ಮಂಡ್ಯದಲ್ಲಿ ಜೋಡೆತ್ತುಗಳ ಹವಾ: 14.55 ಟನ್ ಕಬ್ಬು ತುಂಬಿದ ಗಾಡಿ ಎಳೆದ ಎತ್ತುಗಳು !
Team Udayavani, Nov 22, 2020, 4:17 PM IST
ಮಂಡ್ಯ: ಜಿಲ್ಲೆಯಲ್ಲಿ ಜೋಡೆತ್ತುಗಳ ಹವಾ ಜೋರಾಗಿಯೇ ಮುಂದುವರೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎಚ್ಡಿಕೆ ಹಾಗೂ ಡಿಕೆಶಿ ಜೋಡೆತ್ತುಗಳಾಗಿ ಗುರುತಿಸಿಕೊಂಡಿದ್ದರು. ನಂತರ ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಹಾಗೂ ಕೆ.ಸಿ.ನಾರಾಯಣಗೌಡ ನಾವು ಜೋಡೆತ್ತುಗಳು ಎಂದು ಘೋಷಿಸಿಕೊಂಡಿದ್ದರು.
ಆದರೆ ಇದೀಗ ನಿಜವಾದ ಜೋಡೆತ್ತುಗಳು ತಮ್ಮ ಹವಾ ಸೃಷ್ಟಿಸಿವೆ. ಹೌದು, ಮಂಡ್ಯ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಎರಡು ಜೋಡೆತ್ತುಗಳು ಸುಮಾರು 14.55 ಟನ್ ಕಬ್ಬು ತುಂಬಿದ ಗಾಡಿ ಎಳೆಯುವ ಮೂಲಕ ಎಲ್ಲರಿಗಿಂತಲೂ ನಾವೇ ಬಲಶಾಲಿಗಳು ಎಂದು ತೋರಿಸಿಕೊಟ್ಟಿವೆ.
ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಹುರುಗಲವಾಡಿ ಗ್ರಾಮದ ಶರತ್ ಆಲಿಯಾಸ್ ಪಿಳ್ಳೆ ಎಂಬುವರಿಗೆ ಸೇರಿದ ಎರಡು ಜೋಡೆತ್ತುಗಳು 14.55 ಟನ್ (14,550 ಕೆಜಿ) ಕಬ್ಬು ತುಂಬಿದ ಎತ್ತಿನಗಾಡಿಯನ್ನು ಸುಮಾರು 3 ಕಿ.ಮೀ ದೂರದವರೆಗೆ ಹೊತ್ತುಕೊಂಡು ಸಾಗಿವೆ.
ಇದನ್ನೂ ಓದಿ: BSY ಒತ್ತಡಕ್ಕೆ ಮಣಿದು ಅಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿತ್ತು: ರೇಣುಕಾಚಾರ್ಯ
ಶರತ್ ಅವರು 2.90 ಲಕ್ಷ ರೂ. ನೀಡಿ ಜೋಡೆತ್ತುಗಳನ್ನು ಖರೀದಿಸಿದ್ದರು. ಅವುಗಳ ಶಕ್ತಿ ಪ್ರದರ್ಶನ ಮಾಡಲು ಎಚ್.ಮಲ್ಲಿಗೆರೆ ಗ್ರಾಮದ ಯುವಕರು ಅಗತ್ಯಕ್ಕಿಂತ ಹೆಚ್ಚು ಕಬ್ಬನ್ನು ಎತ್ತಿನಗಾಡಿಗೆ ತುಂಬಿ ಜೋಡೆತ್ತುಗಳಿಂದ ಕಬ್ಬಿನ ಗದ್ದೆಯಿಂದ ಗಾಡಿ ಎಳೆಸಿ ತೂಕ ಮಾಡಿಸಿದಾಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಜೋಡೆತ್ತುಗಳು ತಮ್ಮ ಸಾಮರ್ಥ್ಯ ತೋರಿವೆ.
ತುಂಬಿದ ಎತ್ತಿನ ಗಾಡಿ ಎಳೆಯುತ್ತಿದ್ದ ಜೋಡೆತ್ತುಗಳ ನೋಡುತ್ತಿದ್ದ ಗ್ರಾಮಸ್ಥರು, ರೈತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲರೂ ಸಿಳ್ಳೆ, ಚಪ್ಪಾಳೆ ತಟ್ಟುತ್ತಾ ಜೋಡೆತ್ತುಗಳಿಗೆ ಜೈಕಾರ ಹಾಕುತ್ತಾ ಪ್ರೋತ್ಸಾಹ ನೀಡಿದರು. ಯುವಕರ ಕಾರ್ಯ ನೋಡಿದ ಗ್ರಾಮದ ಹಿರಿಯ ಮುಖಂಡರು ಜೋಡೆತ್ತುಗಳ ಶಕ್ತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೀಗ ಜೋಡೆತ್ತುಗಳ ಶಕ್ತಿ ಪ್ರದರ್ಶನದ ವಿಡಿಯೋ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ, ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರಾಜಕೀಯ ಖೈದಿ: ಸೌದಿಯ ಮಹಿಳಾ ಹಕ್ಕು ಹೋರಾಟಗಾರ್ತಿ ಲೌಜೈನ್ ಅಲ್-ಹಥ್ಲೌಲ್ ರ ಬಗ್ಗೆ ಗೊತ್ತಾ?