“ಕೋವಿಡ್ -19 ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿ: ಕೋಟ
ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರಿಗಳ ಜತೆ ಸಭೆ
Team Udayavani, Apr 24, 2020, 5:51 AM IST
ಮಂಗಳೂರು: ಕೋವಿಡ್ 19 ನಿರ್ವಹಣೆಗೆ ಹಾಗೂ ಲಾಕ್ಡೌನ್ ಯಶಸ್ಸಿಗೆ ತಾಲೂಕು ಪಂಚಾಯತ್ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಜಿ. ಪಂ.ನಲ್ಲಿ ವೀಡಿಯೋ ಕಾನೆ#ರೆನ್ಸ್ ಮೂಲಕ ಜಿಲ್ಲೆಯ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿ ಮಾತನಾಡಿದರು.
ಸ್ಥಳೀಯಾಡಳಿತ ಸಂಸ್ಥೆಗಳು ಕೋವಿಡ್ 19 ನಿರ್ವಹಣೆಗೆ ಸಮರೋಪಾದಿಯಲ್ಲಿ ತೊಡಗಬೇಕು. ಗ್ರಾ.ಪಂ.ಗಳು ಜನರ ಮಧ್ಯೆ ಇರುವುದರಿಂದ ಅಲ್ಲಿನ ಶಂಕಿತ ರೋಗಿಗಳ, ಕೋವಿಡ್ 19 ಪೀಡಿತರ ಜನರ ಎಲ್ಲ ಮಾಹಿತಿ ಇದ್ದು, ಜಾಗೃತ ವ್ಯವಸ್ಥೆಯಲ್ಲಿ ಕೆಲಸ ಮಾಡಿದರೆ, ಕೋವಿಡ್ 19 ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿ ತಾ.ಪಂ., ಗ್ರಾ.ಪಂ. ಪ್ರತಿನಿಧಿಗಳು ಶ್ರಮ ವಹಿಸಿ ದುಡಿಯಬೇಕು ಎಂದು ತಿಳಿಸಿದರು.
ಪ್ರತಿ ಗ್ರಾ.ಪಂ.ಗೆ 20,000 ಅನುದಾನ
ಚರ್ಚೆಯ ಅನಂತರ 14ನೇ ಹಣಕಾಸಿನ ಅನುದಾನದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬೇಕಾದ ಯೋಜನೆ ರೂಪಿಸಲು ಸರಕಾರದ ಅನುಮತಿ ಸಹಿತ, ಕೋವಿಡ್ 19 ಜಾಗೃತಿಗೆ ಪ್ರತಿ ಗ್ರಾ.ಪಂ.ಗೆ 20,000 ರೂ.ಗಳಂತೆ ಅನುದಾನ ನೀಡಲಾಗಿದೆ. ಇದನ್ನು ಯಾವ ರೀತಿ ಖರ್ಚು ಮಾಡಬಹುದು ಎಂಬುದರ ಸಮಗ್ರ ಮಾಹಿತಿ ಪಡೆದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದೆ. ಡೆಂಗ್ಯೂ, ಮಲೇರಿಯಾ, ಇಲಿಜ್ವರ ಮತ್ತಿತರ ಕಾಯಿಲೆಗಳ ಬಗ್ಗೆ ಜಾಗೃತರಾಗಬೇಕು ಎಂದು ಸೂಚಿಸಿದರು.
ಸುಳ್ಯ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಾಲೂಕುಗಳಲ್ಲಿ ನಡೆಯುತ್ತಿರುವ ಕೋವಿಡ್ 19 ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.
ಅಪಾರ್ಟ್ಮೆಂಟ್ಗಳ ಮೂಲಸೌಕರ್ಯ ಸಮೀಕ್ಷೆಗೆ ಸೂಚನೆ
ಜಿಲ್ಲೆಯಾದ್ಯಂತ ಇರುವ ಎಲ್ಲ ವಸತಿ ಸಮುಚ್ಚ ಯಗಳ ಕೊಳಚೆ ನೀರು ತೆರೆದ ಚರಂಡಿ ಯಲ್ಲೇ ಹರಿದು ಸ್ಥಳಿಯರ ಬಾವಿ ಹಾಳಾಗಿದ್ದು, ರೋಗಗಳು ಬರುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ತತ್ಕ್ಷಣ ಸಮೀಕ್ಷೆ ನಡೆಸಿ, ಜಿಲ್ಲೆಯಾದ್ಯಂತ ಇರುವ ವಸತಿ ಸಮುಚ್ಚಯಗಳ ಮೂಲ ಸೌಕರ್ಯಗಳು ಹೇಗಿವೆ ಎಂಬುದರ ಬಗ್ಗೆ ವರದಿ ನೀಡಲು ಸಚಿವರು ನಿರ್ದೇಶಿಸಿದರು.