ಮೊದಲು ಮಸಾಲೆ ದೋಸೆ, ಆಮೇಲೆ ತಪಾಸಣೆ
Team Udayavani, Jan 17, 2022, 5:10 AM IST
ನಾನು ಭಾರತ ಸರಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಎರವಲುಸೇವೆ ಮೇಲೆ ನ್ಯೂಜಿಲ್ಯಾಂಡ್ಗೆ ಉಪನ್ಯಾಸಕ, ವೈದ್ಯಾಧಿಕಾರಿಯಾಗಿ ಹೋಗಿ 1972-73 ರಲ್ಲಿ ದಿಲ್ಲಿಗೆ ಬಂದಾಗ ಇಂದಿರಾ ಗಾಂಧಿ ಯವರು ಸಮರ್ಥ ಮತ್ತು ಸಕ್ರಿಯ ಆಡಳಿತಗಾರ ಟಿ.ಎ. ಪೈ ಅವರನ್ನು ಭಾರೀ ಕೈಗಾರಿಕೆ ಇಲಾಖೆಯ ಸಚಿವ ಹೊಣೆ ಕೊಟ್ಟ ದೊಡ್ಡ ಶೀರ್ಷಿಕೆಯ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ನಮ್ಮವರೊಬ್ಬರು ರಾಷ್ಟ್ರೀಯ ಸ್ತರದ ಹುದ್ದೆಗೇರಿದ್ದನ್ನು ಓದಿ ಸಂತೋಷಪಟ್ಟಿದ್ದೆ.
ಕೆಲವು ದಿನಗಳ ಬಳಿಕ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನಮ್ಮ ಮಿತ್ರ ಕೆ.ಬಿ. ಪೈ ಅವರು ಟಿ.ಎ. ಪೈಯವರ ಆರೋಗ್ಯತಪಾಸಣೆಗೆ ಕೋರಿದರು. ನಾನು ಉಪಕರಣಗಳೊಂದಿಗೆ ಹೋದಾಗ ಸಚಿವರು ನಾವು ಹೇಗಿದ್ದರೂ ಒಂದೇ ಜಿಲ್ಲೆಯವರು. ನಾವು ಮೊದಲು ಮಸಾಲೆ ದೋಸೆ, ಕಾಫಿ ಕುಡಿಯೋಣ. ಅನಂತರ ಆರೋಗ್ಯ ತಪಾಸಣೆ ಎಂದರು. ನನಗೆ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ದಿಂದಾಗಿ ಹಿರಿಯ ಸರಕಾರಿ ಹುದ್ದೆಯಲ್ಲಿದ್ದ ವರ ನಡವಳಿಕೆ ಗೊತ್ತಿತ್ತು. ಸಚಿವರ ಮಾತು ಕೇಳಿ ಅಚ್ಚರಿಯಾಯಿತು. ನಾನು ಒಂದೆರಡು ವರ್ಷ ದಿಲ್ಲಿಯಲ್ಲಿದ್ದಾಗ ಸಚಿವರ ಕೋರಿಕೆ ಮೇರೆಗೆ ಕೆಲವು ಬಾರಿ ಆರೋಗ್ಯ ತಪಾಸಣೆಗೆ ಹೋಗುತ್ತಿದ್ದೆ. ಪ್ರತೀ ಬಾರಿಯೂ ಹಾರ್ದಿಕ ಸ್ವಾಗತ ಮತ್ತು ಆತಿಥ್ಯ ಸಿಗುತ್ತಿತ್ತು. ಅವರ ಮಾನವೀಯತೆ, ಮುಗ್ಧತೆ, ಸಾಮಾಜಿಕ ಕಾಳಜಿ ನನಗೆ ಇಂದಿಗೂ ನೆನಪಿದೆ.
-ಡಾ| ಕೆ.ಎಸ್.ಎಸ್. ಭಟ್
(ಬೆಂಗಳೂರಿನ ಮಣಿಪಾಲ
ಆಸ್ಪತ್ರೆಯ ಎಮಿರಿಟಸ್ ಕನ್ಸಲ್ಟೆಂಟ್ ಕಾರ್ಡಿಯಾಲಾಜಿಸ್ಟ್ )