ಜನರ ಸಹಕಾರದಿಂದ ಕೋವಿಡ್ ಗೆ ಕಡಿವಾಣ
Team Udayavani, May 1, 2020, 4:29 PM IST
ನೆಲಮಂಗಲ: ಕೋವಿಡ್ ಹರಡುವಿಕೆ ದಿನೇ ದಿನೆ ಕಡಿಮೆಯಾಗುತ್ತಿದ್ದು, ಹಸಿರು ವಲಯ ಬರುವ ಸಾಧ್ಯತೆಗಳಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಿಇಒ ನಾಗರಾಜು ಅಭಿಪ್ರಾಯಪಟ್ಟರು. ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ನರೇಗಾ
ಕಾಮಗಾರಿ ಮತ್ತು ಫೀವರ್ ಕ್ಲಿನಿಕ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರ ಸಹಕಾರದಿಂದ ಕೋವಿಡ್ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತ್ಯಾಮಗೊಂಡ್ಲು ಹೋಬಳಿಯಲ್ಲಿ ಲಾಕ್ಡೌನ್ ತುಂಬಾ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ನರೇಗಾ ಕಾಮಗಾರಿಯಲ್ಲಿ ಗುರಿಗಿಂತ ಹೆಚ್ಚು ಕೆಲಸವಾಗುತ್ತಿದೆ. ನಾವು 65 ಸಾವಿರ ಕೂಲಿ ಕಾರ್ಮಿಕರ
ಕೆಲಸ ಅಂದಾಜು ಮಾಡಲಾಗಿತ್ತು. ಆದರೆ ನಮ್ಮ ನೀರಿಕ್ಷೆ ಮೀರಿ 80 ಸಾವಿರಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ, ಈ ಬಾರಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಹಿತದೃಷ್ಟಿಯಿಂದ ಕೆರೆ, ಕುಂಟೆ, ಗೋಕಟ್ಟೆ ಮತ್ತು ಕಲ್ಯಾಣಿಗಳ ಸ್ವತ್ಛತೆ ಮತ್ತು ನೀರು ಹರಿದು ಬರಲು ಕಾಲುವೆ ಗುರುತಿಸುವ ಕೆಲಸ ಮಾಡಲಾಗಿದೆ. ಅದಕ್ಕೆ ಜಿಲ್ಲೆಯ ಎಲ್ಲ ಗ್ರಾಪಂ
ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಿದ್ದಾರೆ ಎಂದರು.
ಇಒ ಲಕ್ಷ್ಮೀನಾರಾಯಣಸ್ವಾಮಿ, ಸಹಾಯಕ ನಿರ್ದೇಶಕ ಡಿ.ಪದ್ಮನಾಭ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಡಾ.ಸಹನಾ, ತ್ಯಾಮಗೊಂಡ್ಲು ಗ್ರಾಪಂ ಪಿಡಿಒ ದಿನೇಶ್, ಗ್ರಾಪಂ ಸದಸ್ಯ ಸುಜಿತ್ ಕುಮಾರ್, ಸಿಬ್ಬಂದಿ ಗಂಗಾಧರ್ ಮತ್ತಿತರರಿದ್ದರು.