ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ
Team Udayavani, Aug 13, 2022, 5:50 AM IST
ಸಿ. ರಾಜಗೋಪಾಲಾಚಾರಿ
(1878- 1972)
ರಾಜಗೋಪಾಲಾಚಾರಿ ಅವರು ಉದಾರ ನಾಯಕ ಹಾಗೂ ದೃಢವಾದ ರಾಷ್ಟ್ರೀಯವಾದಿಯಾಗಿದ್ದರು. ಇವರು ಸಾಂವಿಧಾನಿಕ ನಿಯಮಗಳ ಮೇಲೆ ಒತ್ತು ನೀಡುವುದರ ಜತೆಗೆ ಶಿಕ್ಷಣದತ್ತಲೂ ಒತ್ತು ಕೊಟ್ಟರು. ಉಚಿತ ಮಾರುಕಟ್ಟೆ ಹಾಗೂ ಸಂವಹನದಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಇವರಿಗಿದ್ದ ನಂಬಿಕೆಯಿಂದಾಗಿ ಅವರು ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದರು ಹಾಗೂ 1951ರಲ್ಲಿ ಸಂಸತ್ತಿನಿಂದ ಹೊರಬಂದರು.
ಭಗತ್ಸಿಂಗ್
1907 -1931
ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ವೀರ ಭಗತ್ ಸಿಂಗ್. ಲೆನಿನ್ ಸೇರಿದಂತೆ ಹಲವರ ಪ್ರೇರಣೆಗೆ ಒಳಗಾಗಿದ್ದರು. ಲಾಲಾ ಲಜಪತ್ ರಾಯರ ಅತ್ಯಾಪ್ತರಾಗಿದ್ದರು. ಬ್ರಿಟಿಷ್ ಆಡಳಿತಾವಧಿಯಲ್ಲಿ ಎರಡು ಪ್ರಮುಖ ದಾಳಿಗಳನ್ನು ಮಾಡಿದ್ದರು. ಅದರಲ್ಲಿ ಒಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರನ್ನು ಹತ್ಯೆಗೈದಿದ್ದರು. ಮತ್ತೂಂದು ದಿಲ್ಲಿಯ ಸೆಂಟ್ರಲ್ ಲೆಜಿಸ್ಲೆಟೀವ್ ಅಸೆಂಬ್ಲಿ ಮೇಲೆ ದಾಳಿ ಮಾಡಿದ್ದರು. ಕೇವಲ 23ನೇ ವಯಸ್ಸಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದರು.
ಭಗವತಿ ಚರಣ್ ವೋಹ್ರಾ
1903-1930
ಭಗತ್ಸಿಂಗ್, ಸುಖದೇವ್ ಅವರಿಗೆ ಭಗವತಿ ಚರಣ್ ವೋಹ್ರಾ ಆತ್ಮೀಯರು. 1917ರ ಅಕ್ಟೋಬರ್ನಲ್ಲಿ ನಡೆದ ಕ್ರಾಂತಿಯಿಂದ ಪ್ರೇರೇಪಣೆ ಪಡೆದಿದ್ದರು. ಬ್ರಿಟಿಷರು ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧವಾಗಿದ್ದರು. ಕಚ್ಚಾ ಬಾಂಬ್ಗಳನ್ನು ತಯಾರಿಸುವಲ್ಲಿ ನಿಪುಣರು. ಅನೇಕ ಬ್ರಿಟಿಷ್ ಅಧಿಕಾರಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಯುವಕರಿಗೆ ಇವರೇ ಪ್ರೇರಣೆಯಾಗಿದ್ದರು.
ಹೇಮಚಂದ್ರ ಕನುಂಗೋ
1857 – 1951
ಮೊದಲ ಬಾರಿಗೆ ಫ್ರಾನ್ಸ್ಗೆ ತೆರಳಿ ಬಾಂಬ್ ತಯಾರಿಸುವುದು, ಸೈನಿಕ ತರಬೇತಿ ಪಡೆದು ಬಂದ ಕ್ರಾಂತಿಕಾರಿ ಹೇಮಚಂದ್ರ ಕನುಂಗೋ. ಕೊಲ್ಕತಾ ದಲ್ಲಿ ಅನುಶೀಲನ ಸಮಿತಿಯ ಸಹಾಯದಿಂದ ಬಾಂಬ್ ತಯಾರಿಕ ಘಟಕವನ್ನು ಸ್ಥಾಪಿಸಿದರು. ನಿತಿನ್, ಬರೀನ್, ಅರವಿಂದರ ಆಪ್ತವಲಯದಲ್ಲಿದ್ದ ಇವರು ಅನೇಕ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಬಳಕೆ, ಸ್ಫೋಟಕಗಳ ತಯಾರಿಕೆಯ ತರಬೇತಿ ನೀಡುತ್ತಿದ್ದರು.
ಉದ್ದಮ್ಸಿಂಗ್
1899 – 1940
ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಅಚ್ಚಳಿಯದ ಹೆಸರು ಉದ್ದಮ್ ಸಿಂಗ್. 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ನೂರಾರು ಜನ ಭಾರತೀಯರನ್ನು ಬಹಿರಂಗವಾಗಿ ಹತ್ಯೆ ಮಾಡಿದ ಬ್ರಿಟಿಷ್ ಅಧಿಕಾರಿ ಪಂಜಾಬ್ನ ಲೆಫ್ಟಿನೆಂಟ್ ಗವರ್ನರ್ ಜನರಲ್ ಡೈಯರ್ನನ್ನು ಬ್ರಿಟಿಷ್ ಸಾಮ್ರಾಜ್ಯ ಲಂಡನ್ನಲ್ಲಿ 1940ರಲ್ಲಿ ಗುಂಡಿಟ್ಟು ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡ ಅಪ್ರತಿಮ ಕ್ರಾಂತಿಕಾರಿ. ಗದರ್ ಪಕ್ಷದ ಸದಸ್ಯರಾಗಿದ್ದರು.
ಶಿವ್ವರ್ಮಾ
1904 – 1997
ಕಾನ್ಪುರದ ಡಿಎವಿ ಕಾಲೇಜಿನ ಹಳೆ ವಿದ್ಯಾರ್ಥಿ. ಭಗತ್ಸಿಂಗ್ ಹಾಗೂ ಇನ್ನಿತರ ಕ್ರಾಂತಿಕಾರಿಗಳ ಗೆಳೆಯ ರಾಗಿದ್ದರು. ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು. 1930ರ ವೇಳೆಗೆ ಜೈಲು ಸೇರಿದ್ದರು. ಸುಮಾರು ವರ್ಷ ಜೈಲಿನಲ್ಲಿದ್ದ ಅವರು 1946ರಲ್ಲಿ ಬಿಡುಗಡೆಯಾದರು.
ಸೂರ್ಯ ಸೇನ್
1894 – 1934
ಮೂಲತಃ ಶಿಕ್ಷಕ ವೃತ್ತಿಯ ಸೂರ್ಯ ಸೇನ್ 1930ರಲ್ಲಿ ಚಿತ್ತಾಗಾಂಗ್ನಲ್ಲಿ ಬ್ರಿಟಿಷರ ಶಸ್ತ್ರಾಗಾರದ ಮೇಲೆ ದಾಳಿ ಮಾಡಿದ ತಂಡದ ನಾಯಕ. ಮೂರು ವರ್ಷದ ಬಳಿಕ ಬ್ರಿಟಿಷರಿಗೆ ಸೆರೆಸಿಕ್ಕ ಸೇನ್ರನ್ನು ಹೀನಾಯವಾಗಿ ಥಳಿಸಿ, ಕಿರುಕುಳ ನೀಡಲಾಗಿತ್ತು. ಗಲ್ಲಿಗೇರಿಸುವ ಮುನ್ನ ಹಲ್ಲು ಮತ್ತು ಉಗುರುಗಳನ್ನು ತೆಗೆಯಲಾಗಿತ್ತು.
ಅಲ್ಲೂರಿ ಸೀತಾರಾಮರಾಜು
1897 -1924
ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಸಶಸ್ತ್ರ ಅಭಿಯಾನ ನಡೆಸಿದ ಕ್ರಾಂತಿ ಕಾರಿ. ಸ್ವಾತಂತ್ರ್ಯಕ್ಕಾಗಿ ಹಾಗೂ ಈಸ್ಟ್ ಗೋದಾವರಿ ಮತ್ತು ವಿಶಾಖಪಟ್ಟಣ ಪ್ರಾಂತದಲ್ಲಿ ಆದಿವಾಸಿ ಮತ್ತು ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗಾಗಿ ಹೋರಾಡಿದವರು. 1922ರಲ್ಲಿ ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ ಅರಣ್ಯ ಕಾಯ್ದೆ ವಿರುದ್ಧ ರಂಪ ದಂಗೆ ಹೋರಾಟ ನಡೆಸಿದ್ದರು.
ಸುಖ್ದೇವ್ ಥಾಪರ್
1907 – 1931
ಸುಖ್ ದೇವ್ ಥಾಪರ್ ಪಂಜಾಬ್ನ ಲೂಧಿಯಾನದವರು. 1929ರಲ್ಲಿ ಲಾಹೋರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಭಗತ್ಸಿಂಗ್ ಹಾಗೂ ಶಿವರಾಮ್ ರಾಜ್ಗುರು ಜತೆಗೆ ಸುಖ್ದೇವ್ ಥಾಪರ್ ಅವರನ್ನು 1931ರಲ್ಲಿ ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಸುಖ್ದೇವ್, ಹಿಂದೂಸ್ತಾನ್ ಸೋಶಿ ಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ನ ಸದಸ್ಯರಾಗಿದ್ದರು.
ಚಂದ್ರಶೇಖರ್ ಆಜಾದ್
1906 – 1931
ಮಧ್ಯಪ್ರದೇಶದಲ್ಲಿ ಜನಿಸಿದ ಇವರು ಕ್ರಾಂತಿಕಾರಿ ಹಾಗೂ ಸಮಾಜವಾದಿ ನಾಯಕರಾಗಿದ್ದರು. ದಾಳಿಗಳ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ್ದರು. ಮಹಾತ್ಮಾ ಗಾಂಧೀಜಿಯ ಅಹಿಂಸಾ ತತ್ವದ ವಿರೋಧಿಯಾಗಿದ್ದರು. ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಾಹೋರ್ನಲ್ಲಿ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದರು ಹಾಗೂ ಅಸೆಂಬ್ಲಿಗೆ ಬಾಂಬ್ ಹಾಕಿದ್ದರು.
ಶಿವರಾಮ್ ಹರಿ ರಾಜ್ಗುರು
1908-1931
ಕ್ರಾಂತಿಕಾರಿಗಳಾದ ವೀರ ಭಗತ್ಸಿಂಗ್ ಮತ್ತು ಸುಖ್ದೇವ್ರ ಸಹೋದ್ಯೋಗಿಯಾಗಿದ್ದರು. 1928ರಲ್ಲಿ ಲಾಹೋರ್ನಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸೌಂಡರ್ಹತ್ಯೆಯಲ್ಲಿ ಭಾಗಿಯಾಗಿದ್ದರು. ಪೊಲೀಸರ ದಾಳಿಯಲ್ಲಿ ಲಾಲಾ ಲಜಪತ್ ರಾಯರು ಸಾವಿಗೀಡಾದ ಹಿನ್ನೆಲೆಯಲ್ಲಿ ಸೇಡಿಗಾಗಿ ಅವರು ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿದ್ದರು. ಲಾಹೋರ್ನಲ್ಲಿ ಜನಿಸಿದ್ದ ಕ್ರಾಂತಿಕಾರಿ ಸ್ವಾಂತಂತ್ರ್ಯ ಹೋರಾಟಗಾರ ಶಿವರಾಮ್ ಹರಿ ರಾಜ್ಗುರು ತನ್ನ 22ನೇ ವಯಸ್ಸಿನಲ್ಲಿ ಗಲ್ಲಿಗೆ ಕೊರಳೊಡ್ಡಿದರು.
ಜಯಪ್ರಕಾಶ್ ನಾರಾಯಣ್
1902 -1979
ಭಾರತವನ್ನು ಬ್ರಿಟಿಷರ ಕಪಿಮುಷ್ಠಿ ಯಿಂದ ಬಿಡುಗಡೆಗೊಳಿಸಲು ಅತೀ ದೊಡ್ಡ ರಾಜಕೀಯ ಚಳವಳಿಗಳನ್ನು ಸಂಘಟಿಸಿದ ರೂವಾರಿ ಜಯಪ್ರಕಾಶ್ ನಾರಾಯಣ್. ಸಮಾಜವಾದಿ ನಾಯಕ ಜಯಪ್ರಕಾಶ್ರನ್ನು ಜೆಪಿ ಮತ್ತು ಲೋಕನಾಯಕ್ ಎಂದು ಕರೆಯಲಾಗುತ್ತಿತ್ತು. ತಮ್ಮ ನೇತೃತ್ವದಲ್ಲಿ 1970ರಲ್ಲಿ ಇಂದಿರಾಗಾಂಧಿ ವಿರುದ್ಧ ಪ್ರತಿಭಟಿಸಿ ಕ್ರಾಂತಿಗೆ ಕರೆಕೊಟ್ಟರು. ಜೆಪಿ ಅವರ ಚಳವಳಿ ಭಾರತದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.
ರವೀಂದ್ರ ನಾಥ್ ಟಾಗೋರ್
1861- 1941
ರಾಷ್ಟ್ರಗೀತೆ ಸೇರಿದಂತೆ ಹಲವು ಗೀತೆಗಳನ್ನು ರಚಿಸಿದವರು. ಬಂಗಾಲದ ಬೌದ್ಧಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದರು. ಬಂಗಾಲದ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ಮೆರುಗು ಕೊಟ್ಟವರು. ಬಹುಪತ್ನಿತ್ವದ ವಿರೋಧಿಯಾಗಿದ್ದರು. ದೇಶಾದ್ಯಂತ ಕಲಾವಿದರು ಹಾಗೂ ಲೇಖಕರಿಗೆ ಪ್ರೇರಣೆಯಾಗಿದ್ದರು. ಗೀತಾಂಜಲಿ ಕೃತಿಗೆ ನೊಬೆಲ್ ಪ್ರಶಸ್ತಿ ಪಡೆದಿದ್ದ ಇವರು ಬ್ರಿಟಿಷ್ ಸಾರ್ವಭೌಮತ್ವವನ್ನು ವಿರೋಧಿಸಿದ್ದರು.
ಜತೀಂದ್ರನಾಥ್ ದಾಸ್
1904-1929
ಕೊಲ್ಕತಾದಲ್ಲಿ ಜನನ. ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ರಾಗಿದ್ದ ಜತೀಂದ್ರನಾಥ್ ದಾಸ್ ಜತೀನ್ ದಾಸ್ ಎಂದೇ ಖ್ಯಾತಿ ಯಾಗಿದ್ದರು. ಗಾಂಧೀಜಿಯ ಅಹಿಂಸಾ ತತ್ತವನ್ನು ವಿರೋ ಧಿಸುತ್ತಿದ್ದರು. ಗನ್ ಮೂಲಕವೇ ಬ್ರಿಟಿಷರಿಗೆ ಉತ್ತರಿಸಬೇಕೆಂಬು ದನ್ನು ಮನಗಂಡಿದ್ದರು. ಲಾಹೋರ್ ಪ್ರಾಂತದಲ್ಲಿ ನಡೆದ ದಾಳಿ ಹಿನ್ನೆಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಜೈಲಿನಲ್ಲೇ 63 ದಿನ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಅವರು 1929ರ ಜುಲೈ 13ರಂದು ತಮ್ಮ 25ನೇ ವಯಸ್ಸಿನಲ್ಲಿ ಅಸುನೀಗಿದರು.
ಗೋವಿಂದ್ಬಲ್ಲಾಬ್ಪಂತ್
1887 -1961
ಸ್ವಾತಂತ್ರ್ಯ ಹೋರಾಟಗಾರರು, ಪ್ರಖ್ಯಾತ ವಕೀಲರು. ಬ್ರಿಟಿಷ್ ಆಡಳಿತದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಪ್ರತಿನಿಧಿಯಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆ ಅತ್ಯುತ್ತಮ ಭಾರತವಾಗಿ ರೂಪಿಸಲು ಗಾಂಧೀಜಿ ಅವರೊಂದಿಗೆ ಕೈ ಜೋಡಿಸಿದ್ದರು. 1957ರಲ್ಲಿ ಭಾರತರತ್ನ ಪ್ರಶಸ್ತಿಯನ್ನೂ ಪಡೆದಿದ್ದರು. 1961ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.