ನೋವಿನ ಬೆಂಕಿಯಲ್ಲಿ ಅರಳಿದ ನಲಿವುಗಳು : ಪ್ಯಾರಾ ತಾರೆಯರ ಮರೆಯಲಾಗದ ಕಥೆಗಳು


Team Udayavani, Sep 6, 2021, 6:10 AM IST

ನೋವಿನ ಬೆಂಕಿಯಲ್ಲಿ ಅರಳಿದ ನಲಿವುಗಳು : ಪ್ಯಾರಾ ತಾರೆಯರ ಮರೆಯಲಾಗದ ಕಥೆಗಳು

ಭಾರತದಲ್ಲಿ ಒಲಿಂಪಿಕ್ಸ್‌ ಎಂದರೆ ಜನ ತಲೆಕೆಡಿಸಿಕೊಳ್ಳದ ಕಾಲವೊಂದಿತ್ತು. ಕಾರಣ ಇಲ್ಲಿ ಭಾರತೀಯರು ಗೆಲ್ಲುವುದೇ ಇಲ್ಲ ನಿರಾಶಾಭಾವ. ಈಗ   ಪರಿಸ್ಥಿತಿ ಬದಲಾಗಿದೆ. ಒಲಿಂಪಿಕ್ಸ್‌ ಹಾಗಿರಲಿ ಪ್ಯಾರಾಲಿಂಪಿಕ್ಸ್‌ನಲ್ಲೂ ಭಾರತೀಯರು ಭರ್ಜರಿಯಾಗಿ ಪದಕಗಳ  ಬೇಟೆಯಾಡುತ್ತಿದ್ದಾರೆ. ಈ ಬಾರಿ ಭಾರತೀಯರು 5 ಚಿನ್ನ, 8 ಬೆಳ್ಳಿ, 6 ಕಂಚಿನ ಪದಕಗಳ ಸಹಿತ ಒಟ್ಟು 19 ಪದಕಗಳನ್ನು ಗೆದ್ದಿದ್ದಾರೆ. ಇದು ಭಾರತೀಯರ ಪ್ಯಾರಾಲಿಂಪಿಕ್ಸ್‌ ನಲ್ಲಿ ಅತೀ ಶ್ರೇಷ್ಠ ಸಾಧನೆ. ಆ್ಯತ್ಲೀಟ್‌ಗಳ ಇಂತಹ ಸಾಧನೆಯ ಹಿಂದೆ ಮಹಾನ್‌ ಕಥೆಗಳಿರುತ್ತವೆ. ಹಲವು ನೋವುಗಳು, ದುರಂತಗಳು, ಸವಾಲುಗಳನ್ನು ಗೆದ್ದು ಅದ್ಭುತ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅಂತಹ ಸಾಹಸಗಾಥೆಯನ್ನು ಚುಟುಕಾಗಿ ಹಿಡಿದಿಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

11 ವರ್ಷದಲ್ಲಿ ಅಪಘಾತಕ್ಕೊಳಗಾದ ಅವನಿ ಲಖೇರಾ :

ರಾಜಸ್ಥಾನದ ಜೈಪುರದ ಶೂಟರ್‌ ಅವನಿ ಲಖೇರಾಗೆ ಕೇವಲ 19 ವರ್ಷ. ಒಂದೇ ಪ್ಯಾರಾಲಿಂಪಿಕ್ಸ್‌ ಕೂಟದಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳೆ ಅವರು. ಆ.30ರಂದು ಅವರು 10 ಮೀ. ಏರ್‌ರೈಫ‌ಲ್‌ ಎಸ್‌ಎಚ್‌1ನಲ್ಲಿ ಬಂಗಾರ, ಸೆ.3ರಂದು 50 ಮೀ. ರೈಫ‌ಲ್‌ನಲ್ಲಿ ಕಂಚು ಗೆದ್ದಿದ್ದಾರೆ. ಇಂತಹ ಅವನಿ ಕೇವಲ 11 ವರ್ಷದವರಿದ್ದಾಗ ನಡೆಯಬಾರದ ಘಟನೆಯೊಂದು ನಡೆಯಿತು.  ಆ ವಯಸ್ಸಿನಲ್ಲಿ ಕಾರು ಅಪಘಾತ ನಡೆಯಿತು. ಪರಿಣಾಮ ಬೆನ್ನುಮೂಳೆಗೆ ಬಲವಾದ ಏಟಾಯಿತು. ಅದರಿಂದ ಎರಡೂ ಕಾಲುಗಳು ಶಕ್ತಿ ಕಳೆದುಕೊಂಡವು. ಆದರೆ ತಂದೆಯ ಪ್ರೋತ್ಸಾಹದಿಂದ ಶೂಟಿಂಗ್‌ ಅಭ್ಯಾಸ ಮಾಡತೊಡಗಿದರು. ಈ ಹಂತದಲ್ಲಿ ಅವರ ನೆರವಿಗೆ ನಿಂತು ತರಬೇತಿ ನೀಡಿದ್ದು ಕರ್ನಾಟಕದ ಖ್ಯಾತ ಶೂಟರ್‌ ಸುಮಾ ಶೀರೂರ್‌. ಅವನಿ ಶೂಟಿಂಗನ್ನು ಗಂಭೀರವಾಗಿ ಸ್ವೀಕರಿಸಲು ಕಾರಣ ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಅವರ ಆತ್ಮಕಥನ ಎ ಶಾಟ್‌ ಆ್ಯಟ್‌ ಗ್ಲೋರಿಯಸ್‌. ಅದನ್ನು ಓದಿದ ಮೇಲೆ ಶೂಟಿಂಗ್‌ ಅವರ ಜೀವನವೇ ಆಯಿತು.

ಮನೀಷ್‌ ಹುಟ್ಟಿನಿಂದ ಬಂದ ದೋಷಕ್ಕೆ ಶೂಟಿಂಗ್‌ ಉತ್ತರ :

19 ವರ್ಷದ ಮನೀಷ್‌ ನರ್ವಾಲ್‌ ಸೆ.4ರಂದು ಮಿಶ್ರ 50 ಮೀ. ಪಿಸ್ತೂಲ್‌ನಲ್ಲಿ (ಎಸ್‌ಎಚ್‌1 ವಿಭಾಗ) ಚಿನ್ನ ಗೆದ್ದರು. ಹರಿಯಾಣದ ಫ‌ರೀದಾಬಾದ್‌ನವರಾದ ಅವರು ಆರಂಭದಲ್ಲಿ ಫ‌ುಟ್ಬಾಲರ್‌ ಆಗಬೇಕೆಂದುಕೊಂಡಿದ್ದರು. ಆದರೆ ಬಲಗೈ ಸಮಸ್ಯೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಹುಟ್ಟಿನಿಂದಲೇ ಇವರ ಬಲಗೈ ತುಸು ದುರ್ಬಲ. ಸ್ಥಳೀಯ ಕ್ಲಬ್‌ಗಳಲ್ಲಿ ಫ‌ುಟ್‌ಬಾಲರ್‌ ಆಗಿದ್ದರೂ, ಮುಂದೆ ವಿಧಿಯಿಲ್ಲದೇ ಶೂಟಿಂಗ್‌ ಆಯ್ದುಕೊಂಡರು. ಇದೀಗ ಭಾರತದ ಕ್ರೀಡಾಜಗತ್ತಿನಲ್ಲಿ ನೂತನ ತಾರೆಯಾಗಿದ್ದಾರೆ. 2016ರಲ್ಲಿ ದಿಲಾºಗ್‌ ಎನ್ನುವವರು ಮನೀಷ್‌ ಅವರನ್ನು ಬಲ್ಲಾಬ್‌ಗಢದ ಶೂಟಿಂಗ್‌ ರೇಂಜ್‌ಗೆ ಕರೆದೊಯ್ದರು. ಈ ಹೊತ್ತಿನಲ್ಲಿ ಪ್ಯಾರಾಲಿಂಪಿಕ್ಸ್‌ ಬಗ್ಗೆ ತಿಳಿಸಿದ್ದು ಕೋಚ್‌ ಜೈಪ್ರಕಾಶ್‌ ನೌತಿಯಾಲ್‌. ಇವರ ನೆರವಿನಿಂದ ಮನೀಷ್‌ 2017ರ ಬ್ಯಾಂಕಾಕ್‌ ವಿಶ್ವಕಪ್‌ನಲ್ಲಿ ಚಿನ್ನ, 2018ರ ಜಕಾರ್ತ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ಹೊಳೆದರು.

ಪ್ರಮೋದ್‌ ಭಗತ್‌ಗೆ ಪೋಲಿಯೋ ಅಡ್ಡಿಯಾಗಲಿಲ್ಲ  : ಪುರುಷರ ಎಸ್‌ಎಲ್‌3 ಎಂಬ ಶೀರ್ಷಿಕೆಯಡಿ ವಿಶ್ವ ನಂ.1 ಬ್ಯಾಡ್ಮಿಂಟನ್‌ ಆಟಗಾರ ಪ್ರಮೋದ್‌ ಭಗತ್‌ ದೈಹಿಕ ನ್ಯೂನತೆ ಬರುತ್ತದೆ. ಅಂದರೆ ಸೊಂಟದಿಂದ ಕೆಳಭಾಗ ತುಸು ದುರ್ಬಲವಾಗಿರುತ್ತದೆ. ಆದರೆ ನಿಂತುಕೊಂಡೇ ಸ್ಪರ್ಧಿಸಲು ಸಾಧ್ಯವಿದೆ. ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ ಎಂಬ ಹೆಗ್ಗಳಿಕೆ ಹೊಂದಿರುವ ಭಗತ್‌, ಸೆ.4ರಂದು ಬಂಗಾರ ಗೆದ್ದು ಬಂಗಾರದಂತೆ ಹೊಳೆದಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಎಂಬ ಊರಿಗೆ ಸೇರಿರುವ ಭಗತ್‌,  ಪ್ರಸ್ತುತ ಒಡಿಶಾದ ಭುವನೇಶ್ವರದಲ್ಲಿದ್ದಾರೆ. ಅವರು ಐದನೇ ವರ್ಷದಲ್ಲಿ ಪೋಲಿಯೋಗೆ ತುತ್ತಾದರು. ಪರಿಣಾಮ ಎಡಗಾಲಿನಲ್ಲಿ ತುಸು ಊನ ಉಂಟಾಯಿತು. 13ನೇ ವರ್ಷದಲ್ಲಿ ನೆರೆಹೊರೆಯವರು ಬ್ಯಾಡ್ಮಿಂಟನ್‌ ಆಡುವುದನ್ನು ನೋಡಿ ಭಗತ್‌  ಆಕರ್ಷಿತರಾದರು. ಪರಿಣಾಮ ಈಗವರು ವಿಶ್ವದ ಶ್ರೇಷ್ಠ ಶಟ್ಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಭವಿನಾ ಹುಟ್ಟಿ 12 ತಿಂಗಳಿಗೇ ಪೋಲಿಯೋ :

ಟೇಬಲ್‌ ಟೆನಿಸ್‌ ಆಟಗಾರ್ತಿ ಭವಿನಾಬೆನ್‌ ಪಟೇಲ್‌ ಈ ಬಾರಿ ಬೆಳ್ಳಿ ಗೆಲ್ಲಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಟಿಟಿ ಸಿ4 ವಿಭಾಗದಲ್ಲಿ ಫೈನಲ್‌ಗೇರಿ ಅಲ್ಲಿ ಸೋತು ಬೆಳ್ಳಿಗೆ ಸಮಾಧಾನಪಟ್ಟರು. ಈ ಸಾಧನೆ ಸುಮ್ಮಸುಮ್ಮನೆ ಆಗಿದ್ದಲ್ಲ.  ಭವಿನಾ (34) ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಸುಂಧಿಯ ಎಂಬ ಹಳ್ಳಿಯಲ್ಲಿ ಜನಿಸಿದರು. ಹುಟ್ಟಿ ಕೇವಲ 12 ತಿಂಗಳಾಗಿದ್ದಾಗ ಪೋಲಿಯೋ ಬಂದು ಆಕೆಯ ಎರಡೂ ಕಾಲುಗಳು ನಿರ್ಬಲಗೊಂಡಿದ್ದವು.  ಈ ಸ್ಥಿತಿಯಲ್ಲೇ ಬೆಳೆದ ಅವರಿಗೆ ಟೇಬಲ್‌ ಟೆನಿಸ್‌ ಎಂಬ ಕ್ರೀಡೆಯಿದೆ, ಭವಿಷ್ಯ ಕಂಡುಕೊಳ್ಳಬಹುದು ಎಂಬ ಬಗ್ಗೆ ಅರಿವೇ ಇರಲಿಲ್ಲ. 2005ರಲ್ಲಿ ಕಂಪ್ಯೂಟರ್‌ ಸೈನ್ಸ್‌ ಕಲಿಯಲು ಅಹ್ಮದಾಬಾದ್‌ಗೆ ತೆರಳಿದ್ದಾಗ ದೃಷ್ಟಿದೋಷ ಹೊಂದಿದ್ದ ಮಕ್ಕಳು ಟಿಟಿ ಆಡುವುದನ್ನು ನೋಡಿದರು. 2008ರ ಹೊತ್ತಿಗೆ ಟಿಟಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆ ಹೊತ್ತಿಗೆ ಊಟ, ನಿದ್ರೆಯನ್ನೂ ಮರೆತು ಟಿಟಿಯಲ್ಲಿ ಮುಳುಗಿದರು. 2011ರಲ್ಲಿ ಬ್ಯಾಂಕಾಕ್‌ನಲ್ಲಿ ಬೆಳ್ಳಿ ಗೆದ್ದ ನಂತರ ಅವರ ಜೀವನವೇ ಬದಲಾಯಿತು.

ಎತ್ತರೆತ್ತರಕ್ಕೆ ಜಿಗಿಯುತ್ತಲೇ ಇದ್ದಾರೆ ನಿಶಾದ್‌  :

ನಿಶಾದ್‌ ಕುಮಾರ್‌ ಎತ್ತರ ಜಿಗಿತ ಟಿ47 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 21 ವರ್ಷದ ನಿಶಾದ್‌ ಹಿಮಾಚಲಪ್ರದೇಶದ ಉನಾ­ದವರು. 8ನೇ ವಯಸ್ಸಿನಲ್ಲಿ  ಟ್ರ್ಯಾಕ್ಟರ್‌ಗೆ ಸಿಲುಕಿ ಬಲಗೈ ಕಳೆದುಕೊಂಡರು. ಅದಾಗಿ ಎರಡೇ ವರ್ಷಕ್ಕೆ ಅಂದರೆ 2009ರಿಂದ ಪ್ಯಾರಾ ಆ್ಯತ್ಲೆಟಿಕ್ಸ್‌ ತರಬೇತಿ ಆರಂಭಿಸಿದರು. ಈ ಕ್ರೀಡೆಯಲ್ಲಿ ಬೆಳೆಯುತ್ತಲೇ ಸಾಗಿದರು. ಈ ವರ್ಷ ಪ್ಯಾರಾಲಿಂ

ಪಿಕ್ಸ್‌ಗೆ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ತರಬೇತಿ ನಡೆಸುತ್ತಿದ್ದಾಗಲೇ ಕೊರೊನಾ ಸಂಕಟಕ್ಕೆ ಸಿಲುಕಿದರು. ಅವೆಲ್ಲವನ್ನೂ ಮೀರಿನಿಂತ ಪರಿಣಾಮ ಈ ವರ್ಷ ಪ್ಯಾರಾಲಿಂಪಿಕ್ಸ್‌ ಸೇರಿ ಒಟ್ಟು  2 ಬೆಳ್ಳಿ ಪದಕ ಗೆದ್ದಿದ್ದಾರೆ.

ಎಡಗಾಲಿಲ್ಲದ ನೋವಿನ ನಡುವೆ ಚಿನ್ನದ ಗೆಲುವು :

ಹರಿಯಾಣದ ಸುಮಿತ್‌ ಆಂತಿಲ್‌ ಅವರು ಆ.30ರಂದು ಜಾವೆಲಿನ್‌ “ಎಫ್‌ 64′ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಹುಟ್ಟಿದ್ದು ಹರಿಯಾಣದ ಸೋನೆಪತ್‌ ಜಿಲ್ಲೆಯ ಖೆÌರದಲ್ಲಿ. 2015ರಲ್ಲಿ ಅವರಿಗೆ 17 ವರ್ಷವಾಗಿತ್ತು. ಆ ವೇಳೆ ನಡೆದ ಬೈಕ್‌ ಅಪಘಾತ ವೊಂದು ಬದುಕಿನ ದುರಂತವೊಂದಕ್ಕೆ ಕಾರಣವಾಯಿತು. ಪರಿಣಾಮ ಎಡಗಾಲಿನ ಮಂಡಿಯ ಕೆಳಭಾಗ ಕತ್ತರಿಸಿಹೋಯಿತು. ಹಾಗೆಂದು ಅವರು ಸುಮ್ಮನೆ ಕುಳಿತು ಕೊಳ್ಳ ಲಿಲ್ಲ. 2017ರಲ್ಲಿ ಪ್ಯಾರಾ ಆ್ಯತ್ಲೆಟಿಕ್ಸ್‌ ಶುರು ಮಾಡಿದರು. ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ 68.55 ಮೀ. ದೂರ ಜಾವೆಲಿನ್‌ ಎಸೆದು ಚಿನ್ನ ಗೆದ್ದರು. ಗಮನಿಸಿ ಕೇವಲ 7 ವರ್ಷದವರಿ­ದ್ದಾಗ ತಂದೆ ರಾಜ್‌ಕುಮಾರ್‌ರನ್ನು ಸುಮಿತ್‌ ಕಳೆದುಕೊಂಡಿದ್ದರು.

ಹಿಮ್ಮಡಿಯ ಊನವನ್ನು  ಮೀರಿ ನಿಂತ ಸುಹಾಸ್‌ :

ಸುಹಾಸ್‌ ಲಾಳನಕೆರೆ ಯತಿರಾಜ್‌…. ಇಡೀ ದೇಶದಲ್ಲಿ ಈ ಹೆಸರು ಜನಪ್ರಿಯ. ಒಬ್ಬ ಐಎಎಸ್‌ ಅಧಿಕಾರಿಯಾಗಿದ್ದುಕೊಂಡು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಬಿಡುವು ಮಾಡಿಕೊಂಡು; ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರು ಹುಟ್ಟಿದ್ದು 1983ರಲ್ಲಿ, ಜನ್ಮದಿಂದಲೇ ಒಂದು ಕಾಲಿನ ಹಿಮ್ಮಡಿಯಲ್ಲಿ ಊನವಿದೆ. ಆದ್ದರಿಂದ ಎರಡೂ ಕಾಲುಗಳಲ್ಲಿ ಸಮತೋಲನವಿಲ್ಲ. ಆದರೆ ಅವರ ಹೆತ್ತವರು ಮಗನನ್ನು ಈ ಕೊರತೆ ಕಾಡದಂತೆ ಬೆಳೆಸಿದರು. ಅರ್ಥಾತ್‌ ಸಹಜ ಸಾಮರ್ಥ್ಯದ ಮಕ್ಕಳೊಂದಿಗೆ ಪೂರ್ಣವಾಗಿ ಬೆರೆಯಲು ಬಿಟ್ಟರು. ಆಡಲು, ಓಡಲು ಪ್ರೋತ್ಸಾಹಿಸಿದರು. ಪರಿಣಾಮ ಇಂದು ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 2004ರಲ್ಲಿ ಸುರತ್ಕಲ್‌ ಎನ್‌ಐಟಿಯಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ ಮುಗಿಸಿದರು. 2007ರಲ್ಲಿ ಐಎಎಸ್‌ ಮುಗಿಸಿ, ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಗೌತಮಬುದ್ಧ ನಗರದಲ್ಲಿ ಜಿಲ್ಲಾಧಿಕಾರಿ­ಯಾಗಿದ್ದಾರೆ. ತನ್ನ ಅಷ್ಟೂ ಸಾಧನೆಗೆ ತಂದೆಯೇ ಕಾರಣ, ತಾನೇನು ಮಾಡಬೇಕೆಂದು ಬಯಸಿದೆನೋ ಅದಕ್ಕೆಲ್ಲ ಪ್ರೋತ್ಸಾಹ ನೀಡಿದರು ಎಂದು ಸುಹಾಸ್‌ ಹೇಳಿಕೊಂಡಿದ್ದಾರೆ.

4 ವರ್ಷಗಳ ಹಿಂದೆ ಶುರು ಆಯಿತು ಕೃಷ್ಣನಗರ ಪಯಣ :

ರಾಜಸ್ಥಾನದ ಜೈಪುರದವರಾದ ಕೃಷ್ಣನಗರ ಎಂಬ ಈ ಬ್ಯಾಡ್ಮಿಂಟನ್‌ ಆಟಗಾರ; ವಿಶ್ವಕ್ಕೆ ಪರಿಚಯವಾಗಿರುವುದು ಟೋಕಿಯೊ ಪ್ಯಾರಾಲಿಂಪಿಕ್ಸ್‌ ಮೂಲಕ. ಸೆ.5ರ ರವಿವಾರ ಅವರು ಎಸ್‌ಎಚ್‌6 ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ. ಎಸ್‌ಎಚ್‌6 ವಿಭಾಗದಲ್ಲಿ ಸ್ಪರ್ಧಿಸುವ ಆಟಗಾರರು ಸೊಂಟದಿಂದ ಮೇಲ್ಭಾಗದಲ್ಲಿ ದೌರ್ಬಲ್ಯ ಹೊಂದಿರುತ್ತಾರೆ. ನಿಂತುಕೊಂಡು ಆಡುವ ಸಾಮರ್ಥ್ಯವಿರುತ್ತದೆ. ಕೃಷ್ಣನಗರ ಪ್ಯಾರಾ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೇವಲ 4 ವರ್ಷಗಳ ಹಿಂದೆ. ಆಗ ನಡೆದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದರು. 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ದೌರ್ಬಲ್ಯಗಳ ಎದುರಿಸಿದ ಪ್ರವೀಣ್‌  :

ಹೈಜಂಪ್‌ ಟಿ64 ಸ್ಪರ್ಧೆಯಲ್ಲಿ  ಭಾರತದ ಪ್ರವೀಣ್‌ ಕುಮಾರ್‌ ಬೆಳ್ಳಿ ಪಡೆದಿದ್ದಾರೆ. ಉತ್ತರಪ್ರದೇಶದ ನೋಯ್ಡಾದವರಾದ ಪ್ರವೀಣ್‌ (18 ವರ್ಷ)ಗಿದು ಚೊಚ್ಚಲ ಪ್ಯಾರಾಲಿಂಪಿಕ್ಸ್‌! ಅವರು ಪ್ಯಾರಾದಲ್ಲಿ ಎತ್ತರ ಜಿಗಿತ ಕ್ರೀಡೆಯನ್ನು ಆಯ್ದುಕೊಂಡಿದ್ದೇ 2019ರಲ್ಲಿ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಅಭ್ಯಾಸ ಮಾಡಲು ಮೈದಾನಗಳೇ ಸಿಕ್ಕಿರಲಿಲ್ಲ. ಇದರಿಂದ ತಲೆಬಿಸಿಗೊಂಡಿದ್ದ ಅವರು ತಾನೇ ಒಂದಷ್ಟು ಜಾಗವನ್ನು ಅಗೆದು, ಮರಳು ತುಂಬಿ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಅವರು ಹುಟ್ಟಿದ್ದು ಉತ್ತರಪ್ರದೇಶದ ಜೆವಾರ್‌ನ ಗೋವಿಂದಗಢ ಎಂಬ ಹಳ್ಳಿಯಲ್ಲಿ. ಈಗಲೂ ಅಲ್ಲಿ ಸರಿಯಾಗಿ ಒಂದು ರಸ್ತೆಯೂ ಇಲ್ಲ.  ಮಗುವಾಗಿದ್ದಾಗಲೇ ಪ್ರವೀಣ್‌ ಕುಮಾರ್‌ ಎಡಗಾಲಿನ ಗಾತ್ರ ಚಿಕ್ಕದಿತ್ತು. ಪರಿಣಾಮ ಎರಡೂ ಕಾಲುಗಳಲ್ಲಿ ಅಸಮತೋಲನ. ಆದರೆ ಸಹಜ ಮಕ್ಕಳೊಂದಿಗೆ ಸ್ಪರ್ಧಿಸಿ ಬೆಳೆದ ಅವರು ಎತ್ತರ ಜಿಗಿತದಲ್ಲಿ ಹಿಡಿತ ಸಾಧಿಸಿದರು.

8ನೇ ವರ್ಷದಲ್ಲೇ ಎದುರಾದ ನಿಶ್ಶಕ್ತಿಗೆ ಎದೆಯೊಡ್ಡಿದ ಯೋಗೇಶ್‌  :

ದಿಲ್ಲಿಯಲ್ಲಿ 1997ರಲ್ಲಿ ಹುಟ್ಟಿದ ಯೋಗೇಶ್‌ ಕಾಥುನಿಯ ಬಿಕಾಂ ಪದವೀ­ಧರ. ಆ.30ರಂದು ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇದರ ಹಿಂದೊಂದು ಅದ್ಭುತ ಕಥೆಯಿದೆ. ಇವರ ತಂದೆ ಗ್ಯಾನ್‌ಚಂದ್ರ ಕಾಥುನಿಯ ಯೋಧ. ಯೋಗೇಶ್‌ ಕೇವಲ 8 ವರ್ಷದವರಿದ್ದಾಗ ಅಪರೂಪದ ನರದೌರ್ಬಲ್ಯಕ್ಕೆ ತುತ್ತಾದರು. ವೈದ್ಯಕೀಯ ಭಾಷೆಯಲ್ಲಿ ಅದನ್ನು ಗಿಲಿಯನ್‌ ಬಾರ್‌ ಸಿಂಡ್ರೋಮ್‌ (ಪಾರ್ಶ್ವವಾಯು) ಎನ್ನುತ್ತಾರೆ. ಪರಿಣಾಮ ಸೊಂಟದಿಂದ ಕೆಳಗ್ಗೆ ನಿಶ್ಶಕ್ತವಾಯಿತು. ನಡೆಯಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದರು. ಅವರ ತಾಯಿ ಮೀನಾ ದೇವಿ ಮಗನಿಗಾಗಿ ಫಿಸಿಯೊಥೆರಪಿ ಕಲಿತರು. ಪರಿಣಾಮ ಮುಂದಿನ ಮೂರು ವರ್ಷಗಳ ಅನಂತರ ಯೋಗೇಶ್‌ ನಡೆಯಲು ಆರಂಭಿಸಿದರು. ಕೇವಲ 4 ವರ್ಷದ ಹಿಂದೆ ಪ್ಯಾರಾ ಆ್ಯತ್ಲೆಟಿಕ್ಸ್‌ ತರಬೇತಿ ಆರಂಭಿಸಿದರು. ಈ ವರ್ಷವಂತೂ ಕೊರೊನಾ ಕಾರಣ ಮೈದಾನ ಸಿಗದೇ, ತರಬೇತುದಾರರೂ ಸಿಗದೇ ಒದ್ದಾಡಿದ್ದಾರೆ. ಅದರ ನಡುವೆಯೇ ಬೆಳ್ಳಿ ಗೆದ್ದಿದ್ದಾರೆ.

ಮಧುಮೇಹ, ಕೊರೊನಾ ಎದುರು ಸೆಣೆಸಿ ಗೆದ್ದ ಸಿಂಹರಾಜ್‌ ಅದಾನಾ : ಈ ಬಾರಿ ಎಸ್‌ಎಚ್‌1 ವಿಭಾಗದಲ್ಲಿ ಸ್ಪರ್ಧಿಸಿದ ಸಿಂಹರಾಜ್‌ ಅದಾನಾ 10 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದರು. ಅದಾದ ಅನಂತರ ಅವರು 50 ಮೀ. ಮಿಶ್ರ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರು. ಇದೊಂದು ಅಪೂರ್ವ ಸಾಧನೆ. ಈ ಸಾಧನೆಯಲ್ಲೊಂದು ಅಗಾಧ ನೋವಿನ ಕಥೆಯಿದೆ. 39 ವರ್ಷದ ಅದಾನಾ ಈ ವರ್ಷ ಮೇಯಲ್ಲಿ ಕೊರೊನಾಕ್ಕೆ ಸಿಲುಕಿ, ಬದುಕುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗಳಲ್ಲಿ ಒಂದು ಹಾಸಿಗೆ ಪಡೆಯಲು ಪರದಾಡಿದ್ದಾರೆ. ಜತೆಜತೆಗೇ ಮಧುಮೇಹ ರೋಗದ ಕಾಟ. ಅವನ್ನೆಲ್ಲ ಮೀರಿ ಸಿಂಹರಾಜ್‌ ಎರಡು ಪದಕಗಳನ್ನು ಗೆದ್ದಿದ್ದಾರೆ. ಇವನ್ನೆಲ್ಲ ಬಿಟ್ಟೂ ಹೇಳಲು ಬೇಕಾದಷ್ಟು ಕಥೆಗಳಿವೆ. ಸಿಂಹರಾಜ್‌ ಹರಿಯಾಣದ ಫ‌ರೀದಾಬಾದ್‌ನವರು. ಕೇವಲ 1 ವರ್ಷದವರಿದ್ದಾಗ ಪೋಲಿಯೋಗೆ ತುತ್ತಾದರು. ಅವರಿಗೆ 15 ವರ್ಷವಾಗುವವರೆಗೆ ಸಹಾಯಕ ಸಾಧನವನ್ನು ಹಿಡಿದೇ ನಡೆದರು. ಮುಂದೆ ನಿಧಾನಕ್ಕೆ ಸಹಜವಾಗಿ ನಡೆಯಲು ಕಲಿತರು. ಈಗಲೂ ಅವರ ಕಾಲುಗಳು ಹೇಳಿಕೊಳ್ಳುವಷ್ಟು ಬಲಿಷ್ಠವಿಲ್ಲ.

 

ಟಾಪ್ ನ್ಯೂಸ್

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.