ಬಜೆಟ್ನಲ್ಲಿ ಕೃಷಿ, ನೀರಾವರಿಗೆ ಆದ್ಯತೆ
Team Udayavani, Mar 3, 2020, 3:09 AM IST
ವಿಧಾನಸಭೆ: ರಾಜ್ಯ ಸರ್ಕಾರವು ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದ್ದು, ಏಳು ತಿಂಗಳಲ್ಲಿ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನೀರಾವರಿ ಹಾಗೂ ಕೃಷಿಗೆ ಹೆಚ್ಚು ಒತ್ತು ನೀಡಲಿದ್ದು ಮುಂದಿನ ಬಜೆಟ್ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಕೃಷಿ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಿಸಲಾಗಿರುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಆದರೆ, ನಮ್ಮ ಸರ್ಕಾರದ ನಿಲುವು ಗಟ್ಟಿಯಾಗಿದ್ದು ಮಹಾಜನ್ ವರದಿ ಅಂತಿಮ. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚೂ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಆದ್ಯತೆ ನೀಡಲಿದೆ ಎಂದರು.
ಕೇಂದ್ರ ಸರ್ಕಾರ ಕೃಷಿಗೆ 2.83 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, 20 ಲಕ್ಷ ಸೌರ ಐಪಿ ಸೆಟ್ ವಿತರಣೆ ಘೋಷಣೆ ಮಾಡಲಾಗಿದೆ. ಕ್ಷಾಮ ಅನುಭವಿಸುತ್ತಿರುವ ಕಡೆ ಅಭಿವೃದ್ಧಿಗೆ ಹಣ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು ಇದರಿಂದ ರಾಜ್ಯಕ್ಕೂ ಲಾಭವಾಗಲಿದೆ ಎಂದು ಹೇಳಿದರು.
ಸಮರ್ಪಕ ನಿರ್ವಹಣೆ: ರಾಜ್ಯ ಸರ್ಕಾರವು ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಣೆ ಮಾಡಿದ್ದು, ಪ್ರವಾಹ ಉಂಟಾದಾಗ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿದೆ. ಇಷ್ಟಾದರೂ ನರೇಂದ್ರ ಮೋದಿ ಬರಲಿಲ್ಲ ಎಂಬುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಪ್ರವಾಹದಲ್ಲಿ ಮುಳುಗಡೆಯಾದ ಹಳ್ಳಿಗಳನ್ನು ಸ್ಥಳಾಂತರಿಸಲು ಹೊಸ ಕಾಲೋನಿ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರವು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅಡಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಆಯಾ ಇಲಾಖೆಗಳ ಮೂಲಕ ಈ ವರೆಗೆ ಪರಿಹಾರ ಕಾರ್ಯಗಳಿಗೆ 4413 ಕೋಟಿ ರೂ. ಬಿಡುಗಡೆ ಮಾಡಿದ್ದು 3338 ಕೋಟಿ ರೂ. ವೆಚ್ಚವಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ಥಿ ಹಾಗೂ ಪುನರ್ ನಿರ್ಮಾಣಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆರೆಗಳ ದುರಸ್ಥಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 449.58 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣ ರಸ್ತೆ ದುರಸ್ಥಿಗೆ 447.42 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಹೂಡಿಕೆ ಚೇತರಿಗೆ ವಿಶ್ವಾಸ: ದಾವೋಸ್ ಭೇಟಿ ಫಲಪ್ರದವಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆ ದಾರರು ಸಾಲು ಸಾಲಾಗಿ ಬರಲಿದ್ದಾರೆ. ಹುಬ್ಬಳ್ಳಿ ಯಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶ ಉತ್ತರ ಕರ್ನಾಟಕದಲ್ಲಿ 70 ಸಾವಿರ ಕೋಟಿ ಬಂಡವಾಳ ಬರುವಂತೆ ಮಾಡಿದೆ.
ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪಾರ್ಕ್ ಮುಂದಿನ ದಿನಗಳಲ್ಲಿ ರಾಜ್ಯದ ಅತಿ ದೊಡ್ಡ ಔಷಧಿ ಮತ್ತು ಆವೃತ್ತಿಗಳು ಸಲಕರಣೆಗಳ ಕೇಂದ್ರವಾಗಿ ಪರಿಣಮಿಸಲಿದೆ. ಇದರಿಂದ ಆ ಭಾಗದ ಯುವಕರಿಗೆ ಕೆಲಸ ಸಿಗುವುದು , ಅಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಬರೀ ನಾಮ ಬದಲಾವಣೆ ಅಲ್ಲ. ಇದರಿಂದ 370 ಜೆ ಕಲಂ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಹಾಯವಾಗಲಿದೆ. ಬೀದರ್, ಕಲಬುರಗಿ ವಿಮಾನ ನಿಲ್ದಾಣ ಸೇವೆ ಆರಂಭವು ಆ ಭಾಗದ ಆರ್ಥಿಕ ಅಭಿವೃದ್ಧಿಗೆ ವರದಾನವಾಗಿದೆ.
ಹೂಡಿಕೆದಾರರು ಆ ಭಾಗಕ್ಕೆ ಬರುವ ನಿರೀಕ್ಷೆಯಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳನ್ನು ಅತಿಕ್ರಮಣ ಮಾಡಿ ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 10 ಸಾವಿರ ಹಕ್ಕು ಪತ್ರ ನೀಡಿ ಸಕ್ರಮಗೊಳಿಸಲಾಗಿದೆ ಎಂದು ಹೇಳಿದರು.
ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸಿ ಅವರ ಜೀವನ ಸುಗಮಗೊಳಿಸುವ ಜನಸೇವಕ್ ಯೋಜನೆ ಟಿ. ದಾಸರಹಳ್ಳಿ ಕ್ಷೇತ್ರದಲ್ಲಿ ಪ್ರಾರಂಭಿಸಿ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಕ್ಷೇತ್ರಗಳಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಕೆಲವು ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದಿದ್ದಾರೆ ಎಂಬ ನಿಲುವು ತಳೆದಿದ್ದಾರೆ. ಆದರೆ, ಹಣಕಾಸಿನ ಶಿಸ್ತು ಪಾಲಿಸಲು ಈ ರೀತಿಯ ಕಾರ್ಯ ಅನಿವಾರ್ಯವಾಗಿದೆ. ಹಂತ ಹಂತವಾಗಿ ತಡೆ ಹಿಡಿದ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ನೇಕಾರರ 98.29 ಕೋಟಿ ರೂ. ಮನ್ನಾ: ರಾಜ್ಯದಲ್ಲಿ 23 ಸಾವಿರಕ್ಕೂ ಹೆಚ್ಚು ಮೀನುಗಾರರ 50 ಸಾವಿರ ರೂ. ಸಾಲ ಮನ್ನಾ ಮಾಡಲಾಗಿದೆ. ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಮೀನುಗಾರರಿಗೂ ವಿಸ್ತರಿಸಿದೆ. ರಾಜ್ಯದ ಸುಮಾರು 25 ಸಾವಿರ ಮೀನುಗಾರರಿಗೆ ಈ ಸೌಲಭ್ಯ ಸಿಗಲಿದೆ.
ರಾಜ್ಯ ಸರ್ಕಾರವು ಹಾನಿಗೊಳಗಾದ 330 ದೋಣಿ ಗಳಿಗೆ ತಲಾ 20 ಸಾವಿರ ರೂ., ಹಾನಿಗೊಳಗಾದ 662 ಬಲೆಗಳಿಗೆ ತಲಾ 10 ಸಾವಿರ ರೂ. ನಂತೆ 1.52 ಕೋಟಿ ರೂ. ನೆರವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿದೆ. 29,631 ನೇಕಾರರ 98.29 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಸುವರ್ಣ ಸೌಧ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಹಾಗೂ ಜನರ ಹತ್ತಿರಕ್ಕೆ ಅಧಿಕಾರ ತೆಗೆದುಕೊಂಡು ಹೋಗುವ ದೃಷ್ಟಿಯಿಂದ ಕನಿಷ್ಠ 5-6 ಇಲಾಖೆಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇನೆ.
-ಬಿ.ಎಸ್.ಯಡಿಯೂರಪ್ಪ, ಸಿಎಂ