‘ಸ್ತ್ರೀ’
Team Udayavani, Jul 1, 2019, 4:28 PM IST
ಹೊತ್ತಾರೆಯಿಂದ ಹೊತ್ತೇರುವ ತನಕ
ಎಡೆಬಿಡದೆ ಸೂರ್ಯನಂತಿವಳ ದುಡಿತ
ಮನೆಮಂದಿಯೆಲ್ಲ ಯೋಗಕ್ಷೇಮವೇ
ಹೃದಯದ ಮಿಡಿತ
ಆತನಿಗೋ ಜಗಕೆ ಬೆಳಕ ನೀಡೋ ಕಾಯಕ
ಈಕೆಗೋ ಬದುಕ ಕಟ್ಟಿಕೊಡುವ ತವಕ
ಬಾಲ್ಯದಲಿ ಅಪ್ಪನ ಜೇಬಿನಲ್ಲಿ ಚಿಂತೆ
ಹರೆಯದಲಿ ಹದ್ದು –ಕಾಕದೃಷ್ಟಿಗಳದ್ದೇ ಸಂತೆ
ಮುಚ್ಚಿಟ್ಟ ಮನಸ್ಸು, ಬಚ್ಚಿಟ್ಟ ಕನಸು
ರೆಕ್ಕೆ ಬಿಚ್ಚಲೇ ಇಲ್ಲ, ಗರಿಕೆದರಲೇ ಇಲ್ಲ
ದೋಸೆ ಬಿಸಿ ಇಲ್ಲ, ಪಲಾವು ರುಚಿ ಇಲ್ಲ
ಎಂದೆತ್ತಿ ಆಡಿತೋರಿದರಲ್ಲಾ
ಕೈಗಳಲ್ಲಾದ ‘ಬಿಸಿಯಕಲೆ’ಗಳರಿವು
ಯಾರಿಗೂ ಬರಲೇ ಇಲ್ಲ
ಇಡ್ಲಿಗೆ ಚಟ್ನಿ ಸಾಂಬಾರ್ ಬಯಸಿದವರೇ ಎಲ್ಲ
“ನಿನಗೆ ತಿಂಡಿ ಉಳಿದಿದೆಯೇ’…..?ಎಂದು
ಕೇಳಿದವರಾರೂ ಇಲ್ಲ
ಒಡನಾಡಿಗಳು ತುಸು ಕೆಮ್ಮಿದರೂ
ಒಡಲಲ್ಲಿ ಎಲ್ಲಿಲ್ಲದ ಸಂಕಟ
ತನ್ಮಡಿಲೇ ಒಡೆದು ಹೋದರೂ
ಗಣನೆಗೆ ಬಾರದಿರುವುದು ದೊಡ್ಡ‘ವಿಕಟ’
ಸೊರಗದಂತೆ ಸಾಂತ್ವನ ನೀಡುವ
ಸೆರಗಿನಲ್ಲಿ ಕಣ್ಣೀರ ಕಥೆಯಿದೆ.
ತಲೆನೇವರಿಸಿ ಭರವಸೆ ತುಂಬುವ
ಕೈಗಳಲಿ ಬಾಳಿನ ವ್ಯಥೆಯಿದೆ
ಎಲ್ಲರಿಗಾಗಿ ಬದುಕಿದಳು
ತಾ ಬಾಳುವುದಾ ಮರೆತಳು
‘ಗಾದೆ’ಗೆ ನುಡಿಯಾದಳು
‘ಶಾಸ್ತ್ರ’ಕ್ಕೆ ಅಸ್ತ್ರವಾದಳು
‘ಸಂಸ್ಕೃತಿ’ಗೆ ಕೃತಿಯಾದಳು
ವಿಕೃತಿಗೊಳಗಾದ ,’ಪ್ರಕೃತಿ’ ಮಾತೆಯಾದಳು
ತನ್ನಿರವ ಮರೆತು ತನ್ನವರಿಗಾಗಿ
ಬದುಕ ತೆತ್ತವಳು
ಆಹಾರ ನೀಡಿ ಆಸರೆಯಾದಳು
ಎಲ್ಲರ ಬಾಯಿಗೆ ತಾನೇ ‘ಆಹಾರ’ವಾದಳು
‘ಸ್ತ್ರೀ’ ಅಲ್ಲವೇ ದೇವತೆ ಬೇರಾರಾಗಲು ಸಾಧ್ಯ……?
ಮಲ್ಲಿಕಾ.ಐ
ಕನ್ನಡ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು. ದ.ಕ.