ದುಬಾರಿ ದುನಿಯಾ; ಬೆಲೆ ಏರಿಕೆ ನಿಯಂತ್ರಣವೇ ಬಹುದೊಡ್ಡ ಸವಾಲು

ಆರ್ಥಿಕ ಕುಸಿತದಿಂದ ಹೊರಬರಲು ವಿಶ್ವದ ಬಲಾಡ್ಯ ರಾಷ್ಟ್ರಗಳ ಒದ್ದಾಟ

Team Udayavani, Oct 16, 2022, 6:35 AM IST

ದುಬಾರಿ ದುನಿಯಾ; ಬೆಲೆ ಏರಿಕೆ ನಿಯಂತ್ರಣವೇ ಬಹುದೊಡ್ಡ ಸವಾಲು

ಜಾಗತಿಕವಾಗಿ ಗಂಭೀರ ಆರೋಗ್ಯ ಸಮಸ್ಯೆ ಸೃಷ್ಟಿಸಿದ ಕೊರೊನಾ ಸಾಂಕ್ರಾಮಿಕ, ರಷ್ಯಾ-ಉಕ್ರೇನ್‌ ನಡುವೆ ಕಳೆದ ಎಂಟು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧ, ಯುದ್ಧದ ಪರಿಣಾಮವಾಗಿ ರಷ್ಯಾದ ವಿರುದ್ಧ ಯುರೋಪಿಯನ್‌ ರಾಷ್ಟ್ರಗಳು ಹೇರಿದ ಆರ್ಥಿಕ ದಿಗ್ಬಂಧನಗಳು, ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತ, ಪದೇಪದೆ ಒಪೆಕ್‌ ರಾಷ್ಟ್ರಗಳು ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸುತ್ತಿರುವುದು…ಇವೆಲ್ಲದರ ಪರಿಣಾಮವಾಗಿ ವಿಶ್ವಮಟ್ಟದಲ್ಲಿ ಆರ್ಥಿಕತೆ ಸಂಪೂರ್ಣ ನಲುಗಿಹೋಗಿದೆ. ಜಾಗತಿಕ ಆರ್ಥಿಕ ಅನಿಶ್ಚತತೆಯ ಪರಿಣಾಮವಾಗಿ ಕಳೆದೆರಡು ವರ್ಷಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಆಹಾರ ಪದಾರ್ಥಗಳ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇದರಿಂದ ಜನಸಾಮಾನ್ಯರಿಗೆ ಜೀವನ ನಿರ್ವಹಣೆಯೂ ದುಸ್ತರವಾಗಿದೆ. ಪ್ರತಿಯೊಂದು ದೇಶದ ಆರ್ಥಿಕ ಲೆಕ್ಕಾಚಾರಗಳು ಬುಡಮೇಲಾಗಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನ ಬಹುತೇಕ ದೇಶಗಳು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಲಿರುವುದು ನಿಶ್ಚಿತ ಎಂದು ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುನ್ಸೂಚನೆ ನೀಡಿದೆ. ಆರ್ಥಿಕ ತಜ್ಞರು ಮತ್ತು ವಿಶ್ಲೇಷಕರು ಕೂಡ ಮುಂದಿನ ವರ್ಷದ ಜಾಗತಿಕ ಆರ್ಥಿಕ ಹಿಂಜರಿತದ ಬಗೆಗೆ ಭಾರೀ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಏನು?
ಕೋವಿಡ್‌ ಸಾಂಕ್ರಾಮಿಕದಿಂದ ಕೊಂಚ ಚೇತರಿಸಿಕೊಂಡೆವು, ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮ ಎದುರಿಸಲು ಸನ್ನದ್ಧವಾದೆವು ಎಂದುಕೊಳ್ಳುತ್ತಿರುವಾಗಲೇ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ “ಜಾಗತಿಕ ಮಹಾ ಆರ್ಥಿಕ ಹಿಂಜರಿತ’ದ ಬಹುದೊಡ್ಡ ಸವಾಲು ಎದುರಾಗಿದೆ. ಆರ್ಥಿಕ ಹಿಂಜರಿತದ ಮುನ್ಸೂಚನೆಯೋ ಎಂಬಂತೆ ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹಣದುಬ್ಬರ ತೀವ್ರವಾಗಿದೆ. ಈಗಾಗಲೇ ನಮ್ಮ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ಥಾನದಲ್ಲಿ ಉಂಟಾದ ಆರ್ಥಿಕ ತಲ್ಲಣವನ್ನು ನಾವು ನೋಡಿದ್ದೇವೆ. ಅಮೆರಿಕ, ಬ್ರಿಟನ್‌, ಫ್ರಾನ್ಸ್‌ನಂತಹ ರಾಷ್ಟ್ರಗಳೇ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿವೆ. ಆದರೆ ಆರ್ಥಿಕ ತಜ್ಞರ ಯಾವ ಲೆಕ್ಕಾಚಾರ, ತಂತ್ರಗಾರಿಕೆಗೆ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಪ್ರತಿಯೊಂದೂ ಕ್ರಮವೂ ಕೇವಲ ತಾತ್ಕಾಲಿಕ ಉಪಶಮನವಾಗುತ್ತಿದೆಯೇ ವಿನಾ ಮುಂಬರುವ ದಿನಗಳತ್ತ ಒಂದಿಷ್ಟು ದೃಷ್ಟಿ ಹರಿಸಿದರೆ ವಿಶ್ವ ರಾಷ್ಟ್ರಗಳನ್ನು ಆರ್ಥಿಕ ಹಿಂಜರಿತ ಕಾಡಲಿರುವುದು ನಿಶ್ಚಿತ ಎಂಬುದು ಸ್ಪಷ್ಟವಾಗುತ್ತಿದೆ. ಇನ್ನು ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಲ್ಲಂತೂ ಈಗಾಗಲೇ ಜಾಗತಿಕ ಆರ್ಥಿಕ ಅನಿಶ್ಚತತೆಯ ಪರಿಣಾಮಗಳ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿದ್ದು ಸಹಜವಾಗಿಯೇ ಈ ದೇಶಗಳನ್ನು ಆತಂಕಕ್ಕೀಡು ಮಾಡಿವೆ.

ಯಾಕೆ?
ವಿಶ್ವದ ಆರ್ಥಿಕ ಬೆಳವಣಿಗೆಯ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಗಳು ಹೆಚ್ಚಾಗಲಿವೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಹೇಗೆ?
ವಿಶ್ವದ ಬಹುತೇಕ ದೇಶಗಳನ್ನು ಕಾಡುತ್ತಿರುವ ಹಣದುಬ್ಬರ ಸಮಸ್ಯೆ, ಹಣದುಬ್ಬರ ನಿಯಂತ್ರಣಕ್ಕಾಗಿ ಈ ದೇಶಗಳ ಕೇಂದ್ರ ಬ್ಯಾಂಕ್‌ಗಳು ಕೈಗೊಳ್ಳುತ್ತಿರುವ ಬಿಗಿ ಕ್ರಮಗಳು, ಜಾಗತಿಕ ಬಡ್ಡಿದರಗಳ ಹೆಚ್ಚಳ, ಕರೆನ್ಸಿಗಳ ಅಪಮೌಲ್ಯದ ಭೀತಿ, ರಷ್ಯಾ- ಉಕ್ರೇನ್‌ ಯುದ್ಧ ಇನ್ನೂ ಮುಂದುವರಿದಿರುವುದು, ಕೋವಿಡ್‌ ಸಾಂಕ್ರಾಮಿಕ ಸದ್ಯ ನಿಯಂತ್ರಣದಲ್ಲಿದ್ದರೂ ದೀರ್ಘಾವಧಿಯವರೆಗೆ ಜಗತ್ತನ್ನು ಬಾಧಿಸುವ ಸಾಧ್ಯತೆಗಳಿರುವುದರಿಂದ ಜಾಗತಿಕ ಆರ್ಥಿಕತೆಗೆ ಭಾರೀ ಸವಾಲುಗಳನ್ನು ತಂದೊಡ್ಡಿದೆ. ಪ್ರಸ್ತುತ ಜಾಗತಿಕ ಆರ್ಥಿಕತೆಯು ಕುಸಿತದ ಹಾದಿಯಲ್ಲಿಯೇ ಸಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತೀವ್ರಗೊಳ್ಳಲಿದೆ. ಮುಂದಿನ ವರ್ಷ ಹಣದುಬ್ಬರದ ಗಂಭೀರ ಪರಿಣಾಮವನ್ನು ಜಾಗತಿಕ ಸಮುದಾಯ ಎದುರಿಸಬೇಕಾಗಿ ಬರಲಿದ್ದು ಕಳೆದ ಐದು ದಶಕಗಳಲ್ಲಿಯೇ ಕಂಡರಿಯದ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಗಿ ಬರಲಿದೆ. ಇದು 1970ರ ಆರ್ಥಿಕ ಹಿಂಜರಿತಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿರಲಿದೆ ಎಂದು ಐಎಂಎಫ್ ತನ್ನ ಈ ಹಿಂದಿನ ಹೇಳಿಕೆಯನ್ನು ಪುನರುತ್ಛರಿಸಿದೆ.

ಯಾವ ಕ್ರಮ?
ಹಣದುಬ್ಬರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಆಯಾಯ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಿಗಿ ಕ್ರಮಗಳನ್ನು ಅನುಸರಿಸುತ್ತಿವೆ. ಆರ್ಥಿಕ ನೀತಿಗಳು ತೀರಾ ಸಡಿಲವಾದರೆ ಹಣದುಬ್ಬರ ಹೆಚ್ಚುವುದು ಮತ್ತು ತೀರಾ ಬಿಗಿಗೊಳಿಸಿದರೆ ಆರ್ಥಿಕ ಹಿಂಜರಿತ ಉಂಟಾಗುವುದು. ಹಣಕಾಸು ನೀತಿಗಳ ಪರಿಣಾಮ ಒಂದೇ ತೆರನಾಗಿ ಇರುವುದಿಲ್ಲ. ಹಣದುಬ್ಬರ ನಿಯಂತ್ರಿಸುವ ಜತೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಮಹತ್ತರ ಹೊಣೆಗಾರಿಕೆಯೂ ಕೇಂದ್ರೀಯ ಬ್ಯಾಂಕ್‌ಗಳ ಮೇಲಿದ್ದು ಸದ್ಯದ ಸ್ಥಿತಿಯಲ್ಲಿ ಈ ಬ್ಯಾಂಕ್‌ಗಳ ಪಾಲಿಗೆ ಆರ್ಥಿಕತೆ ನಿರ್ವಹಣೆ ಎಂಬುದು ಹಗ್ಗದ ಮೇಲಿನ ನಡಿಗೆಯೇ ಸರಿ.

ಮುಂದೇನು?
2021ರಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತದ ಪ್ರಮಾಣ ಶೇ.6ರಷ್ಟಿದ್ದರೆ 2022ರಲ್ಲಿ ಶೇ. 3.2ಕ್ಕೆ ಕುಸಿದಿದೆ. ಈ ಆಧಾರದಲ್ಲಿ ಹೇಳುವುದಾದರೆ 2023ರಲ್ಲಿ ಇದು ಶೇ.2.7ಕ್ಕೆ ಇಳಿಯುವ ಸಾಧ್ಯತೆ ಇದೆ. ವಿಶ್ವದ ಆರ್ಥಿಕತೆಯ ಶಕ್ತಿಕೇಂದ್ರಗಳಂತಿರುವ ಅಮೆರಿಕ, ಚೀನ ಹಾಗೂ ಯುರೋಪ್‌ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಮುಂದುವರಿಯಲಿದೆ. ಇದರಿಂದ ಜಾಗತಿಕ ಹಣಕಾಸಿನ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಡಬಹುದು. ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಕರೆನ್ಸಿಗಳು ಇನ್ನಷ್ಟು ಅಪಮೌಲ್ಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಸಹಜವಾಗಿಯೇ ಇದು ಆಯಾಯ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.

ಹೇಗಿದೆ ಭಾರತದ ಪರಿಸ್ಥಿತಿ?
ಜಗತ್ತಿನ ಬಹುತೇಕ ರಾಷ್ಟ್ರಗಳ ಆರ್ಥಿಕತೆಯು ಡೋಲಾಯಮಾನ ಸ್ಥಿತಿಯಲ್ಲಿದ್ದು ಮುಂದಿನ ವರ್ಷ ಎದುರಾಗಲಿರುವ ಆರ್ಥಿಕ ಹಿಂಜರಿತವನ್ನು ಎದುರಿಸುವುದು ಹೇಗೆ? ಎಂದು ಚಿಂತಾಕ್ರಾಂತವಾಗಿವೆ. ಆದರೆ ಕಳೆದೊಂದು ದಶಕದಿಂದೀಚೆಗೆ ಸ್ವಾವಲಂಬನೆಯ ಹಾದಿಯಲ್ಲಿ ಹೆಜ್ಜೆ ಇರಿಸಿರುವ ಪರಿಣಾಮ ಭಾರತದ ಆರ್ಥಿಕತೆ ಚೇತರಿಕೆ ಕಾಣತೊಡಗಿದೆ. ಹೀಗಾಗಿ ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಲಾರದು ಎಂಬುದು ದೇಶ ಮಾತ್ರವಲ್ಲದೆ ಜಾಗತಿಕ ಹಣಕಾಸು ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರ ಖಚಿತ ನುಡಿ. ಸದ್ಯದ ದೇಶದ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತದ ಪಾಲಿಗೆ ಎಲ್ಲವೂ ಆಶಾದಾಯಕವಾಗಿಯೇ ಇದೆ. ಆದರೆ ವಿಶ್ವಬ್ಯಾಂಕ್‌ ಮತ್ತು ಐಎಂಎಫ್ ಈಗ ನೀಡಿರುವ ಮುನ್ಸೂಚನೆಯಂತೆಯೇ ಮಹಾ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದದ್ದೇ ಆದಲ್ಲಿ ದೇಶದ ವಿದೇಶಿ ವ್ಯಾಪಾರ-ವಹಿವಾಟುಗಳ ಮೇಲೆ ಪರಿಣಾಮ ಬೀರಲಿರುವುದು ನಿಶ್ಚಿತ. ಇನ್ನು ತೈಲ ಮಾರುಕಟ್ಟೆಯಲ್ಲಿ ಮತ್ತೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾದಲ್ಲಿ ಭಾರತದ ನಿರೀಕ್ಷೆಗಳೆಲ್ಲವೂ ಬುಡಮೇಲು ಆಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಹರಸಾಹಸಪಡುತ್ತಿದ್ದು ಮತ್ತೆ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾದರೆ ಹಣದುಬ್ಬರದ ಪೆಡಂಭೂತ ಮತ್ತೆ ನಮ್ಮನ್ನು ಕಾಡಲಿದೆ.

ಎಲ್ಲಿ ಏನಾಗಿದೆ ?
ಅಮೆರಿಕದಲ್ಲಿ ವಿತ್ತೀಯ ಮತ್ತು ಹಣಕಾಸು ವಹಿವಾಟುಗಳಲ್ಲಿ ಬಿಗಿ ನಿಯಮಗಳನ್ನು ಕೈಗೊಳ್ಳುತ್ತಿರುವುದರಿಂದ ಮುಂದಿನ ವರ್ಷ ಒಟ್ಟಾರೆ ಬೆಳವಣಿಗೆ ಶೇ. 1ರಷ್ಟು ಹಿನ್ನಡೆಯನ್ನು ಕಾಣಲಿದೆ. ಚೀನದಲ್ಲಿ ರಿಯಲ್‌ ಎಸ್ಟೇಟ್‌ ವಲಯ ದುರ್ಬಲಗೊಳ್ಳುತ್ತಿರುವುದು ಮತ್ತು ಕೊರೊನಾ ಹಿನ್ನೆಲೆಯಲ್ಲಿ ದೇಶದ ಇನ್ನೂ ಕೆಲವೆಡೆ ಲಾಕ್‌ಡೌನ್‌ ಮುಂದುವರಿದಿರುವುದರಿಂದಾಗಿ ಮುಂದಿನ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ.4.4ರಷ್ಟು ಇಳಿಕೆಯಾಗುತ್ತದೆ. ಅಲ್ಲದೆ ಆರ್ಥಿಕವಾಗಿ ಪ್ರಬಲವಾಗಿದ್ದ ಜರ್ಮನಿ, ಇಟಲಿ, ರಷ್ಯಾಗಳಲ್ಲೂ ಆರ್ಥಿಕ ಕುಸಿತದ ಛಾಯೆ ಈಗಾಗಲೇ ಆವರಿಸಿಕೊಳ್ಳತೊಡಗಿದೆ. ಯುರೋಪ್‌ ರಾಷ್ಟ್ರಗಳಿಗೆ ನೈಸರ್ಗಿಲ ಅನಿಲ ವಿತರಣೆಯನ್ನು ರಷ್ಯಾ ಕಡಿತಗೊಳಿಸುವ ಎಚ್ಚರಿಕೆ ನೀಡುತ್ತಲೇ ಇದ್ದು, ಒಂದು ವೇಳೆ ರಷ್ಯಾ ಇಂಥ ನಿರ್ಧಾರ ಕೈಗೊಂಡದ್ದೇ ಆದಲ್ಲಿ ಯುರೋಪ್‌ ರಾಷ್ಟ್ರಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಯುರೋಪಿಯನ್‌ ರಾಷ್ಟ್ರಗಳಲ್ಲಿ ಈಗಾಗಲೇ ಆರ್ಥಿಕ ಬೆಳವಣಿಗೆ ಕುಂಟುತ್ತಾ ಸಾಗಿದ್ದು 2023ರಲ್ಲಿ ಇದು ಶೇ.0.5ಕ್ಕೆ ಇಳಿಯುವ ಸಾಧ್ಯತೆಗಳಿವೆ.

ಪರಿಣಾಮ?
ಪ್ರತಿಯೊಂದು ದೇಶವನ್ನೂ ಬಾಧಿಸುತ್ತಿರುವ ಬೆಲೆ ಏರಿಕೆ ಬಿಸಿಯು ಮಧ್ಯಮ ವರ್ಗ ಮತ್ತು ಬಡವರನ್ನು ಇನ್ನಿಲ್ಲದಂತೆ ಸುಡುತ್ತಿದೆ. ಅನಿಯಂತ್ರಿತ ಬೆಲೆ ಏರಿಕೆಯು ಮಧ್ಯಮ ವರ್ಗದ ಜನರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದರೆ ಕಡಿಮೆ ಆದಾಯವಿರುವ ಜನರ ಖರೀದಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಿದೆ. ಇದರ ಜತೆಯಲ್ಲಿ ಆದಾಯದಲ್ಲಿ ಕಡಿತ, ವಿವಿಧ ಸಾಲದ ಬಡ್ಡಿ ದರಗಳಲ್ಲಿ ಹೆಚ್ಚಳ, ನಿರುದ್ಯೋಗ ಸೃಷ್ಟಿ… ಹೀಗೆ ಜನಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.

-ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.