ಎಸೆಸೆಲ್ಸಿ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸಲಿ
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶಯ
Team Udayavani, Jun 4, 2020, 11:26 AM IST
ಮಾಸ್ಕ್, ಫೇಸ್ಶೀಲ್ಡ್ಗಳನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ಅವರಿಗೆ ವಿತರಿಸಲಾಯಿತು.
ಮಲ್ಪೆ: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸೆಸೆಲ್ಸಿ ಪರೀಕ್ಷೆ ಜೂ. 25ರಿಂದ ಜು. 4ರ ವರೆಗೆ ನಡೆಯಲಿದ್ದು, ರಾಜ್ಯ ಸರಕಾರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್
ಕಡ್ಡಾಯಗೊಳಿಸಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವಲ್ಲಿ ಅನುಕೂಲವಾಗುವಂತೆ ಶಿವಮೊಗ್ಗ ಜಿಲ್ಲಾ ಎಸೆಸೆಲ್ಸಿಯ ವಿದ್ಯಾರ್ಥಿಗಳಿಗೆ 25,500 ಟ್ರಿಪಲ್ ಲೇಯರ್ ಫೇಸ್ ಮಾಸ್ಕ್, ಶಿಕ್ಷಕರ ಆರೋಗ್ಯ ರಕ್ಷಣೆಗಾಗಿ ಎನ್-95 ಮಾಸ್ಕ್, ಫೇಸ್ಶೀಲ್ಡ್ ಗಳನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪರವಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶಿವರಾಮ್ ಕೆ. ಎಂ. ಅವರು ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಕೆ. ಬಿ. ಅವರಿಗೆ ವಿತರಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಶಿವಕುಮಾರ್ ಕೆ. ಬಿ. ಮಾತನಾಡಿ, ಉಡುಪಿ ಜಿ. ಶಂಕರ್ ಅವರು ಇತರ ಜಿಲ್ಲೆಗಳ ಜತೆಗೆ ಶಿವಮೊಗ್ಗ ಜಿಲ್ಲಾ ಎಸೆಸೆಲ್ಸಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ 5.60 ಲಕ್ಷ ರೂ. ಮೌಲ್ಯದ ಮಾಸ್ಕ್ಗಳನ್ನು ನೀಡಿರುವುದಕ್ಕೆ ಜಿಲ್ಲಾಡಳಿತ ಅಭಾರಿಯಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧಾ ಟಿ. ಪೈ, ಡಿಡಿಪಿಐ ರಮೇಶ್ ಎ. ಎಂ., ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ಶಿವಮೊಗ್ಗ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಪ್ಪು ಕೋಟ್ಯಾನ್, ಕೆ.ವಿ. ಅಣ್ಣಪ್ಪ, ಮಹಾಬಲ, ಪಾಂಡುರಂಗ, ಮೊಗವೀರ ಯುವ ಸಂಘಟನೆಯ ವಿಟ್ಟಲ ಕರ್ಕೇರ, ರವೀಂದ್ರ ಶ್ರೀಯಾನ್ ಉಪಸ್ಥಿತರಿದ್ದರು.
ಕೋವಿಡ್ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣ ಎರಡಕ್ಕೂ ಕುತ್ತು ಬಂದಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸೆಸೆಲ್ಸಿ ಫಲಿತಾಂಶ ಬಹಳ ಮುಖ್ಯವಾದುದು. ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತಾಗಲು ಉಡುಪಿ ಜಿಲ್ಲೆಯಲ್ಲಿ 16,300 ವಿದ್ಯಾರ್ಥಿಗಳಿಗೆ, ದ.ಕ. ಜಿಲ್ಲೆಯ 30,000 ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ವಿತರಿಸಿದ್ದೇವೆ. ವಿಜಯಪುರ ಜಿಲ್ಲೆಯ 37,000 ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ವಿತರಿಸಲಾಗುತ್ತದೆ.
– ನಾಡೋಜ ಡಾ| ಜಿ. ಶಂಕರ್, ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್