ಭಾವ‘ತೀರ’ದ ಯಾನ..: ರವಿ-ಶಶಿಯ ವಿರಹ ನೋಡಿ ಒಂದಾದ ಜೋಡಿಯದು
ಅಲೆಯು ಅಪ್ಪಳಿಸಿದಂತೆಲ್ಲ ಸವೆದ ಸಂಬಂಧವದು, ಎಲ್ಲದರಿಂದ ಬೇಸತ್ತು ಬೇರಾಗ ಬಯಸಿಹುದು.
Team Udayavani, Feb 14, 2023, 12:21 PM IST
ಸೂರ್ಯಾಸ್ತದ ಸಮಯವದು…ತಂದೆ ಪೂರ್ವವಾದರೆ ತಾಯಿ ಪಶ್ಚಿಮದತ್ತ, ಎತ್ತಲ್ಲೋ ಸಾಗಿತ್ತು ಇಬ್ಬರ ಚಿತ್ತ. ಸೂರ್ಯಾಸ್ತದ ಸಮಯವದು, ಸಾಗರವು ಭೋರ್ಗರೆಯುತಿಹುದು, ಬಳಿಯೇ ಮುದ್ದಿನ ಮಗುವು ನಗುತ ಆಡುತಲಿಹುದು..
ಪ್ರಾಣವೇ ನೀನೆನ್ನುತ ಪ್ರೇಮಿಸಿದ ಜೋಡಿಯದು, ಅದರ ಕುರುಹು ಆಡುತಿಹ ಕಂದಮ್ಮನೇ ಆಗಿಹುದು! ಕಾಲ ಕಳೆದಂತೆಲ್ಲ, ಅಲೆಯು ಅಪ್ಪಳಿಸಿದಂತೆಲ್ಲ ಸವೆದ ಸಂಬಂಧವದು, ಎಲ್ಲದರಿಂದ ಬೇಸತ್ತು ಬೇರಾಗ ಬಯಸಿಹುದು.
ʼಅಮ್ಮಾ ಅಗೋ ಅಲ್ನೋಡು…ʼ ಅದ್ಭುತದತ್ತ ಬೊಟ್ಟು ಮಾಡುತ್ತಾ ಮಗಳು ಕರೆದಿದ್ದಳು. ತಂದೆಯ ಮುಖವ ಅತ್ತ ತಿರುಗಿಸುತ ʼನೀನೂ ನೋಡು ಅಪ್ಪʼ ಎಂದಿದ್ದಳು.
ರವಿಯು ಮುಳುಗುತಲಿಲ್ಲ, ಶಶಿಯ ಮುಗುಳ್ನಗುವಿಲ್ಲ, ಸಂಜೆ ಸೊಬಗ ಕಳೆದುಕೊಂಡಂತೆ! ಮುಳುಗುತಿಹ ಸೂರ್ಯನಿಗೆ ಮೂಡುತಿಹ ಚಂದ್ರನ ಕಂಡು ಎಂದಿನಿಂದಲೋ ಒಲವಂತೆ.
ಹೇಗಾದೀತು ಆಕೆಯ ಆಗಮನ, ಆಗದೇ ಆತನ ನಿರ್ಗಮನ, ಅವರತ್ತಲೇ ನೆಟ್ಟಿತ್ತು ನೋಡುಗರ ಗಮನ.
ʼಒಂದು ಕ್ಷಣ ತಡಿಯಣ್ಣ…ʼ ಅವನೆಂದಾಗ ಅಲೆಯೊಂದು ಗಹಗಹಿಸಿಹುದು, ʼದಿನವೂ ಒಂದೇ ನಾಟಕವೇ..!?ʼ ಎಂದಿಹುದು. ಕಳೆದ ದಿನದ ನೆನಪು ಮತ್ತೆ ಮರುಕಳಿಸಿಹುದು. ಭಾಸ್ಕರನ ನುಂಗಲು ಕಡಲು ಬಾಯ್ತೆರೆದು ನಿಂತಿದೆ. ಶಶಿಗೆ ಅದ ನೋಡಿ ಅಳುವೇ ಬಂದಂತಿದೆ.
ಇಬ್ಬರ ದುಃಖವನು ಮಗುವು ನೋವಿನಲಿ ನೋಡುತಿದೆ, ನಾಳೆ ನನಗೂ ಇದು ಕಾದಿದೆಯೇ ಎಂಬುದ ನೆನೆನೆನೆದು ನಿಂತಲ್ಲೇ ಬೆದರುತಿದೆ.
ತಂದೆಯ ನೆರಳಿದ್ದರೆ ಹಿಡಿದ ತಾಯಿಯ ಕೈಬೆರಳು ಸಡಿಲಾಗುವ ಭಯ, ಜನನಿಯ ಕೈತುತ್ತು ಸವಿಯ ಬಯಸಿದರೆ ಜನಕನ ಹೆಗಲಿಂದ ಜಾರುವ ಆತಂಕ.. ಆಗ ಒಬ್ಬರಿಲ್ಲದೆ ಇನ್ನೊಬ್ಬರಿರುತ್ತಿರಲಿಲ್ಲ, ಈಗ ಒಬ್ಬರಿರುವಲ್ಲಿ ಇನ್ನೊಬ್ಬರು ಇರಬಯಸುತ್ತಿಲ್ಲ.
ಸೂರ್ಯ ಚಂದ್ರರ ನೋವ ನೋಡಲಾಗುತ್ತಿಲ್ಲ, ಒಟ್ಟಿಗಿದ್ದ ಕ್ಷಣಗಳ ಮರೆಯಲಾಗುತ್ತಿಲ್ಲ..
ಉತ್ತರ ದಕ್ಷಿಣಗಳು ಮುಖಾಮುಖಿಯಾಗಿಹವು, ಕಣ್ಣಾಲಿಯ ತುಂಬಿಕೊಂಡು ಪರಸ್ಪರ ನೋಡಿಕೊಂಡಿಹವು. ಮಗುವಿನ ಮೊಗದಲ್ಲಿ ಮುಗುಳ್ನಗು ಮೂಡಿಹುದು, ಹೆತ್ತವರು ಹತ್ತಿರಾದುದ ನೋಡಿ ಹರ್ಷಿಸುತಲಿಹುದು.
ಮುಳುಗುತ್ತ ರವಿಯೆಂದ, ನಾವಂತೂ ಒಂದಾಗಲಿಲ್ಲ, ನಮ್ಮ ವೇದನೆಯ ನೋಡಿ ಅವರಾದರೂ ಒಂದಾದರಲ್ಲ. ಬಾರದ ನಗುವ ತಾ ತೊಡುತ ಬಾನಂಗಳವನೇರುತ ಶಶಿಯು ಉಸುರಿಹಳು, ‘ತನ್ನ ಆಟವನು ಆ ದೇವರೇ ಬಲ್ಲ’.
ಆಕೆ ನುಡಿದಿಹಳು, ನೀನೇ ನನಗೆಲ್ಲಾ. ಆತನೆಂದಿಹ, ನೀನಿಲ್ಲದೆ ನಾನು ಏನೂ ಅಲ್ಲ
ಮೈತ್ರಿ. ಎಸ್ ಅಶ್ವತ್ಥಪುರ
ಸಂತ ಅಲೋಶಿಯಸ್ ಕಾಲೇಜು, ಮಂಗಳೂರು