ಕರ್ನಾಟಕದಲ್ಲಿ ಮೊದಲ ಪರಾಕ್ರಮ ಮೆರೆದಿದ್ದ ಶಿವಾಜಿ
Team Udayavani, Feb 15, 2021, 6:30 AM IST
ಕರಾವಳಿಯ ಬಸ್ರೂರು ಆಗ ಕೇರಳದಿಂದ ಮಹಾ ರಾಷ್ಟ್ರದವರೆಗಿನ ಕಡಲತೀರದಲ್ಲಿ ನಂಬರ್ 1 ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ವಿದೇಶೀಯರ ವ್ಯಾಪಾರವೂ ಭರದಿಂದ ಸಾಗುತ್ತಿತ್ತು. ಗೋವೆಯಲ್ಲಿ ನೆಲೆಸಿದ್ದ ಫೋರ್ಚುಗೀಸರು ಮತ್ತು ವೆನಗೊರಲಾದಲ್ಲಿ ನೆಲೆಸಿದ್ದ ಡಚ್ಚರು ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳಲು ಪೈಪೋಟಿ ನಡೆಸಿದರು. ಇವರಿಬ್ಬರೂ ಭೂಪ್ರದೇಶಕ್ಕಿಂತ ಹೆಚ್ಚು ಸಮುದ್ರ ವ್ಯಾಪ್ತಿಯಲ್ಲಿ ಮೇಲ್ಗೆ „ ಸಾಧಿಸಿದ್ದರು. ಬಸ್ರೂರು ಕೆಳದಿ ರಾಜರ ಅಧೀನದಲ್ಲಿತ್ತು. ಕೆಳದಿ ಅರಸ ಸೋಮಶೇಖರನು ಫೋರ್ಚುಗೀಸರಿಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟಿದ್ದ. ಇದರಿಂದ ಕುಪಿತ
ರಾದ ಡಚ್ಚರು ಕೆಳದಿ ಅರಸರಿಗೆ ಆಗಾಗ್ಗೆ ಕಿರು ಕುಳ ನೀಡುತ್ತಿದ್ದರು. ಒಂದು ಮಾಹಿತಿ ಪ್ರಕಾರ ಸೋಮಶೇಖರನೇ ವಿದೇಶೀಯರ ಕಿರುಕುಳ ತಡೆ ಯಲಾಗದೆ ಶಿವಾಜಿಗೆ ಮನವಿ ಮಾಡಿದ್ದನೆಂದೂ ತಿಳಿದುಬರುತ್ತದೆ.
ಫೋರ್ಚುಗೀಸರ ಮೋಸ: 1510ರಲ್ಲಿ ಫೋರ್ಚು ಗೀಸರು ಬಸ್ರೂರಿನ ಮಹತ್ವ ಅರಿತಿದ್ದನು. 1525 ರಲ್ಲಿ ಅವರು ವರ್ತಕರಿಂದ ಅಕ್ಕಿ ಪಡೆದರು. ಫೋರ್ಚುಗೀಸರಿಗೆ ನೀಡಿದ ಅಕ್ಕಿಯನ್ನು ಕಪ್ಪವೆಂದು ಫೋರ್ಚುಗೀಸ್ ದಾಖಲೆ ತಿಳಿಸುತ್ತದೆ. ಅನಂತರ ವ್ಯಾಪಾರ ನೀತಿಯಲ್ಲಿ ಕೊಳ್ಳೆಹೊಡೆಯುವ ಉದ್ದೇಶ ಕಂಡುಬಂತು. ವ್ಯಾಪಾರಸ್ಥರನ್ನು ಹೆದರಿಸಿ ಅಕ್ಕಿಗೆ ತಾವೇ ಮೌಲ್ಯ ನಿಗದಿಪಡಿಸಿ ಕಡಿಮೆ ದರಕ್ಕೆ ಖರೀದಿ ಸುತ್ತಿದ್ದರು. 1583ರಲ್ಲಿ ಸಮುದ್ರ ಕಿನಾರೆಯ ಕೊಡಂ ಡೇಶ್ವರ ದೇವಸ್ಥಾನಕ್ಕೆ ಬೆಂಕಿ ಇಟ್ಟಾಗ ಸ್ಥಳೀಯರು ಫೋರ್ಚುಗೀಸರನ್ನು ಹೊರದಬ್ಬಲು ಯತ್ನಿಸಿದ್ದರು.
35ರ ಹರೆಯದಲ್ಲಿ ಸಾಹಸ: ಶಿವಾಜಿ ಬಸ್ರೂರಿನ ಮೇಲೆ ದಾಳಿ ಮಾಡಿದಾಗ ಇನ್ನೂ ಸಾಮ್ರಾಜ್ಯವನ್ನು ಸ್ಥಾಪಿಸಿರಲಿಲ್ಲ. 1674ರಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ದ್ದರೆ 9 ವರ್ಷ ಮುಂಚೆ ಬಸ್ರೂರು ದಾಳಿ ನಡೆದಿತ್ತು. 35ನೆಯ ವಯಸ್ಸಿಗೆ ಬಸ್ರೂರು ದಾಳಿಯಂತಹ ಅಸಾ ಮಾನ್ಯ ಸಾಹಸಕ್ಕೆ ಶಿವಾಜಿ ಕೈಹಾಕಿ ಯಶಸ್ವಿಯಾಗಿ ದ್ದರು, 4,000 ನಾವಿಕರನ್ನು ಕಲೆ ಹಾಕಿದ್ದರು ಎನ್ನುವುದು ಸಂಘಟನ ಚಾತುರ್ಯವನ್ನು ಎತ್ತಿ ತೋರಿಸುತ್ತದೆ.
3 ದೊಡ್ಡ, 85 ಸಣ್ಣ ನೌಕೆಗಳಿಂದ ದಾಳಿ: ಅಫjಲ್ಖಾನ್ ವಿರುದ್ಧ ಗೆಲುವು ಸಾಧಿಸಿದ್ದು 1659ರಲ್ಲಿ. ಹೆಚ್ಚಾ ಕಡಿಮೆ ಇದೇ ವೇಳೆ ಕಲ್ಯಾಣ್ನಲ್ಲಿ ಫೋರ್ಚುಗೀಸರ ಮೇಲೆ ದಾಳಿ ನಡೆಸಲು ನೌಕಾಪಡೆಯ ಸಿದ್ಧತೆ ಆರಂಭವಾಯಿತು. 1664ರ ನವೆಂಬರ್ 25ರಂದು ಸಿಂಧುದುರ್ಗದ ಕೋಟೆಗೆ ಶಂಕುಸ್ಥಾಪನೆ ನಡೆಯಿತು. 1665ರ ಫೆಬ್ರವರಿ 8ರಂದು ಮಲಾಂಡ್ನಿಂದ ಬಸ್ರೂರಿಗೆ ಶಿವಾಜಿಯ ದಿಗ್ವಿಜಯ ಮೂರು ದೊಡ್ಡ ನೌಕೆ, 85 ಸಣ್ಣ ನೌಕೆಗಳೊಂದಿಗೆ ಆರಂಭವಾಯಿತು. ಗೋವಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ಉತ್ತರ ಕನ್ನಡದ ಕರಾವಳಿಯನ್ನು (ಕಾರವಾರ, ಹೊನ್ನಾವರ, ಭಟ್ಕಳ) ದಾಟಿ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಕುಂದಾಪುರ ಬಳಿಯ ಬಸ್ರೂರಿಗೆ ತಂದು ತಲುಪಿದ. ಫೆ. 13 ಅಥವಾ 14ರಂದು ಆಕ್ರಮಣ ನಡೆಯಿತು. ಆದರೆ 1664ರ ನವೆಂಬರ್ನಲ್ಲಿಯೇ ನಾಲ್ಕು ನೌಕೆಗ ಳೊಂದಿಗೆ ಶಿವಾಜಿ ಸರ್ವೆ ನಡೆಸಿದ್ದ ಎಂದು ಪುಣೆ ಡೆಕ್ಕನ್ ಕಾಲೇಜು ಸಂಶೋಧನ ಸಂಸ್ಥೆ (ಡೀಮ್ಡ್ ವಿ.ವಿ.) 1942ರಲ್ಲಿ ನಡೆಸಿದ ಅಧ್ಯಯನದಲ್ಲಿ ಟಿ.ಎಸ್.ಶೇಜ್ವಾಲ್ಕರ್ ತಿಳಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮಾದರಿ: ಆಗ ಅಲ್ಲಲ್ಲಿ ಇದ್ದ ಮರಳು ದಿಬ್ಬಗಳು, ಬಂಡೆಗಳು ನೌಕೆಗಳನ್ನು ಚಲಾಯಿಸಲು ಅಡ್ಡಿಯಾಗಿದ್ದವು ಎನ್ನುವಾಗ ಹಟ್ಟಿಕುದ್ರು, ಹೇರಿಕುದ್ರು, ಉಪ್ಪಿನಕುದ್ರು ವಲ್ಲದೆ ಹಲವು ದ್ವೀಪಗಳಿದ್ದವು ಎಂಬ ಉಲ್ಲೇಖ ಬರುತ್ತದೆ. ಹೀಗಾಗಿ ಅಮಾವಾಸ್ಯೆ ಸಮಯದಲ್ಲಿ ಬೆಳ್ಳಂಬೆಳಗ್ಗೆ (ಭರತ=ನೀರಿನ ಏರಿಕೆ ಹೆಚ್ಚಿದ್ದಾಗ) ಶಿವಾಜಿಯ ಸೈನ್ಯ ದಾಳಿ ನಡೆಸಿತ್ತು. ಬಳಿಕವೇ ಅಲ್ಲಿದ್ದವರಿಗೆ ತಿಳಿದದ್ದು. ಇದನ್ನು ಸರ್ಜಿಕಲ್ ಸ್ಟ್ರೈಕ್ಗೆ ಹೋಲಿಸ
ಬಹುದು. ಶಿವರಾತ್ರಿ ಸಮಯದಲ್ಲಿ ಗೋಕರ್ಣಕ್ಕೆ ಸಾರ್ವಜನಿಕರ, ವರ್ತಕರ ಜತೆ ಸಂಪತ್ತಿನ ಜಮಾವಣೆ ಯಾಗುವುದರಿಂದ ಶಿವಾಜಿ ಈ ಸಮಯವನ್ನು ಆಯ್ದು
ಕೊಂಡ ಎಂದು ತಿಳಿದು ಬರುತ್ತದೆ. ಒಂದು ಕೋಟಿ ಹೊನ್ನು, ಫೋರ್ಚು ಗೀಸರಿಗೆ ಅರಬ್ ರಾಷ್ಟ್ರಗಳಿಂದ ಬರುತ್ತಿದ್ದ ಕುದುರೆ ಗಳನ್ನೂ ಆತ ಕೊಂಡೊಯ್ದಿದ್ದ ಎನ್ನಲಾಗುತ್ತಿದೆ. ಬಸ್ರೂರು ಬಳಿಕ ಭಟ್ಕಳ, ಹೊನ್ನಾವರದ ಮೇಲೂ ದಾಳಿ ನಡೆದಿದೆ ಎನ್ನಬಹುದಾದರೂ ದಾಖಲೆಗಳಿಲ್ಲ. ಬಳಿಕ ಗೋಕರ್ಣಕ್ಕೆ (ಫೆ. 18?) ಹೋಗಿ ಪೂಜೆ ನಡೆಸಿದ. ವಾಪಸು ಹೋಗುವಾಗ ಅಂಕೋಲಕ್ಕೆ ಭೂಮಾರ್ಗದಲ್ಲಿ ತೆರಳಿದ. ಒಂದೆಡೆ ಸಮುದ್ರ ಮಾರ್ಗದಲ್ಲಿ ಸಂಪತ್ತಿನ ರವಾನೆ, ಇನ್ನೊಂದೆಡೆ 12 ಸಣ್ಣ ನೌಕೆಗಳು ನದಿ ತಟಾಕದಲ್ಲಿ ಶಿವಾಜಿ ಜತೆಗೆ ಹೋಗಿದ್ದವು. ಹೋಳಿ ಹಬ್ಬ ಮುಗಿದು ಕಾರವಾರಕ್ಕೆ ಫೆ. 22ರಂದು ತೆರಳಿ ಮರುದಿನವೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ.
ಮೊದಲ ಇನ್ನಿಂಗ್ಸ್ :
ಶಿವಾಜಿ ಮೊದಲ ಭರ್ಜರಿ ಇನ್ನಿಂಗ್ಸ್ ಆರಂಭವಾದದ್ದೇ ಕರ್ನಾಟಕದ ಕರಾವಳಿಯಿಂದ ಎನ್ನು ವುದು ಮುಖ್ಯವಾಗುತ್ತದೆ. ಶಿವಾಜಿ ಜನಿಸಿದ್ದು ಫೆಬ್ರವರಿಯಲ್ಲಿ (19-02-1630), ಬಸ್ರೂರು ದಾಳಿ ನಡೆದದ್ದೂ ಫೆಬ್ರವರಿಯಲ್ಲಿ (ದಿನಾಂಕಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ) ಎನ್ನುವುದು ಇನ್ನೊಂದು ಕುತೂಹಲವನ್ನು ತರಿಸುತ್ತದೆ. ಬಸ್ರೂರು ದಾಳಿ ನಡೆದು 355 ವರ್ಷಗಳು ಕಳೆದರೂ ಇತಿಹಾಸವನ್ನು ಮರೆಯಲಾಗದು.
ಸ್ಥಳೀಯರ ಸಹಕಾರ, ವಿದೇಶೀಯರ ಸೋಲು :
ಬಸ್ರೂರು ದಾಳಿಯನ್ನು ನಡೆಸಿದ್ದು ಪರದೇಶೀ ವರ್ತಕರನ್ನು ಶಿಕ್ಷಿಸುವ ಇರಾದೆಯಿಂದ. ಅಪರಿಚಿತ ಸ್ಥಳದ ಮೇಲೆ ಸಮುದ್ರ ಮಾರ್ಗದಲ್ಲಿ ಬಂದು ದಾಳಿ ನಡೆಸಬೇಕಾದರೆ, ಸುರಕ್ಷಿತವಾಗಿ ಹಿಂದಿರುಗಬೇಕಾದರೆ ಸ್ಥಳೀಯರ ಸಹಕಾರ ದೊರಕಿತ್ತು ಎಂಬ ಸುಳಿವೂ ಸಿಗುತ್ತದೆ. ಬಳಿಕ ಶಿವಾಜಿಗೆ ತಮ್ಮದೇ ಆದ ನೌಕಾಬಲದ ಮೇಲೆ ಆತ್ಮವಿಶ್ವಾಸ ಹೆಚ್ಚಿತು, ವಿದೇಶೀಯರ ವ್ಯಾಪಾರಿ ಏಕಸ್ವಾಮ್ಯ ಮುರಿಯಿತು. ಇದು ಶಿವಾಜಿ ಕೈಗೊಂಡ ನೌಕಾ ಸಾಹಸಗಳಲ್ಲಿ ಮುಖ್ಯವಾದುದು ಮತ್ತು ಇದು ಇಲ್ಲಿ ನಡೆಸಿದ ಪ್ರಥಮ ಮತ್ತು ಕೊನೆಯ ದಾಳಿ ಎಂದು ಪ್ರಸಿದ್ಧ ಇತಿಹಾಸಕಾರ ಡಾ| ಕೆ.ಜಿ. ವಸಂತ ಮಾಧವ ಅವರು ಗ್ರಂಥಗಳಲ್ಲಿ ಬೆಟ್ಟು ಮಾಡಿದ್ದಾರೆ.
ವಿಭಿನ್ನ ದಾಖಲೆಗಳು :
ಮೂರು ಯುದ್ಧ ನೌಕೆಗಳೊಂದಿಗೆ ದಾಳಿ ಮಾಡಿದ ಶಿವಾಜಿ ಫೆ. 13ರಂದು ಗೋಕರ್ಣಕ್ಕೆ ಬಂದನೆಂದು ಬ್ರಿಟಿಷರ ದಾಖಲೆಗಳು ತಿಳಿಸುತ್ತವೆ. “ಮಾರ್ಚ್ 3ರಂದು ಬಸ್ರೂರಿನ ಮೇಲೆ ದಾಳಿ ಮಾಡಿದಾಗ ಆಶ್ಚರ್ಯವಾಯಿತು’ ಎಂದು ಡಚ್ಚರ ದಾಖಲೆ ತಿಳಿಸುತ್ತದೆ. ಪುಣೆ ಡೆಕ್ಕನ್ ವಿ.ವಿ. ಸಂಶೋಧನೆ ಇನ್ನೊಂದು ತೆರನಾದ ದಿನಾಂಕಗಳನ್ನು ಸಾರುತ್ತದೆ.
“ಫೋರ್ಚುಗೀಸರು ಮತ್ತು ಡಚ್ಚರ ಪೈಪೋಟಿ, ಪ್ರಭಾವವನ್ನು ಹತ್ತಿಕ್ಕುವುದೂ ಶಿವಾಜಿಯ ಉದ್ದೇ ಶಗಳಲ್ಲಿ ಒಂದಾಗಿತ್ತು. ವಿದೇಶೀಯರಿಂದ ಕೊಳ್ಳೆ ಹೊಡೆದ ಸಂಪತ್ತನ್ನು ಸಾಮ್ರಾಜ್ಯ ಸ್ಥಾಪನೆಗೆ ಬಳಸಿದ ಎನ್ನಬಹುದು’ ಎನ್ನುತ್ತಾರೆ ಇತಿಹಾಸತಜ್ಞ ಡಾ| ಬಿ. ಜಗದೀಶ ಶೆಟ್ಟಿ.
ಮಟಪಾಡಿ ಕುಮಾರಸ್ವಾಮಿ