ಬಹುಬೆಳೆಯಿಂದ ಯುವ ರೈತನಿಗೆ ಆದಾಯ
ಪ್ರಗತಿಪರ ಯುವ ರೈತ ಪ್ರಶಸ್ತಿ ಪಡೆದ ಹಾಡ್ಯ ಗ್ರಾಮದ ರೇವಣ್ಣ
Team Udayavani, Nov 22, 2020, 3:41 PM IST
ಮಂಡ್ಯ: ವಾಣಿಜ್ಯ ಬೆಳೆ ಕಬ್ಬು ಹಾಗೂ ಭತ್ತ ಬೆಳೆಗೆ ತಿಲಾಂಜಲಿ ಇಟ್ಟು ಬಹುಬೆಳೆಗಳನ್ನು ಬೆಳೆದು ಪ್ರತಿ ತಿಂಗಳು ಆದಾಯ ಕಂಡುಕೊಂಡಿರುವ ಯುವ ರೈತ ರೇವಣ್ಣ.
ಹೌದು, ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ರೈತ ರೇವಣ್ಣ ತಮಗಿರುವ28 ಗುಂಟೆ ಜಮೀನಿನಲ್ಲಿ ವಿವಿಧ ರೀತಿಯ ಹೂವು, ಹಣ್ಣು, ತರಕಾರಿ ಬೆಳೆದು ಆದಾಯಕಂಡುಕೊಂಡಿದ್ದಾರೆ. ಇದರಿಂದ ನೆಮ್ಮದಿಯ ಜೀವನ
ನಡೆಸುತ್ತಿದ್ದಾರೆ. ಅಣ್ಣತಮ್ಮಂದಿರಿಗೆ ಇರುವ28 ಗುಂಟೆ ಜಮೀನನ್ನು ಇಬ್ಭಾಗ ಮಾಡದೆ ತಮ್ಮ ರೇವಣ್ಣನೇ ನೋಡಿಕೊಳ್ಳುತ್ತಿದ್ದಾರೆ.ಇದಕ್ಕೆ ಅಣ್ಣನೂ ಸಹಕಾರ ನೀಡುತ್ತಿದ್ದು, ತಮ್ಮನ ಹೆಗಲಾಗಿ ನಿಂತಿದ್ದಾರೆ.
ವಿವಿಧ ಬಹುಬೆಳೆ: ಕಡಿಮೆ ಜಮೀನಿದೆ. ಏನು ಮಾಡಲು ಸಾಧ್ಯ ಎನ್ನುವವರು ಹೆಚ್ಚಿದ್ದಾರೆ. ಆದರೆ, ರೇವಣ್ಣ 28 ಗುಂಟೆ ಜಮೀನಿನಲ್ಲಿ ಬಹು ಬೆಳೆಗಳನ್ನು ಬೆಳೆದಿದ್ದಾರೆ. ಇದರ ಜೊತೆಗೆ ಬೇರೆಯವರ ಜಮೀನುಗುತ್ತಿಗೆ ಪಡೆದು ಅಲ್ಲಿಯೂ ಬೆಳೆ ಬೆಳೆದಿದ್ದಾರೆ. ಕಬ್ಬು ಬೆಳೆಯಿಂದ ನಿರೀಕ್ಷಿತ ಆದಾಯ ಬರದಿದ್ದ ಕಾರಣ ಬಹುಬೆಳೆಯತ್ತ ಮುಖ ಮಾಡಿದ್ದಾರೆ.
300 ಏಲಕ್ಕಿ ಬಾಳೆ ಗಿಡ, 15 ಸಪೋಟ, 40 ತೆಂಗು, 150 ಅಡಿಕೆ, 5 ಗುಂಟೆಯಲ್ಲಿ ಕನಕಾಂಬರ, ಕಾಕಟ ಹೂವು ಬೆಳೆದಿದ್ದಾರೆ. ಇದರ ಜೊತೆಗೆ2 ಎಮ್ಮೆ ಹಾಗೂ 4 ಆಡುಗಳನ್ನು ಸಾಕಿದ್ದಾರೆ.ಬೇರೆಯವರಒಂದೂವರೆ ಎಕರೆ ಜಮೀನು ಗುತ್ತಿಗೆ ಪಡೆದಿರುವ ಇವರು, ಅಲ್ಲಿಯೂ ತರಕಾರಿ, ಹೂವು, ಬಾಳೆ ಬೆಳೆದಿದ್ದಾರೆ. ಮಧ್ಯವರ್ತಿಗಳಿಂದ ದೂರ: ರೈತ ರೇವಣ್ಣ ಮಧ್ಯವರ್ತಿಗಳಿಂದ ದೂರ ಉಳಿದಿದ್ದಾರೆ. ಸ್ವತಃಇವರೇ ಖುದ್ದಾಗಿ ಹೂವು, ಬಾಳೆ ಹಣ್ಣು, ಸಪೋಟ, ಟೊಮೆಟೋ ಸೇರಿದಂತೆ ವಿವಿಧ ತರಕಾರಿಗಳನ್ನು
ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಗುಣಮಟ್ಟದ ತಾಜಾ ತರಕಾರಿ ಗ್ರಾಹಕರಿಗೆ ಕೊಡುವುದರಿಂದ ಬೇಡಿಕೆ ಹೆಚ್ಚಿದೆ. ಇದರಿಂದ ತಿಂಗಳಿಗೆ 1 ಲಕ್ಷ ರೂ.ವರೆಗೂ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ,ಊಟಕ್ಕಾಗಿ ಬಾಳೆ ಎಲೆಗಳನ್ನು ಮಾರಾಟ ಮಾಡುತ್ತಾರೆ. ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಬೇಕಾದ ಬಾಳೆ ಎಲೆಗಳನ್ನು ಸರಬರಾಜು ಮಾಡುತ್ತಾರೆ.
ನೀರಿಗೆ ಕೊರತೆ ಇಲ್ಲ: ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಪಕ್ಕದಲ್ಲಿಯೇ ಕಾಲುವೆ ನೀರು ಹರಿಯುತ್ತದೆ. ಇದರ ಜೊತೆಗೆ ಜಮೀನಿನ ಬಳಿ ಹಳ್ಳವಿದ್ದು, ಸದಾ ನೀರು ತುಂಬಿರುತ್ತದೆ. ಇದೇ ನೀರನ್ನು ಬಳಸಿಕೊಂಡು ಬೆಳೆಗೆ ಹಾಯಿಸುತ್ತಾರೆ. ವರ್ಷ ಪೂರ್ತಿ ಸದಾ ಹಳ್ಳದಲ್ಲಿ ನೀರು ದೊರಕುತ್ತಿದೆ.
ಪ್ರತಿ ವರ್ಷ ಪ್ರಶಸ್ತಿ: 2 ಎಮ್ಮೆಗಳನ್ನು ಸಾಕಿರುವ ಅವರು ಉತ್ತಮ ಗುಣಮಟ್ಟದ ಹಾಲು ಪೂರೈಸುವಲ್ಲಿ ಪ್ರತಿ ವರ್ಷ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪ್ರಶಸ್ತಿ ಇವರಿಗೆ ದೊರೆಯುತ್ತಿತ್ತು. ಇದರಿಂದ ಇವರ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಯಿತು. ಇದನ್ನು ಮನಗಂಡ ರೇವಣ್ಣ ಪ್ರತಿದಿನ ಬೆಳಗ್ಗೆ ಮನೆ ಮನೆಗಳಿಗೆ ತೆರಳಿ ಹಾಲು ಹಾಕುತ್ತಿದ್ದಾರೆ. ಡೇರಿಗೆ ಹಾಕಿದ್ದಕ್ಕಿಂತ ಹೆಚ್ಚಿನ ಆದಾಯ ಇಲ್ಲಿಸಿಗುತ್ತಿದೆ. ಆದ್ದರಿಂದ ಕಳೆದ 4 ವರ್ಷಗಳಿಂದ ಡೇರಿಗೆ ಹಾಲು ಹಾಕುವುದನ್ನು ನಿಲ್ಲಿಸಿದ್ದೇನೆ ಎನ್ನುತ್ತಾರೆ ರೇವಣ್ಣ.
ಎಮ್ಮೆ ಫಾರಂ ಮಾಡುವ ಕನಸು : 9ನೇ ತರಗತಿ ಓದಿರುವ ರೇವಣ್ಣ. ಎಮ್ಮೆ ಫಾರಂ ಮಾಡಲು ಮುಂದಾಗಿದ್ದಾರೆ. ಎಮ್ಮೆ ಹಾಲಿಗೆ ಬೇಡಿಕೆ ಇರುವುದರಿಂದ ಸುಮಾರು10 ಎಮ್ಮೆಗಳಿರುವ ಫಾರಂ ಮಾಡುವಕನಸು
ಹೊಂದಿದ್ದಾರೆ. ಇದಕ್ಕೆ ಪತ್ನಿ ಪವಿತ್ರ ಸಾಥ್ ನೀಡಿದ್ದಾರೆ. ಎಮ್ಮೆ ಹಾಗೂ ಆಡುಗಳಿಗೆ ಬೇಕಾಗಿರುವ ಮೇವನ್ನು ಸ್ವತಃ ಬೆಳೆದಿದ್ದಾರೆ. ಹಿಪ್ಪುನೇರಳೆ ಹಾಗೂ ಸೀಮೆ ಹುಲ್ಲು ಬೆಳೆದುಕೊಂಡಿದ್ದಾರೆ. ಇದರಿಂದ ಮೇವಿಗೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಯುವ ರೈತ ಪ್ರಶಸ್ತಿ ಪ್ರದಾನ : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಇವರನ್ನು ಗುರುತಿಸಿ ಕಳೆದ ಒಂದು ವಾರದ ಹಿಂದೆ ನಡೆದ ಕೃಷಿ ಮೇಳದಲ್ಲಿ ಮಂಡ್ಯ ತಾಲೂಕು ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.
ಇರುವ ಜಮೀನಿನಲ್ಲಿಯೇ ವಿವಿಧ ರೀತಿಯ ಬೆಳೆ ಬೆಳೆದಿದ್ದೇನೆ. ಮನೆಗೂ ಯಾವುದೇ ತರಕಾರಿಗಳನ್ನುಕೊಂಡುವುದಿಲ್ಲ. ಒಂದು ಬೆಳೆ ನಷ್ಟವಾದರೆ ಮತ್ತೂಂದು ಬೆಳೆ ಕೈಹಿಡಿಯುತ್ತದೆ. ಇದರಿಂದ ನಷ್ಟವಿಲ್ಲದೆ ಸರಿದೂಗಿಸಲಾಗುತ್ತದೆ. ಸಪೋಟ, ತೆಂಗು, ಅಡಿಕೆಯಿಂದ ಆದಾಯ ಬರುತ್ತದೆ. ಅಲ್ಲದೆ, ಖುದ್ದಾಗಿ ನಾನೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತೇನೆ. ಈಗ ಎಮ್ಮೆ ಫಾರಂ ಮಾಡಲು ಮುಂದಾಗಿದ್ದೇನೆ. – ರೇವಣ್ಣ, ಪ್ರಗತಿಪರ ರೈತ, ಹಾಡ್ಯ ಗ್ರಾಮ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ