ಮಗುವಿನ ಅಂತ್ಯಕ್ರಿಯೆಗೆ 4 ದಿನ ಕಾದರು
Team Udayavani, Jul 10, 2020, 5:57 AM IST
ಬೆಂಗಳೂರು: ಏಳು ವರ್ಷದ ಮಗನ ಶವವಿಟ್ಟುಕೊಂಡು ತಂದೆಯೊಬ್ಬರು ಕೋವಿಡ್ ವರದಿಗಾಗಿ ನಾಲ್ಕು ದಿನ ಕಾದುಕುಳಿತ ಘಟನೆ ತಡವಾಗಿ ಬೆಳಕಿಗೆಬಂದಿದೆ. ಹೆಬ್ಟಾಳದ ನಿವಾಸಯೊಂದರಲ್ಲಿ ಜು. 2ರಂದು ಸಂಜೆ 6.45ರಸುಮಾರಿಗೆ ಆಟವಾಡುತ್ತಿದ್ದ ಬಾಲಕ 2ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಬಳಿಕ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದ್ದು, ಹೀಗೆ ಮೂರು ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ವಿಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರಿ 11ರ ಸುಮಾರಿಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಹೆಬ್ಟಾಳ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿಸುವುದು ಕಡ್ಡಾಯ. ಅದಕ್ಕೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ನಾಲ್ಕು ದಿನಗಳ ನಂತರ ವರದಿ ಬಂದಿದ್ದು, ನಂತರ ಅಂತ್ಯಕ್ರಿಯೆ ಮಾಡಲಾಗಿದೆ.
ಸೋಂಕಿತ ಮಗುವಿನ ಚಿಕಿತ್ಸೆಗೆ ಅಲೆದಾಟ: ಚಿಕಿತ್ಸೆಗಾಗಿ ಸೋಂಕಿತರ ನಗರದಲ್ಲಿ ಮುಂದುವರಿದಿದ್ದು, ಗುರುವಾರವೂ ಪುನರಾವರ್ತನೆಯಾಯಿತು. ಕೃಷ್ಣಪ್ಪ ಲೇಔಟ್ ನ 30 ವರ್ಷದ ಮಹಿಳೆ ಹಾಗೂ ಅವರ 7 ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದ್ದು, ಗುರವಾರ ಟಿಟಿ ವಾಹನದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಸೋಂಕಿತ ಮಹಿಳೆಯ 36 ವರ್ಷದ ಪತಿಗೆ ಇತ್ತೀಚಿಗೆ ಸೋಂಕು ಕಾಣಿಸಿಕೊಂಡಿದ್ದು, ಜಿಕೆವಿಕೆ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಮೂರು ದಿನದ ಹಿಂದೆ ಪರೀಕ್ಷೆಗೆ ಒಳಗಾಗಿದ್ದು, ಪಾಲಿಕೆ ಅಧಿಕಾರಿ ಗಳು ಬುಧವಾರ ತಡರಾತ್ರಿ ಕರೆ ಮಾಡಿ ಸೋಂಕು ಇರುವುದು ದೃಢಪಡಿಸಿದ್ದು, ಗುರುವಾರ ಟಿಟಿ ವಾಹನ ಕಳುಹಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಗುವಿನೊಂದಿಗೆ ಹಲವು ಆಸ್ಪತ್ರೆಗಳನ್ನು ಸುತ್ತಿ, ಕೊನೆಗೆ ಸ್ಥಳೀಯ ಜನಪ್ರತಿನಿಧಿಗಳ ನೆರವಿನಿಂದ ಕೆ.ಸಿ. ಜನರಲ್ ಆಸ್ಪತ್ರೆ ಯಲ್ಲಿ ಮಗುವನ್ನು ಸಂಜೆ 6 ಗಂಟೆಗೆ ದಾಖಲಿಸಿದ್ದಾರೆ.