ಮಹದಾಯಿ ಯೋಜನೆ ಆರಂಭಕ್ಕೆ ಮನವಿ
Team Udayavani, Mar 2, 2020, 11:02 AM IST
ಹುಬ್ಬಳ್ಳಿ: ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣವೇ ಬಜೆಟ್ ನಲ್ಲಿ ಹಣ ಮೀಸಲಿರಿಸಿ ಕಾರ್ಯಾರಂಭ ಮಾಡಬೇಕೆಂದು ನವಲಗುಂದದ ಮಲಪ್ರಭಾ-ಮಹದಾಯಿ-ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿಯು ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಆಗ್ರಹಿಸಿತು.
ನಗರದಲ್ಲಿ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ಕೆರೆ ಭಾಗ್ಯ ಯೋಜನೆ ಮುಂದುವರಿಸಬೇಕು. ಅನುಗಾರರಿಗೆ ಗೌರವಧನ ನೀಡಬೇಕು. ಆರ್ಟಿಜಿಎಸ್ ಮಾಡಿದ ಕೂಡಲೇ ಉಪಕರಣಗಳು ರೈತರಿಗೆ ತಕ್ಷಣ ಸಿಗುವಂತಾಗಬೇಕು. ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ದುಪ್ಪಟ್ಟು ಹಣ ಬಿಡುಗಡೆಗೊಳಿಸಬೇಕು. ನವಲಗುಂದದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಖರೀದಿ ಕೇಂದ್ರದಲ್ಲಿ ಕಡ್ಲಿಯನ್ನು 20 ಕ್ವಿಂಟಲ್ ಖರೀದಿಸಬೇಕು. ಗೋವಿನಜೋಳದಬೆಂಬಲ ಬೆಲೆಗೆ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದರು.
ಸುಭಾಸಚಂದ್ರಗೌಡ ಪಾಟೀಲ, ಮಲ್ಲೇಶ ಪತ್ತಾರ, ರಘುನಾಥ ನಡುವಿನಮನಿ, ಮಲ್ಲಪ್ಪ ಬನಗೊಣ್ಣವರ, ಸಂಗಪ್ಪ ನಿಡುವಣಿ, ಸಿದ್ದಲಿಂಗಪ್ಪ ಹಳ್ಳದ ಇದ್ದರು.
ರತ್ನಭಾರತ ರೈತ ಸಮಾಜ: ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. ರೈತರಿಗೆ ಪ್ರತಿ ಹೆಕ್ಟೇರ್ಗೆ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಮಹದಾಯಿ ಯೋಜನೆ ಕಾಮಗಾರಿಗೆ 2 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ರಾಜ್ಯ ರತ್ನಭಾರತ ರೈತ ಸಮಾಜದ ರಾಜ್ಯ ಹಿರಿಯ ಗೌರವಾಧ್ಯಕ್ಷ ಹೇಮನಗೌಡ ಬಸನಗೌಡ್ರ, ವೀರಣ್ಣ ಮಳಗಿ, ವಿ.ಎಸ್. ಪಾಟೀಲ, ಕೆ.ಎಫ್. ಹಿರೇಮಠ, ಎಸ್.ವಿ. ಉಮರಾಣಿ ಮೊದಲಾದವರು ಸಚಿವರನ್ನು ಆಗ್ರಹಿಸಿದರು.