ಸರಕಾರದ ವೈಫಲ್ಯ ನೋಡಿ ಸುಮ್ಮನೆ ಕೂರುವುದಿಲ್ಲ: ಸಿದ್ದು
Team Udayavani, May 20, 2020, 9:57 PM IST
ಕಾಂಗ್ರೆಸ್ ನಾಯಕರು ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಬೆಂಗಳೂರು: ಕೋವಿಡ್-19 ನಿಯಂತ್ರಣದಲ್ಲಿ ರಾಜ್ಯ ಸರಕಾರದ ವೈಫಲ್ಯ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯತ್ಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಸರಕಾರದ ನಿರ್ಣಯಗಳ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸರಕಾರ ದುರಾಡಳಿತ ಮುಂದುವರೆಸಿದ್ದು, ಬಹಳ ದಿನ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಸರಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದರೂ, ಮುಖ್ಯಮಂತ್ರಿ ಯಡಿಯೂರಪ್ಪ ಸೌಜನ್ಯಕ್ಕೂ ಉತ್ತರವನ್ನೂ ಕೊಟ್ಟಿಲ್ಲ. ಸರಕಾರದ ವೈಫಲ್ಯ ನೋಡಿ ಸುಮ್ಮನೆ ಕೂರಲ್ಲ ಎಂದರು.
ಗ್ರಾ.ಪಂ. ಚುನಾವಣೆ ನಡೆಯಬೇಕು: ಡಿಕೆಶಿ
ರಾಜ್ಯ ಸರಕಾರ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯನ್ನು ವಿಧಾನಸೌಧದ ಕೊಠಡಿಯಲ್ಲಿ ಮಾಡುವುದು ವಾಡಿಕೆ. ಆದರೆ ಸರಕಾರ ಅದಕ್ಕೂ ಅವಕಾಶ ನೀಡಿಲ್ಲ ಎಂದವರು ಆರೋಪಿಸಿದರು.
ಕೋವಿಡ್-19 ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೋಗಸ್ ಪ್ಯಾಕೇಜ್ ಘೋಷಣೆ ಮಾಡಿವೆ. ಈವರೆಗೂ ಒಂದು ಸಾವಿರ ರೂಪಾಯಿಯನ್ನೂ ಯಾರಿಗೂ ನೀಡಿಲ್ಲ. ಬಜೆಟ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿ, ಶಹಬಾಸ್ಗಿರಿ ಪಡೆದಿದ್ದಾರೆ. ದೇಶದ ಅವಾಂತರಗಳಿಗೆ ಇವರೇ ಕಾರಣ ಎಂದು ಆರೋಪಿಸಿದರು.