿರದ ಗ್ರಾಮವನ್ನು ತಾಲೂಕು ಕೇಂದ್ರ ಮಾಡಲು ಮುಂದಾಗಿದ್ದು, ಇದರಿಂದ ಈ ಭಾಗದ ಜನರಿಗೆ ಅನನುಕೂಲವಾಗಲಿದೆ ಎಂದು ದೂರಿದರು. ಹೋರಾಟ ಸಮಿತಿ ಮುಖಂಡರಾದ ಮಲ್ಲಪ್ಪಗೌಡ ಮಾಲಿಪಾಟೀಲ, ಬಂದಯ್ಯಸ್ವಾಮಿ ಹಿರೇಮಠ, ಬೂದಯ್ಯಸ್ವಾಮಿ, ಶಾಂತಕುಮಾರ, ಚೆನ್ನಪ್ಪಗೌಡ ಕಾತರಕಿ, ರಾಮಣ್ಣಕುಣಿ, ಶಿವರಾಜ, ನರಸಪ್ಪ, ರಾಜಪ್ಪ, ಪ್ರಭಾಕರ ಪಾಟೀಲ, ಸಿದ್ದಣ್ಣ, ಮಹೆಬೂಬ್, ಶಿವಣ್ಣ, ಶಂಕರಗೌಡ, ಮರೆಪ್ಪ, ಉಮ್ಮಣ ನಾಯಕ, ಹೊನ್ನಪ್ಪಗೌಡ ಬಸವರಾಜ, ಮಹೇಶ, ಗೋಪಾಲ, ಪ್ರಭಾಕರ ಪಾಟೀಲ, ಮಲ್ಲಣ್ಣ, ಮಹೆಬೂಬ್, ಸೇರಿದಂತೆ ಗ್ರಾಮದ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.