Kannada: ನನ್ನ ಕನ್ನಡ ಹುಟ್ಟಿನಿಂದ ಬಂದಿದ್ದು, ವರ್ಷಕ್ಕೊಮ್ಮೆ ಬರುವಂಥದ್ದಲ್ಲ…
Team Udayavani, Nov 1, 2023, 7:30 AM IST
ನನಗೆ ಜನ ಇಷ್ಟೊಂದು ಪ್ರೀತಿ, ಅಭಿಮಾನ ನೀಡಿ ಬೆಳೆಸಿದ್ದಾರೆ ಅಂದ್ರೆ ಅದಕ್ಕೆ ಕಾರಣ ಕನ್ನಡ ಮತ್ತು ಕನ್ನಡಿಗರು. ನನಗೆ ಕನ್ನಡ ಮತ್ತು ಕರ್ನಾಟಕ ಎಲ್ಲವನ್ನೂ ಕೊಟ್ಟಿದೆ. ಕನ್ನಡ ನನ್ನ ಭಾಷೆ, ಕರ್ನಾಟಕ ನನ್ನ ಮನೆ. ಕನ್ನಡಿಗರು ನನ್ನ ಬಂಧು-ಮಿತ್ರರು ಎಂಬುದೇ ನನಗೊಂದು ಹೆಮ್ಮೆ ತರುವಂಥ ಭಾವನೆ. ಕನ್ನಡದ ಆಚರಣೆ ವರ್ಷಕ್ಕೊಂದು ಬಾರಿಯೋ, ಇಷ್ಟ ಬಂದಾಗಲೋ ಮಾಡುವಂಥದ್ದಲ್ಲ. ಅದು ಪ್ರತಿದಿನ ನಮ್ಮ ಮನದೊಳಗೆ, ನಮ್ಮ ಹೃದಯದೊಳಗೆ, ನಮ್ಮ ಮನೆಯೊಳಗೆ ನಡೆಯಬೇಕು. ಆಗ ನಮ್ಮ ಸುತ್ತಮುತ್ತಲಿನ ಪರಿಸರ ಕೂಡ ಕನ್ನಡ ಕಂಪನ್ನು ಸೂಸುತ್ತದೆ.
ನನಗೆ ಕನ್ನಡ ಹುಟ್ಟಿನಿಂದಲೇ ಬಂದಿರುವಂಥದ್ದು. ನನಗೆ ಕನ್ನಡ ಅಂದ್ರೆ ಅದೊಂದು ಕೇವಲ ಭಾಷೆಯಲ್ಲ. ಅದರ ಹಿಂದೊಂದು ಸಂಸ್ಕೃತಿಯಿದೆ, ವೈವಿಧ್ಯತೆಯಿದೆ, ಸುಮಧುರ ಭಾಂದವ್ಯವಿದೆ ಅನ್ನೋದು ಕಾಣುತ್ತದೆ. ಅದೆಲ್ಲದರ ಪ್ರತಿಧ್ವನಿಯೇ ನನ್ನ ಕಣ್ಣಿಗೆ ಕಾಣುವ ಕನ್ನಡ. ಕನ್ನಡಿಗರು ಅನ್ನೋದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಬೇರೆಯವರು ಬಂದಾಗಲೂ ಪ್ರೀತಿ-ವಿಶ್ವಾಸದಿಂದ ನಮ್ಮ ಭಾಷೆ ಕಲಿಸಬೇಕು. ಬೇರೆಯವರಿಗೂ ನಮ್ಮ ಭಾಷೆಯಲ್ಲೇ ಮಾತನಾಡಿಸಬೇಕು.
ಕರ್ನಾಟಕದಲ್ಲಿ ಕನ್ನಡ ಉಳಿವಿಗೆ ಹೋರಾಟ ಮಾಡಬೇಕು ಎಂಬುದು ಕೃತಕ ಅಥವಾ ತೋರಿಕೆ ಎಂದು ನನಗನಿಸುತ್ತದೆ. ಪ್ರತಿನಿತ್ಯ ನಮ್ಮ ನಡೆ, ನುಡಿ ಎಲ್ಲದರಲ್ಲೂ ಕನ್ನಡ ತುಂಬಿದ್ದರೆ, ಸಹಜವಾಗಿಯೇ ಕನ್ನಡ ಬೆಳೆಯುತ್ತದೆ. ಯಾವುದೇ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಹೋರಾಟಗಳಿಂದ ಉಳಿಸಿ, ಬೆಳೆಸಬಹುದು ಎಂಬುದು ತಪ್ಪು ಕಲ್ಪನೆ. ಕನ್ನಡದ ಅಳಿವು-ಉಳಿವು ಎರಡೂ ಕೂಡ ನಮ್ಮ ಮನೆಯಿಂದಲೇ ನಿರ್ಧಾರವಾಗುತ್ತದೆ. ಮೊದಲು ನಮ್ಮ ಮನೆಯಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡೋಣ.
ಶ್ರೀಮತಿ ಭಾರತಿ ವಿಷ್ಣುವರ್ಧನ್,ಹಿರಿಯ ನಟಿ