ವಿಶ್ವಾಸಕ್ಕೆ ಪಡೆಯದೆ ಅನುದಾನ ಹಂಚಿಕೆ: ಆಕ್ಷೇಪ
Team Udayavani, May 30, 2020, 5:58 AM IST
ಬೆಳ್ತಂಗಡಿ: ತಾ.ಪಂ.ಗೆ 15ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಹಣವನ್ನು ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ತಾ.ಪಂ.ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ತಾ.ಪಂ.ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಸದಸ್ಯರು ಮತ್ತು ಅಧ್ಯಕ್ಷರ ಮಧ್ಯೆ ಮಾತುಕತೆಗೆ ಕಾರಣವಾಯಿತು.
ಬಿಡುಗಡೆಯಾದ ಹಣವನ್ನು ಕ್ಷೇತ್ರವಾರು ಹಂಚಿಕೆ ಮಾಡುವಾಗ ಉಪಾಧ್ಯಕ್ಷರನ್ನು, ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಕರೆದು ಚರ್ಚಿಸಿ ಸಮಾನ ಹಂಚಿಕೆ ಮಾಡುವುದು ಕ್ರಮ. ಆದರೆ ಅಧ್ಯಕ್ಷರು ಯಾವುದನ್ನೂ ಮಾಡದೇ ಪಟ್ಟಿ ತಯಾರಿಸಿದ್ದಾರೆ. ಇದು ನಮ್ಮನ್ನು ಕಡೆಗಣಿಸಿದಂತೆ ಎಂದು ಉಪಾ ಧ್ಯಕ್ಷೆ ವೇದಾವತಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ ಆರೋಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಪರವಾಗಿ ಏರುಧ್ವನಿಯ ಪ್ರತಿಕ್ರಿಯಿಗೆ ತಿರುಗೇಟು ನೀಡಿದರು.ದಿವ್ಯಜ್ಯೋತಿ ಪ್ರತಿಕ್ರಿಯಿಸಿ, ಲಾಕ್ಡೌನ್ ಮತ್ತು ಸಮಯಾ ವಕಾಶ ಕೊರತೆಯಿಂದ ಪಟ್ಟಿ ತಯಾರಿಸಲಾಗಿದೆ. ಅನುದಾನ ಹಂಚಿಕೆಯ ಕರಡು ಪಟ್ಟಿಯನ್ನಷ್ಟೇ ಸಿದ್ಧಪಡಿಸಲಾಗಿದೆ.
ಅಂತಿಮಗೊಳಿಸಿಲ್ಲ. ಬದಲಾವಣೆಗೆ ಅವಕಾಶವಿದೆ. ಹಿಂದಿನ ವರ್ಷ ಚರ್ಚೆ ನಡೆಸಿ ಸಿದ್ಧ ಪಡಿಸಿದ ಪಟ್ಟಿಯೂ ಅನುಷ್ಠಾನವೇನು ಆಗಿಲ್ಲ ಎಂದರು. ಅನುದಾನ ಹಂಚಿಕೆ ಯಲ್ಲಿ ತಾರತಮ್ಯದ ಉದ್ದೇಶವಿಲ್ಲ ಎಂದರು.
15ನೇ ಹಣಕಾಸು ಯೋಜನೆ
2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ತಾ.ಪಂ. ಅನುದಾನ 2,23,83,497 ರೂ. ನಿಗದಿ ಪಡಿಸಲಾಗಿದೆ. ಇದರಲ್ಲಿ ಶೇ.50ರಷ್ಟು (1,11,91,748 ರೂ.) ತಾ.ಪಂ.ಗೆ ವಹಿಸಿರುವ ಪ್ರಕಾರ್ಯಗಳಿಗೆ, ಶೇ.25 ರಷ್ಟು (27,97,937 ರೂ.) ಪ.ಜಾತಿ ಮತ್ತು ಪ.ಪಂಗಡದ ಕಾಮ ಗಾರಿಗಳಿಗೆ, ಶೇ.5ರಷ್ಟು (5,59,587 ರೂ.) ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು 78,34,224 ರೂ. ಇತರ ಕಾಮಗಾರಿಗಳಿಗೆ ಇಡಲಾಗಿದೆ.
ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ.ಕಲ್ಮಂಜ, ತಾ.ಪಂ. ಇಒ ಕೆ.ಇ. ಜಯರಾಮ್ ಉಪಸ್ಥಿತರಿದ್ದರು.
ಅನುಮೋದನೆ
ನಿರ್ಬಂಧಿತ ಅನುದಾನ 1,11,91,748 ರೂ.ನಲ್ಲಿ ಶೇ. 50ರಷ್ಟು (55,95,874 ರೂ.) ನೈರ್ಮಲ್ಯ ಕಾಮಗಾರಿಗಳಿಗೆ, ಶೇ.50ರಷ್ಟು (55,95,874 ರೂ.)ಕುಡಿಯುವ ನೀರಿಗೆ ಕಾದಿರಿಸುವಂತೆ ಸರಕಾರ ಮಾರ್ಗಸೂಚಿ ನೀಡಿದೆ. ಇದರಲ್ಲಿ ಶೇ.25ರಷ್ಟು ಪ.ಜಾತಿ ಹಾಗೂ ಪ.ಪಂಗಡ ಅಭಿವೃದ್ಧಿ ಕಾಮಗಾರಿಗೆ ಮತ್ತು ಶೇ. 5 ಅನ್ನು ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಟ್ಟು ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು.