ಕುಂಬಳೆಯಲ್ಲಿ ಕೋಟಿ ರೂ. ಕೃಷಿ ಯೋಜನೆ ಅನುಷ್ಠಾನ
Team Udayavani, Oct 1, 2020, 10:41 PM IST
ಬಂಬ್ರಾಣ ಗದ್ದೆಯಲ್ಲಿ ನೇಜಿ ನಾಟಿ ನಡೆಯಿತು.
ಕುಂಬಳೆ: ಇಲ್ಲಿನ ಗ್ರಾಮ ಪಂಚಾಯತ್ ಕೃಷಿಯಲ್ಲಿ ಸ್ವಾವಲಂಬನೆಗಾಗಿ ಒಂದು ಕೋಟಿ ರೂ. ಕೃಷಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಗ್ರಾಮ ಪಂಚಾಯತ್ ಸಾರ್ವಜನಿಕ ಯೋಜನೆಯ ವಾರ್ಷಿಕ ಯೋಜನೆಯ ಭಾಗವಾಗಿ ಅಭಿವೃದ್ಧಿ ನಿಧಿ, ಸ್ವಂತ ನಿಧಿ ಮತ್ತು ವಿವಿಧ ಏಜೆನ್ಸಿಗಳ ಹಣಕಾಸಿನ ನೆರವಿನೊಂದಿಗೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸುಭಿಕ್ಷ ಕೇರಳ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
ತೆಂಗಿನ ಕಾಯಿ ಕೃಷಿಗೆ 24.40 ಲಕ್ಷ ರೂ., ಭತ್ತದ ಕೃಷಿಗೆ 17.68 ಲಕ್ಷ ರೂ., ಬಂಜರು ಭೂಮಿಯಲ್ಲಿ ಭತ್ತದ ಕೃಷಿಗೆ 10 ಲಕ್ಷ ರೂ., ಸುಸ್ಥಿರ ಭತ್ತದ ಕೃಷಿಗೆ 3.63 ಲಕ್ಷ ರೂ., ಬಾಳೆ ಕೃಷಿಗೆ 2 ಲಕ್ಷ ರೂ., ತರಕಾರಿ ಕೃಷಿಗೆ 10.3 ಲಕ್ಷ ರೂ., ಕರಕುಶಲ ಅಭಿವೃದ್ಧಿಗೆ 5 ಲಕ್ಷ ರೂ., ಗ್ರೋಬ್ಯಾಗ್ ವಿತರಣೆಗೆ 4 ಲಕ್ಷ ರೂ., ಬೆಳೆ ಬೆಳೆಯಲು 6 ಲಕ್ಷ ರೂ., ಹಣ್ಣಿನ ಸಸಿ ವಿತರಣೆಗೆ 5 ಲಕ್ಷ ರೂ., ಪಾಳು ಭೂಮಿಯಲ್ಲಿ 70 ಎಕರೆ ಪ್ರದೇಶವಾದ ಬಂಬ್ರಾಣ ಬಯಲು ಮತ್ತು ಕೊಡ್ಯನೆ ಬಯಲುಗಳ ಕೃಷಿಗೆ ಯೋಜನೆ ರೂಪಿಸಲಾಗಿದೆ. ಕೃಷಿ ಯೋಜನೆಯ ಪ್ರಗತಿಯನ್ನು ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸಭೆ ಪರಿಶೀಲಿಸಿದೆ.
ಅಧ್ಯಕ್ಷ ಕೆ.ಎಲ್. ಪುಂಡಾರೀಕ್ಷ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗೀತಾ ಲೋಕನಾಥ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಿ.ಎನ್. ಮುಹಮ್ಮದಾಲಿ, ಎ.ಕೆ. ಆರಿಫ್, ಫಾತಿಮಾ ಅಬ್ದುಲ್ಲಾ ಕುಂಞಿ, ಕೃಷಿ ಅಧಿಕಾರಿ ನಾನುಕುಟ್ಟನ್, ಪಂ. ಕಾರ್ಯದರ್ಶಿ ದೀಪೇಶ್ ಉಪಸ್ಥಿತರಿದ್ದರು.