Parliament; ಫೇಸ್ಬುಕ್ ನಂಟು,ಗುರುಗ್ರಾಮದಲ್ಲಿ ಸಂಚು!;ಪಾಸ್ ಸಿಗುವುದು ಸುಲಭವೇ?
ಜಾಲತಾಣದಲ್ಲಿ ಆರೋಪಿಗಳ ಪರಸ್ಪರ ಪರಿಚಯ...ಗುರುಗ್ರಾಮದಲ್ಲಿ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್
Team Udayavani, Dec 14, 2023, 6:25 AM IST
ಹೊಸದಿಲ್ಲಿ: 6 ಮಂದಿ… ಪ್ರತಿಯೊಬ್ಬರು ಬೇರೆ ಬೇರೆ ರಾಜ್ಯಕ್ಕೆ ಸೇರಿದವರು… ಆದರೂ ಸಂಸತ್ ಪ್ರವೇಶದ ಪಾಸ್ ಪಡೆದು ಒಂದೇ ದಿನ, ಒಂದೇ ಸಮಯದಲ್ಲಿ ಒಳಗೆ ಪ್ರವೇಶಿಸಿ, ಇಡೀ ದೇಶದ ಎದೆಬಡಿತವನ್ನೇ ಕ್ಷಣಕಾಲ ಸ್ಥಗಿತಗೊಳಿಸಿದ್ದಾರೆ!
ಸಂಸತ್ನಲ್ಲಿ ಈ ಪರಿಯ ತಲ್ಲಣ ಸೃಷ್ಟಿಸಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದ ಸಂಗತಿಗಳಿವು.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯ: ಈ ಇಡೀ ಸಂಚಿನಲ್ಲಿ ಭಾಗಿಯಾಗಿದ್ದವರು 6 ಮಂದಿ. ಇವರು ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ ಹೀಗೆ ಬೇರೆ ಬೇರೆ ರಾಜ್ಯಗಳ ನಿವಾಸಿಗಳು. ಇವರ ನಡುವೆ ಪರಸ್ಪರ ಸಂಪರ್ಕ ಬೆಳೆದಿದ್ದು ಸಾಮಾಜಿಕ ಜಾಲತಾಣಗಳ ಮೂಲಕ. ಇವರು ಭಗತ್ಸಿಂಗ್ ಅವರ ಅಪ್ಪಟ ಅಭಿಮಾನಿಗಳಾಗಿದ್ದು, “ಜಸ್ಟಿಸ್ ಫಾರ್ ಆಜಾದ್ ಭಗತ್ಸಿಂಗ್’ ಎಂಬ ಸೋಶಿಯಲ್ ಮೀಡಿಯಾ ಗ್ರೂಪ್ನ ಭಾಗವಾಗಿದ್ದರು. ಫೇಸ್ಬುಕ್ನಲ್ಲೇ ಪರಸ್ಪರ ಮಾತುಕತೆ ನಡೆಸಿ, ಸಂಸತ್ನಲ್ಲಿ ಕೋಲಾಹಲ ಎಬ್ಬಿಸುವ ವ್ಯವಸ್ಥಿತ ಸಂಚಿಗೆ ತಯಾರಿ ನಡೆಸಿದ್ದರು. ನಿರುದ್ಯೋಗದ ವಿರುದ್ಧ ಹೋರಾಟ ಮತ್ತು ತಮ್ಮ ನೋವೇನೆಂದು ಜನಪ್ರತಿನಿಧಿಗಳಿಗೆ ತಿಳಿಯುವಂತೆ ಮಾಡಬೇಕು ಎಂದು ನಿರ್ಧರಿಸಿದ್ದರು. ಈ ಹಿಂದೆಯೂ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಮೊಹಾಲಿಯಲ್ಲಿ ಏರ್ಪೋರ್ಟ್ಗೆ ಶಹೀದ್ ಭಗತ್ ಸಿಂಗ್ ವಿಮಾನನಿಲ್ದಾಣ ಎಂದು ಹೆಸರಿಡುವಂತೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯಲ್ಲೂ ಇವರು ಹಾಜರಾಗಿದ್ದರು.
ಗುರುಗ್ರಾಮದ ಮನೆಯಲ್ಲಿ ಭೇಟಿ: ಐವರು ಆರೋಪಿಗಳು ಮೊದಲಿಗೆ ಗುರುಗ್ರಾಮಕ್ಕೆ ಬಂದು, 6ನೇ ಆರೋಪಿ ಲಲಿತ್ ಝಾನ ಮನೆಯಲ್ಲಿ ತಂಗಿದ್ದರು. ಇಲ್ಲೇ ಕುಳಿತು ಇವರೆಲ್ಲರೂ ತಮ್ಮ ಇಡೀ ಆಪರೇಶನ್ನ ರೂಪುರೇಷೆ ತಯಾರಿಸಿದ್ದರು. ಹಲವು ತಿಂಗಳುಗಳಿಂದ ಸಂಸದರ ಕಚೇರಿಗೆ ಬಂದು, ದುಂಬಾಲು ಬಿದ್ದು, “ಹೊಸ ಸಂಸತ್ ಭವನವನ್ನು ಒಮ್ಮೆ ನೋಡಬೇಕೆಂಬ ಆಸೆಯಿದೆ. ದಯವಿಟ್ಟು ಪಾಸ್ ಕೊಡಿಸಿ’ ಎಂದು ಕೇಳಿಕೊಂಡು ಆರೋಪಿ ಮನೋರಂಜನ್ ಮತ್ತು ಸಾಗರ್ ಶರ್ಮಾ ಪಾಸ್ ಪಡೆದುಕೊಂಡಿದ್ದರು. ಒಂದೇ ದಿನ ಏಕಕಾಲಕ್ಕೆ ಸಂಸತ್ ಒಳಗೆ ಪ್ರವೇಶ ಸಿಗುವಂತೆ ಎಲ್ಲ ಆರೋಪಿಗಳೂ ನೋಡಿಕೊಂಡಿದ್ದರು. ಎಲ್ಲವೂ ಅವರ ಪ್ಲ್ರಾನ್ ಪ್ರಕಾರವೇ ನಡೆದಿತ್ತು. ಅದರಂತೆ ಬುಧವಾರ ಆರೋಪಿಗಳು ಸಂಸತ್ಗೆ ಪ್ರೇಕ್ಷಕರ ಸೋಗಿನಲ್ಲಿ ಒಳಗೆ ಪ್ರವೇಶಿಸಿ, ಈ ದುಷ್ಕೃತ್ಯ ಎಸಗಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ನೀಲಂ!
ಸಂಸತ್ ಭವನದ ಹೊರಗೆ ಘೋಷಣೆ ಕೂಗುತ್ತಾ, ಗ್ಯಾಸ್ ಕ್ಯಾನಿಸ್ಟರ್ ಸಿಡಿಸಿ ಪ್ರತಿಭಟನೆ ನಡೆಸಿದ ಆರೋಪಿ ನೀಲಂ ಹರಿಯಾಣದಾಕೆ. ಈಕೆ ಹಿಸಾರ್ನ ಪಿಜಿಯೊಂದರಲ್ಲಿ ವಾಸವಿದ್ದು, ಹರಿಯಾಣ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆಕೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿಲ್ಲ ಎಂದು ಆಕೆಯ ಕುಟುಂಬ ಹೇಳಿದೆ. ಆಕೆ ಯಾಕೆ ಈ ರೀತಿ ಮಾಡಿದಳು ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಟಿವಿಯಲ್ಲಿ ನೀಲಂ ಅನ್ನು ನೋಡಿದ ಪರಿಚಿತರು ನಮಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ನೀಲಂ ಸಹೋದರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಗರ್
ಸದನದೊಳಗೆ ದುಷ್ಕೃತ್ಯ ಎಸಗಿದ ಆರೋಪಿ ಸಾಗರ್ ಶರ್ಮಾ(28) ಉತ್ತರ ಪ್ರದೇಶದ ಲಕ್ನೋದ ರಾಮನಗರದ ನಿವಾಸಿ. ಪದವೀಧರ. ಈತ ದಿಲ್ಲಿಯಲ್ಲಿ ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳುವುದಿದೆ ಎಂದು ಹೇಳಿ ಇತ್ತೀಚೆಗಷ್ಟೇ ಮನೆಯಿಂದ ತೆರಳಿದ್ದ. ಈತ ಆರಂಭದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅನಂತರ ಹುಟ್ಟೂರಿಗೆ ವಾಪಸ್ ಬಂದು, ಇ-ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಸಾಗರ್ನ ಅಪ್ಪ ಬಡಗಿಯಾಗಿದ್ದು, ಇವರ ಕುಟುಂಬವು ಕಳೆದೊಂದು ದಶಕದಿಂದಲೂ ಬಾಡಿಗೆ ಮನೆಯಲ್ಲಿ ವಾಸವಿದೆ.
ಪೊಲೀಸ್ ಆಗದ್ದಕ್ಕೆ ಹತಾಶೆಗೆ ಒಳಗಾಗಿದ್ದ ಅಮೋಲ್
ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿ ಪೊಲೀಸರ ಅತಿಥಿಯಾದ ಮತ್ತೂಬ್ಬ ಆರೋಪಿ ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ(25). ಪೊಲೀಸ್ ಆಗಬೇಕೆಂಬ ಆಸೆ ಹೊತ್ತಿದ್ದ ಈತನಿಗೆ ಪ್ರವೇಶ ಸಿಕ್ಕಿರಲಿಲ್ಲ. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೂ ಮಿಲಿಟರಿ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ.
ಪ್ರವೇಶ ಪಾಸ್ ಸಿಗುವುದು ಸುಲಭವೇ?
ಸಂಸತ್ ಪ್ರವೇಶಕ್ಕೆ ಪಾಸ್ ಸಿಗುವುದು ಅಷ್ಟು ಸುಲಭವಿಲ್ಲ. ಹಾಲಿ, ಮಾಜಿ ಸಂಸದರು, ಕೇಂದ್ರ ಸಚಿವರು, ರಾಜ್ಯಸಭೆ ಸದಸ್ಯರು ಅವರ ಕ್ಷೇತ್ರ ವ್ಯಾಪ್ತಿ ಮಾತ್ರವಲ್ಲದೇ ಅನ್ಯ ಕ್ಷೇತ್ರದ ಜನರಿಗೂ ಪಾಸ್ ನೀಡುವ ಅಧಿಕಾರ ಹೊಂದಿರುತ್ತಾರೆ. ಸಂಸತ್ಗೆ ತೆರಳಲು ಬಯಸುವ ವ್ಯಕ್ತಿ ಮೊದಲು ಸಂಸದರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಸೂಕ್ತ ದಾಖಲಾತಿಗಳೊಂದಿಗೆ ಆ ಅರ್ಜಿಯನ್ನು ಸ್ಪೀಕರ್ ಕಚೇರಿಗೆ ರವಾನಿಸಲಾಗುತ್ತದೆ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಸ್ಪೀಕರ್ ಕಚೇರಿಯಿಂದ “ಪ್ರವೇಶ ಪಾಸ್’ ನೀಡಲಾಗುತ್ತದೆ. ಅದರಲ್ಲಿ ಯಾವ ದಿನ, ಎಷ್ಟು ಗಂಟೆಗೆ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಪಾಸ್ ದೊರೆತ ಬಳಿಕ ನಿಗದಿತ ದಿನಾಂಕ ಹಾಗೂ ಸಮಯದಂದು ಪಾಸ್ ಪಡೆದ ವ್ಯಕ್ತಿ ಸಂಸತ್ ಭವನಕ್ಕೆ ತೆರಳಬೇಕು. ಅಲ್ಲಿ ವಿವಿಧ ಹಂತದ ಭದ್ರತಾ ಪರಿಶೀಲನೆ ಬಳಿಕ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಒಬ್ಬ ವ್ಯಕ್ತಿ ಸಂಸತ್ನ ಕಲಾಪವನ್ನು ವೀಕ್ಷಿಸಲು 30 ನಿಮಿಷ ಅವಕಾಶ ನೀಡಲಾಗುತ್ತದೆ. ಕೆಲವೊಮ್ಮೆ ಜನದಟ್ಟಣೆ ಇದ್ದರೆ ಭದ್ರತಾ ಸಿಬಂದಿ ನಿಗದಿತ ಸಮಯಕ್ಕಿಂತ ಮೊದಲೇ ಎಬ್ಬಿಸಿ ಕಳುಹಿಸುತ್ತಾರೆ. ವೀಕ್ಷಕರ ಗ್ಯಾಲರಿಯಲ್ಲೂ ಸೂಕ್ತ ಭದ್ರತೆ ನಿಯೋಜಿಸಲಾಗಿರುತ್ತದೆ. ಅಶಿಸ್ತು ತೋರಿದರೆ ಎಚ್ಚರಿಕೆ ನೀಡಿ ಹೊರಗೆ ಕಳುಹಿಸಿದ ಉದಾಹಣೆಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ