ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದ ಮಹಿಳೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಮೂವರ ಹತ್ಯೆ
Team Udayavani, Sep 16, 2020, 9:20 AM IST
ಜಾರ್ಖಂಡ್; ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನೊಂದಿಗೆ ಸೇರಿಕೊಂಡು ಗಂಡನನ್ನೇ ಹತ್ಯೆ ಮಾಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೂವರನ್ನು ಕೋಲುಗಳಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನೀಲಂ ಕುಜೂರ್ ಎಂಬ ಮಹಿಳೆ ತನ್ನ ಪ್ರಿಯಕರ ಸುದೀಪ್ ದುಂಡುಂಗ್ ನೊಂದಿಗೆ ಸೇರಿಕೊಂಡು ಪತಿಯಾದ ಮಾರಿಯಾನಸ್ ಕುಜೂರ್ ನನ್ನು ಸೋಮವಾರ ರಾತ್ರಿ ಹತ್ಯೆ ಮಾಡಿದ್ದಳು.
ನೊಂಗಾ ಪ್ರದೇಶದ ಸುದೀಪ್, ತನ್ನ ಸ್ನೇಹಿತ ಪ್ರಕಾಶ್ ಕುಲ್ಲುವಿನೊಂದಿಗೆ ಸೇರಿಕೊಂಡು ಪ್ರಿಯತಮೆ ನೀಲಂನನ್ನು ಭೇಟಿಯಾಗಲು ಡೆಂಗಾರ್ಡಿಹ್ ಗ್ರಾಮಕ್ಕೆ ಬಂದಿದ್ದಾನೆ. ಮಾತ್ರವಲ್ಲದೆ ಅದೇ ರಾತ್ರಿ ನೀಲಂನ ಗಂಡನನ್ನು ಹತ್ಯೆಗೈಯಲು ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕಿಳಿಸಿದ್ದರು.
ಇದನ್ನೂ ಓದಿ: ನಕಲಿ ಸುದ್ದಿಗಳೇ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ಕಾರಣ: ಗೃಹ ಸಚಿವಾಲಯ
ಸೋಮವಾರ ತಡರಾತ್ರಿಯವರೆಗೂ ಮದ್ಯ ಸೇವಿಸಿ, ಅದರ ನಂತರ ಮರಿಯಾನಸ್ ನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಕೂಗಾಟ-ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಮರಿಯಾನಸ್ನ ಕಿರಿಯ ಸಹೋದರ ಕೂಡಲೇ ಗ್ರಾಮಸ್ಥರನ್ನು ಕರೆದಿದ್ದಾನೆ.
ಘಟನೆಯ ಕುರಿತು ತಿಳಿದು ರೊಚ್ಚಿಗೆದ್ದ ಗ್ರಾಮಸ್ಥರು ಈ ಮೂವರನ್ನು ಕೂಡ ಹೊಡೆದು ಕೊಂದಿದ್ದಾರೆ. ವಿವಾಹಿತ ಮಹಿಳೆಯೊಬ್ಬಳು ಅಕ್ರಮ ಸಂಬಂಧದಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೆ ತನ್ನ ಗಂಡನನ್ನೇ ಹತ್ಯೆ ಮಾಡಿರುವುದು ಇಡೀ ಗ್ರಾಮಕ್ಕೆ ಅವಮಾನಕರ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ನಿಂದ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ !
ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ತಲುಪಿ ಎಲ್ಲಾ ನಾಲ್ಕು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿರುವ ಜನರನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ.