ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ; ಅಲ್ಪಸಂಖ್ಯಾತ,ದಲಿತ ವಿರೋಧಿಗಳು: ಸಿದ್ದರಾಮಯ್ಯ
Team Udayavani, Mar 8, 2020, 2:54 PM IST
ದಾವಣಗೆರೆ: ನಾನು ಬಿಜೆಪಿ ಸರ್ಕಾರವನ್ನು ದಾರಿದ್ರ್ಯ ಸರ್ಕಾರ ಎಂದು ಕರೆದಿದ್ದೆ. ಇದಕ್ಕೆ ಬಜೆಟ್ ಮೂಲಕ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ ಬಜೆಟ್ ನಲ್ಲಿ ಅದಕ್ಕೆ ಉತ್ತರ ನೀಡಿದ್ದೀರಾ ‘ಮಿಸ್ಟರ್ ಯಡಿಯೂರಪ್ಪ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ್ಕೆ 2500 ಕೋಟಿ ಕೇಳಿದ್ದರು. ಸರ್ಕಾರ ನೀಡಿದ್ದು 1500 ಕೋಟಿ ಮಾತ್ರ. ನಾನು ಸಿಎಂ ಇದ್ದಾಗ ಇಷ್ಟೇ ಹಣವನ್ನು ಕೊಟ್ಟಿದ್ದೆ. ಬಜೆಟ್ ಮಂಡನೆಯ ಮರುದಿನ ನೀರಾವರಿಗೆ ಹತ್ತು ಸಾವಿರ ಕೋಟಿ ಪ್ರಕಟಿಸಿದ್ದಾರೆ. ಅದು ಹೇಗೆ ಸಾಧ್ಯ ? ಇದರಿಂದ ಬಜೆಟ್ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಶಾದಿಭಾಗ್ಯ ರದ್ದು ಆಕ್ರೋಶ
ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲಾ. ಅಲ್ಪ ಸಂಖ್ಯಾತರ ವಿರೋಧಿಗಳು. ದಲಿತರ ವಿರೋಧಿಗಳು. ಇದೇ ಕಾರಣಕ್ಕೆ ಶಾದಿ ಭಾಗ್ಯ ರದ್ದುಮಾಡಲಾಗಿದೆ. ರಾಜ್ಯದಲ್ಲಿ ದಲಿತರಿಗೆ ನೀಡಿದ ಹಣದಲ್ಲಿ ಕಡಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟವಿರೋಧಿ ಅಲ್ಲ
ಬೀದರ್ ಶಾಹೀನ್ ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನ ರಾಷ್ಟ್ರವಿರೋಧಿಯಲ್ಲ. ಅದು ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಇರಲ್ಲ. ಇದನ್ನ ನ್ಯಾಯಾಲಯವೇ ಹೇಳಿದೆ. ಆದರೂ ಅವರನ್ನು ಜೈಲಿಗೆ ಹಾಕಿರುವುದು ತಪ್ಪು ಎಂದರು.
ಪ್ರತ್ಯೇಕ ರಾಜ್ಯದ ಬೇಡಿಕೆ ತಪ್ಪು
ಶಾಸಕ ಉಮೇಶ ಕತ್ತಿ ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಆದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಸೂಕ್ತವಲ್ಲ. ಉತ್ತರ ಕರ್ನಾಟಕದ ಸಲುವಾಗಿ ವಿಧಾನ ಸಭೆ ಹೊರಗೆ-ಒಳಗೆ ಹೋರಾಟ ಮಾಡಲಿ. ಅದು ಬಿಟ್ಟು ಪ್ರತ್ಯೇಕ ರಾಜ್ಯ ಬೇಡಿಕೆ ತಪ್ಪು.
ಜಂಗಮರನ್ನ ಪೂಜ್ಯರು ಎಂದು ಕರೆಯುತ್ತಾರೆ. ಬೇಡ ಜಂಗಮಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ ವಿಳಂಬವಾಗಿದೆ. ಈ ಕುರಿತು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ನಾನು ಯಾವುದೇ ರೀತಿ ಹಸ್ತಕ್ಷೇಪ ಮಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.