Loan; ಜನರಲ್ಲಿ ಹೆಚ್ಚುತ್ತಿದೆ ಸಾಲದ ಪ್ರವೃತ್ತಿ!
ದಿನಾ ಹಬ್ಬದೂಟ ಮಾಡುವುದಕ್ಕೂ ಸಾಲ ಮಾಡುವವರಿದ್ದಾರೆ.
Team Udayavani, Oct 25, 2023, 6:40 AM IST
ದೇಶದ ನಾಗರಿಕರಲ್ಲಿ ಉಳಿತಾಯ ಪ್ರವೃತ್ತಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಬದಲಾಗಿ ಸಾಲ ಮಾಡುವ ಅಭ್ಯಾಸ ಹೆಚ್ಚಾಗುತ್ತಿದೆ. ಈ ಹಿಂದೆ ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಹಣವೇ ದೇಶವನ್ನು ಆರ್ಥಿಕ ಹಿಂಜರಿತದಿಂದ ಕಾಪಾಡಿದ್ದು ಇದೆ. ಆದರೆ ಇಂದು…
ಒಬ್ಬ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಶಿಸ್ತು ಎಂಬುದು ತುಂಬಾ ಮಹತ್ವದ್ದಾಗಿದೆ. ಇದು ಆತನ ಮಾತ್ರವಲ್ಲದೆ ಇಡೀ ಕುಟುಂಬದ ಭವಿಷ್ಯವನ್ನು ಸುಸ್ಥಿರವಾಗಿರಿಸಬಲ್ಲದು. ದೇಶವಾಸಿಗಳ ಆರ್ಥಿಕ ಪ್ರಜ್ಞೆ ಎಂಬುದು ಒಟ್ಟಾರೆ ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾಲು ಪಡೆಯುತ್ತದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎನ್ನುವ ಗಾದೆಮಾತು ಇಲ್ಲಿಯೂ ಪ್ರಸ್ತುತ. ಆದರೆ ಇತ್ತೀ ಚೆಗೆ ಈ ಶಿಸ್ತು, ಅಶಿಸ್ತಿನತ್ತ ವಾಲುತ್ತಿದೆ. ಇದರಿಂದ ಯಾವ ರೀತಿಯ ಅಪಾಯ ಎದುರಾಗುತ್ತದೆ ಎಂಬುದನ್ನು ಗ್ರಹಿಸುವುದೂ ಕಷ್ಟಸಾಧ್ಯ.
ಹಿಂದೆ ಸಾಲ ಮಾಡಿ ಮೃಷ್ಟಾನ್ನ ಭೋಜನ ಸವಿಯುವ ಪರಿಪಾಠ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಸಾಲ ಕೊಡು ವವರೂ ಇರುವುದರಿಂದ ದಿನಾ ಹಬ್ಬದೂಟ ಮಾಡುವುದಕ್ಕೂ ಸಾಲ ಮಾಡುವವರಿದ್ದಾರೆ. ಸಾಲ ಮಾಡಿಯಾದರೂ ಮೋಜು-ಮಸ್ತಿ ಮಾಡಬೇಕೆಂಬ ಜಾಯಮಾನ ಹೆಚ್ಚಾ ಗುತ್ತಿದೆ. ಅದೇ ರೀತಿ ಸಾಲ ಮಾಡಿಯಾದರೂ ಶ್ರೀಮಂತರಾಗಬೇಕು ಎಂಬ ಹಂಬಲ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಇದು ಒಂದೆರಡು ಕಡೆ ಮಾತ್ರವಲ್ಲ ದೇಶಪೂರ್ತಿ ವ್ಯಾಪಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು, ಎಚ್ಚರಿಕೆಯ ಹೆಜ್ಜೆ ಇಡು ವಂತೆ ಬ್ಯಾಂಕ್ ಸಹಿತ ಸಾಲ ಒದಗಿಸುವ ಎಲ್ಲ ಹಣಕಾಸು ಸಂಸ್ಥೆಗಳಿಗೂ ಎರಡೆರಡು ಬಾರಿ ಸೂಚಿಸಿದೆ. ಅಂದರೆ ಪರಿಸ್ಥಿತಿ ಕೈ ಮೀ ರುವ ಹಂತಕ್ಕೆ ಹೋಗದಿರಲಿ ಎಂಬುದೇ ಒಟ್ಟು ಕಾಳಜಿ.
ಹಿಂದೆ ಭಾರತೀಯರ ಮನಃಸ್ಥಿತಿ ಹೇಗಿ ತ್ತೆಂದರೆ ಆದಾಯದ ಸ್ವಲ್ಪ ಅಂಶವಾದರೂ ಉಳಿತಾಯವಾಗಬೇಕು. ಭವಿಷ್ಯಕ್ಕೆ ಬೇಕು ಎಂಬ ತುಡಿತ ಇತ್ತು. ಮನೆ ಮಂದಿಯ ಕಾಸು ದೇವರ ಚಿತ್ರದ ಹಿಂಬದಿಯಿಂದ ಹಿಡಿದು ಮಣ್ಣಿನಡಿಯವರೆಗೂ ಆಪತ್ಕಾಲದ ನಿಧಿಯಾಗಿರುತ್ತಿತ್ತು. ಆದರೆ ಈಗ ಅದ್ಯಾ ವುದೂ ಇಲ್ಲ. ಎಲ್ಲವೂ ಬಟಾಬಯಲು. ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಮೊಬೈಲ್ ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಅದನ್ನು ಖರ್ಚು ಮಾಡುವುದಕ್ಕೆ ನೂರಾರು ದಾರಿಗಳನ್ನೂ ಅದೇ ತೋರಿಸುತ್ತದೆ!
ಉಳಿತಾಯ ಪ್ರವೃತ್ತಿ ಇಳಿಕೆ
ದೇಶದಲ್ಲಿ ಉಳಿತಾಯ ಪ್ರವೃತ್ತಿ ಇಳಿಕೆ ಯಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಕೂಡ ಹೇಳಿ ದೆ. ಜನರಲ್ಲಿ ಖರ್ಚು ಮಾಡುವ ಚಟ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದು ಅವರು ಹೊಂದಿರುವ ಆದಾಯವನ್ನು ಮೀರುತ್ತಿದೆ ಎಂದಿದೆ. ಪರ್ಯಾಯ ದಾರಿಗಳಿಂದ ಹೊಂದಾಣಿಕೆ ಮಾಡಬಹುದು ಎಂಬ ಮಾನಸಿಕತೆ ಹೆಚ್ಚಾಗುತ್ತಿದೆ. ಭವಿಷ್ಯಕ್ಕಾಗಿ ಕೂಡಿಡುವ ಅಥವಾ ಆಪತ್ಕಾಲಕ್ಕಾಗಿ ನಿಧಿ ತೆಗೆದಿರಿಸುವ ಬಯಕೆ ದೂರವಾಗುತ್ತಿ ರುವುದು ಎಂದಿಗೂ ಉತ್ತಮ ಬೆಳವಣಿಗೆಯಾಗದು.
ಆರ್ಬಿಐ ದತ್ತಾಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಪ್ರಿಲ್ನಿಂದ ಆಗಸ್ಟ್ವರೆಗೆ ದೇಶದಲ್ಲಿ ಜನರು ಪಡೆದಿರುವ ವೈಯಕ್ತಿಕ ಸಾಲಗಳ ಒಟ್ಟು ಮೌಲ್ಯದ ಪ್ರಮಾಣ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು ಶೇ. 7 ಇದ್ದರೆ, ಈ ಬಾರಿ ಅದು ಶೇ. 16.8ಕ್ಕೆ ಜಿಗಿದಿದೆ. ರೂಪಾಯಿಗಳ ಲೆಕ್ಕಾ ಚಾರದಲ್ಲಿ ಹೇಳುವುದಾದರೆ ಸಾಲದ ಬೆಟ್ಟ 47.70 ಲಕ್ಷ ಕೋಟಿಗಳಿಗೇರಿದೆ. ಹಾಗೆಂದು ಜನರ ವೈಯಕ್ತಿಕ ಆಸ್ತಿಯ ಒಟ್ಟು ಮೌಲ್ಯದ ಪ್ರಮಾಣ ಏರಿಕೆಯಾಗಿಲ್ಲ. ಬದಲಾಗಿ ದಾಖ ಲೆಯ ಇಳಿಕೆ ಕಂಡಿದ್ದು, ಕಳೆದ ವರ್ಷದ ಶೇ. 7.2ರ ಮಟ್ಟದಿಂದ ಶೇ. 5.1ಕ್ಕೆ ಕುಸಿದಿದೆ. ಇದು 50 ವರ್ಷಗಳಲ್ಲಿಯೇ ಕನಿಷ್ಠವಾಗಿದೆ. 2021ರಲ್ಲಿ ವೈಯಕ್ತಿಕ ಆಸ್ತಿಯ ಒಟ್ಟು ಮೌಲ್ಯ 22.8 ಲಕ್ಷ ಕೋಟಿ ರೂ.ಗಳಾಗಿತ್ತು. ಕಳೆದ ವರ್ಷ ಅದು 16.96 ಲಕ್ಷ ಕೋಟಿ ರೂ. ಗೆ ಇಳಿದಿದ್ದರೆ, ಈ ಬಾರಿ ಅದು 13.76 ಕೋಟಿ ರೂ.ಗಳಿಗೆ ಕುಸಿದಿದೆ. ಅಂದರೆ ಸಾಲ ಮತ್ತು ಆಸ್ತಿಯ ಪ್ರಮಾಣ ಸಮತೋಲನದಲ್ಲಿಲ್ಲ ಎಂಬುದು ಸಾಬೀತಾಗುತ್ತದೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಓಡಾಡುತ್ತಿದ್ದರೆ ಉತ್ತಮ ಎಂಬುದು ಅರ್ಥಶಾಸ್ತ್ರಜ್ಞರ ಅಭಿಮತ. ಆದರೆ ಅತಿ ಯಾದ ಸಾಲ ಮಾಡಿದರೆ ಅದರ ಮರು ಪಾವತಿ ಸರಿಯಾಗಿ ನಡೆಯದಿದ್ದರೆ ಅದು ಶೂಲವಾಗಿ ಕಾಡಿದರೆ ಇಡೀ ವ್ಯವಸ್ಥೆಯೇ ತೊಯ್ದಾಡುವ ಸಾಧ್ಯತೆಗಳು ಅಧಿಕ.
ಸಾಲ ಏಕೆ ಹೆಚ್ಚಾಗುತ್ತಿದೆ?
ಜೀವನ ಮಟ್ಟ ಸುಧಾರಿಸಬೇಕು. ವಾಸಕ್ಕೆ ಉತ್ತಮ ವ್ಯವಸ್ಥೆಯ ಮನೆ, ಬಂಗ್ಲೆ ಬೇಕು. ಓಡಾಟಕ್ಕೆ ಕಾರು ಬೇಕು, ಬೇಗನೆ ಶ್ರೀಮಂತ ನಾಗಬೇಕು… ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಯ ಆಸೆಯೇ ಇದಕ್ಕೆಲ್ಲ ಕಾರಣ. ಆದಾಯದ ಮಿತಿಯೊಳಗಿನ ಆಲೋಚನೆಗಳು ಉತ್ತಮವೇ. ಆದರೆ ಅದಕ್ಕಿಂತ ಮಿಗಿಲಾಗಿ ಓಡಿದರೆ ಜೀವನದ ಲಯವೇ ತಪ್ಪುವ ಅಪಾಯವಿದೆ. ಈಗ ಆಗುತ್ತಿರುವುದು ಇದುವೇ. ಜನರಲ್ಲಿರುವ ಆಸ್ತಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲದ ಭಾರ ಇದೆ.
ಆದಾಯ-ಖರ್ಚು
ವೈಯಕ್ತಿಕವಾಗಿ ಪ್ರತಿಯೊಬ್ಬರೂ ಅರ್ಥ ಶಾಸ್ತ್ರ ಪಂಡಿತರಾಗುವುದು ಅಗತ್ಯ. ಯಾವುದೇ ಸಾಲ ಪಡೆಯುವ ಮೊದಲು ಅದರ ಮರುಪಾವತಿಗೆ ಅಡ್ಡಿಯಾಗಬಹುದಾದ ಅಂಶಗಳ ಕುರಿತು ಮೊದಲು ಆಲೋ ಚಿಸುವುದು ಮುಖ್ಯ. ಅಂದರೆ ಹಣದುಬ್ಬರ ಏರಿಕೆಯಾದರೆ ಸಾಲದ ಕಂತು ಎಷ್ಟು ಹೆಚ್ಚಾಗುತ್ತಾ ಸಾಗಬಹುದು. ಆದಾಯ ಹೆಚ್ಚಲು ಕಾರಣವಾಗುವ ಉದ್ಯೋಗದಾತರ ಭಡ್ತಿ, ವೇತನ ಏರಿಕೆ ಪ್ರಮಾಣ, ಬೋನಸ್ ಯಾವ ರೀತಿಯಲ್ಲಿ ಇರಬಹುದು ಎಂಬುದರ ಮೇಲೆ ಸೂಕ್ಷ್ಮ ಲೆಕ್ಕಾಚಾರ ಹಾಗೂ ಅದನ್ನು ಸರಿದೂಗಿಸಲು ಇರುವ ಅವಕಾಶಗಳ ಬಗ್ಗೆ ಮೊದಲೇ ಅಂದಾಜು ಮಾಡುವುದು ಅಗತ್ಯ. ಇವಿಷ್ಟು ಅಲ್ಲದೆ ಇತ್ತೀಚೆಗಿನ ವರ್ಷಗಳಲ್ಲಿ ಆರೋಗ್ಯ ಸಮಸ್ಯೆ ಎಂಬುದು ಯಾ ರಿಗೂ, ಯಾವಾಗ ಬೇಕಾದರೂ ಎದುರಾಗಬಹುದಾದ ಮತ್ತೂಂದು ಕಂಟಕ. ಅದಕ್ಕಾಗಿಯೂ ಒಂದಿಷ್ಟು ಪಾಲು ಮೀಸಲು ಇರಿಸುವುದು ಅಗತ್ಯ. ಇಲ್ಲವಾದಲ್ಲಿ ಎಲ್ಲ ಲೆಕ್ಕಾ ಚಾರಗಳೂ ತಲೆಕೆಳಗಾಗುವ ಅಪಾಯವಿದೆ.
ಶ್ರೀಮಂತರಾಗುವ ಹಂಬಲ
ದಿಢೀರ್ ಶ್ರೀಮಂತರಾಗುವ ಹಂಬಲವೂ ಸಾಲ ಮಾಡುವುದಕ್ಕೆ ಒಂದು ಕಾರಣ. ಹೇಗೆಂದರೆ ಬ್ಯಾಂಕ್ ಸಹಿತ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಯಲ್ಲಿ ಸಾಲ ಪಡೆದು ಅದನ್ನು ಜೂಜು, ಹಣ ದ್ವಿಗುಣ ಗೊಳಿಸುವ ಆಮಿಷದ ಯೋಜನೆ, ಫಂಡ್, ಚೀಟಿ ವ್ಯವಹಾರ, ಪಾಂಜಿ ಸ್ಕೀಮ್, ಅತಿ ಯಾದ ಚಕ್ರಬಡ್ಡಿಯ ಆಸೆಯಲ್ಲಿ ಬೇಕಾಬಿಟ್ಟಿ ಕೈಸಾಲ ನೀಡುವ ಮೂಲಕ ವಿನಿಯೋ ಗಿಸುವುದು. ಇಂತಹ ಕಡೆ ಮಾಡಿರುವ ಹೂಡಿಕೆಗಳಿಗೆ ಕಾನೂನಿನ ಮಾನ್ಯತೆಯೇ ಇರುವುದಿಲ್ಲ. ಹಾಗಿದ್ದಾಗ ಭದ್ರತೆ ಇರಲು ಸಾಧ್ಯವೇ ಇಲ್ಲ. ಇನ್ನು ಕೆಲವರು ಯಾವುದೇ ಜ್ಞಾನ ಇಲ್ಲದಿದ್ದರೂ ಷೇರುಪೇಟೆಯಲ್ಲಿ ವಿವೇಕಹೀನರಾಗಿ ಹೂಡಿಕೆ ಮಾಡುತ್ತಾರೆ. ಷೇರುಪೇಟೆಯ ಏರಿಳಿತದ ಅನುಭವವೂ ಇಲ್ಲದೆ, ಕಾಯುವ ತಾಳ್ಮೆಯೂ ಇಲ್ಲದೆ ಕೈ ಸುಟ್ಟುಕೊಳ್ಳುವ ಅಪಾಯ ಇದ್ದೇ ಇದೆ.
ಒಟ್ಟಿನಲ್ಲಿ ಕೆಲವೊಂದು ಆವಶ್ಯಕತೆಗಳಿಗೆ ಸಾಲ ಅಗತ್ಯವಾಗಿದ್ದರೂ ಅದು ಒಂದು ಶಿಸ್ತಿ ನಲ್ಲಿದ್ದರೆ ಅಗತ್ಯವಿದ್ದಷ್ಟು ಮಾತ್ರ ಸಾಲ ಮಾಡಿ ಅದನ್ನು ಪಾವತಿಸುವ ಸಮರ್ಪಕ ಯೋಜನೆ ಇದ್ದರಷ್ಟೇ ವೈಯಕ್ತಿಕವಾಗಿ ಮಾತ್ರ ವಲ್ಲದೆ ಒಟ್ಟಾರೆ ಆರ್ಥಿಕತೆ ಸುಸ್ಥಿರವಾಗಿರಲು ಸಾಧ್ಯ.
ಕೆ.ರಾಜೇಶ್ ಮೂಲ್ಕಿ