Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

ಮೇಳದ ಯಜಮಾನನಿಗೆ ಕಲೆಯ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಯಕ್ಷಗಾನದ ಮೌಲ್ಯ ಉಳಿಯಲು ಸಾಧ್ಯ

Team Udayavani, Mar 10, 2024, 1:47 AM IST

1-dasdsad

ಯಕ್ಷಗಾನ ರಂಗದ ಬಡಗುತಿಟ್ಟಿನ ಸಾಂಪ್ರ ದಾಯಿಕ ಕಲಾವಿದರಲ್ಲಿ ಐರೋಡಿ ಗೋವಿಂದಪ್ಪ ಅವರು ಅಗ್ರಗಣ್ಯರು. ಅದರಲ್ಲೂ ಬಡಗಿನ ಕರ್ಣ ಎಂದಾಕ್ಷಣ ನಮ್ಮ ಸ್ಮತಿ ಪಟಲದ ಮುಂದೆ ಅಚ್ಚೊತ್ತುವ ಚಿತ್ರ ಐರೋಡಿಯವರದ್ದು.ಸುಮಾರು 5 ದಶಕಗಳ ಕಾಲ ಯಕ್ಷರಂಗದಲ್ಲಿ ಕಲಾವಿದನಾಗಿ ದುಡಿದ ಇವರು, ಇದೀಗ 10 ವರ್ಷಗಳಿಂದ ಐರೋಡಿಯ ತನ್ನ ಸ್ವಗೃಹದಲ್ಲಿ ಪತ್ನಿ, ಮಕ್ಕಳೊಂದಿಗೆ ವಿಶ್ರಾಂತಿ ಜೀವನದಲ್ಲಿದ್ದಾರೆ. ನಿವೃತ್ತಿಯ ಅನಂತರವೂ ಆಗಾಗ ಹವ್ಯಾಸಿಯಾಗಿ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದರಾದರೂ ವರ್ಷ ದಿಂದೀಚೆಗೆ ವಯೋಸಹಜ ಸಮಸ್ಯೆಗಳಿಂದ ಬಣ್ಣ ಹಚ್ಚಲು ಮುಂದಾಗಿಲ್ಲ. ಸಾಸ್ತಾನ ಸಮೀಪ ಐರೋಡಿಯಲ್ಲಿ 1945ರಲ್ಲಿ ಬೂದ ಭಾಗವತ ಮತ್ತು ಗೌರಿ ದಂಪತಿಯ ಪುತ್ರನಾಗಿ ಜನಿಸಿದ ಐರೋಡಿ ಗೋವಿಂದಪ್ಪನವರು ಐದನೇ ತರಗತಿಗೆ ಶಿಕ್ಷಣ ಮುಗಿಸಿ ಭಾಗವತರಾಗಿದ್ದ ತಂದೆಯವರಿಂದ ತಾಳ, ನೃತ್ಯ, ಬಣ್ಣಗಾರಿಕೆಯ ಪ್ರಾಥಮಿಕ ಅಭ್ಯಾಸ ಕಲಿತು, ಯಕ್ಷಗುರುಗಳಿಂದ ತರಬೇತಿ ಪಡೆದು ಗೋಳಿಗರಡಿ ಮೇಳದ ಮೂಲಕ ಯಕ್ಷ ವೃತ್ತಿ ಪ್ರವೇಶಿಸಿದರು. ಬಳಿಕ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರೀ, ಹಿರಿಯಡಕ, ಕುಂಬ್ಳೆ ಮೇಳದಲ್ಲಿ 55ವರ್ಷ ತಿರುಗಾಟ ನಡೆಸಿದರು. ಯಕ್ಷರಂಗದಲ್ಲಿ ಕರ್ಣ, ಭೀಷ್ಮ, ತಾಮ್ರಧ್ವಜ, ಅರ್ಜುನ, ಜಾಂಬವ ಮೊದಲಾದ ಪಾತ್ರಗಳ ಮೂಲಕ ಜನಪ್ರಿಯರಾದವರು. ಬಡಗು ಮತ್ತು ತೆಂಕು ಎರಡೂ ತಿಟ್ಟುಗಳಲ್ಲಿ ತಿರುಗಾಟ ನಡೆಸಿರುವುದು ಇವರ ಇನ್ನೊಂದು ಹಿರಿಮೆ. 2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಜನಪದ ಪ್ರಶಸ್ತಿ, ಸೋಮನಾಥ ಹೆಗ್ಡೆ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಸಂದಿವೆ.

ಯಕ್ಷಗಾನ ಕ್ಷೇತ್ರದ ಕುರಿತು ನಿಮಗೆ ಒಲವು ಮೂಡಲು ಪ್ರೇರಕವಾದ ಅಂಶ ಮತ್ತು ಆ ಕಾಲದಲ್ಲಿ ನಿಮ್ಮ ಮೆಚ್ಚಿನ ಕಲಾವಿದರು ಯಾರಾಗಿದ್ದರು?
ನನ್ನ ತಂದೆ ಬೂದ ಭಾಗವತರು ಕಲಾವಿದರಾಗಿ ದ್ದರು. ನಾನು ಪಾಂಡೇಶ್ವರ ಶಾಲೆಯಲ್ಲಿ ಐದನೇ ತರಗತಿಯಲ್ಲಿರುವಾಗ ವಾರ್ಷಿಕೋತ್ಸವವೊಂದಕ್ಕೆ ಯಕ್ಷಗುರು ಕಾಂತಪ್ಪ ಮಾಸ್ಟರ್‌, ಬಸವ ಮಾಸ್ಟರ್‌ ಅವರು ವೃಷಸೇನ ಪ್ರಸಂಗದಲ್ಲಿ ಭೀಮನ ಪಾತ್ರ ಮಾಡಿಸಿದ್ದರು. ಅದೇ ವರ್ಷ ಗೋಳಿಗರಡಿ ಮೇಳ ಪುನರಾರಂಭಗೊಂಡಿತ್ತು. ಹೀಗಾಗಿ ತಂದೆಯೊಂದಿಗೆ ಮೇಳದ ತಿರುಗಾಟ ಆರಂಭಿಸಿದ್ದೆ. ಆಗ ನಮ್ಮ ಮೇಳದಲ್ಲಿ ಎರಡನೇ ವೇಷದಲ್ಲಿದ್ದ ಹಾರಾಡಿ ತಿಮ್ಮಣ್ಣ ಹಾಗೂ ಆ ಕಾಲದ ಸ್ಟಾರ್‌ ಕಲಾವಿದ ಹಾರಾಡಿ ರಾಮ ಗಾಣಿಗರು ನನಗೆ ಪ್ರೇರಣೆಯಾಗಿದ್ದರು.

ಕರ್ಣಾಜುನ ಕಾಳಗದಲ್ಲಿ ನಿಮ್ಮ ಮೆಚ್ಚಿನ ಕರ್ಣನ ಪಾತ್ರದ ವೈಶಿಷ್ಟ್ಯ ದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕರ್ಣನ ಪಾತ್ರ ಭಾವನಾತ್ಮಕವಾದದ್ದು. ತನ್ನವರು ಎನ್ನುವ ಎಲ್ಲ ಇದ್ದು; ಯಾರೂ ಇಲ್ಲದಂತೆ. ಸ್ನೇಹಕ್ಕೆ ಪ್ರಾಣ ನೀಡುವ ಸ್ನೇಹಿತನಂತೆ, ಅಗಣಿತವಾದ ಶಕ್ತಿ, ಸಾಮರ್ಥ್ಯಗಳಿದ್ದು ಯಾವುದನ್ನೂ ಪ್ರಕಟಪಡಿಸ ಲಾರದವನಂತೆ. ತಾಯಿಯೊಂದಿಗಿನ ಆತನ ಭಾವನಾತ್ಮಕ ಸನ್ನಿವೇಶ ಇದೆಲ್ಲ ವಿಶಿಷ್ಟವಾದದ್ದು. ನನಗನಿಸಿದ ಪ್ರಕಾರ ಓರ್ವ ಕಲಾವಿದನಿಗೆ ಪರಕಾಯ ಪ್ರವೇಶಿಸಿ ಅಭಿನಯಿಸಲು ಮತ್ತು ತನ್ನೊಳಗಿನ ಸಾಮರ್ಥ್ಯವನ್ನು ಪ್ರಕಟಪಡಿಸಲು ಈ ರೀತಿಯ ಪಾತ್ರಗಳು ತೀರ ಅಪರೂಪ.

ಒಂದು ಒಳ್ಳೆಯ ಮೇಳ, ಒಳ್ಳೆ ಪ್ರದರ್ಶನ ನಡಯಬೇಕಿದ್ದರೆ, ಕಲಾವಿದರ ಜತೆ ಮೇಳದ ಯಜಮಾನರು ಮುಖ್ಯ ಎಂಬ ಮಾತಿದೆ. ನಿಮ್ಮ ಪ್ರಕಾರ ಮೇಳದ ಯಜಮಾನ ರಿಗೆ ಎನೆಲ್ಲ ಜವಾಬ್ದಾರಿಗಳು ಇವೆ?
ಒಳ್ಳೆಯ ಪ್ರಶ್ನೆ. ಒಂದು ಮೇಳ ಒಳ್ಳೆಯ ರೀತಿ ನಡೆಯಬೇಕಿದ್ದರೆ ಯಜಮಾನನ ಪಾತ್ರ ಮಹತ್ವ
ದಿದೆ. ಮುಖ್ಯವಾಗಿ ಯಜಮಾನನಿಗೆ ಯಕ್ಷಗಾನದ ಬಗ್ಗೆ, ಪಾತ್ರಗಳ ಬಗ್ಗೆ ಜ್ಞಾನ ಇರಬೇಕು. ಪ್ರದರ್ಶನ ಗಳನ್ನು ನೋಡುವ ಗುಣ ಇರಬೇಕು. ಹಿಂದೆಲ್ಲ ಯಜಮಾನರು ಮೇಳದ ಪ್ರದರ್ಶನಗಳನ್ನು ನೋಡಲು ತಪ್ಪದೆ ಬರುತ್ತಿದ್ದರು. ಕಲಾವಿದನ ಬಗ್ಗೆ, ಪ್ರದರ್ಶನದ ಬಗ್ಗೆ, ಪ್ರೇಕ್ಷಕರ ಜತೆ ಚರ್ಚೆ ಮಾಡು ತ್ತಿದ್ದರು. ಆಟ ಮುಗಿದ ಅನಂತರ ಚೌಕಿಗೆ ಬಂದು ತಪ್ಪು-ಸರಿಯನ್ನ ತಿಳಿಸುತ್ತಿದ್ದರು. ತಿಂಗಳಿಗೆ ಎಲ್ಲ ಕಲಾವಿದರನ್ನು ಸೇರಿಸಿ ಒಂದೆರಡು ಮೀಟಿಂಗ್‌ ರೀತಿ ಯಲ್ಲಿ ಮಾಡಿ ಮಾತನಾಡುತ್ತಿದ್ದರು. ಯಜಮಾನ ಪಿ.ಕಿಶನ್‌ ಹೆಗ್ಡೆಯವರಲ್ಲಿ ಈಗಲೂ ಈ ರೀತಿಯ ಗುಣವಿದೆ. ಆದರೆ ಈಗ ಯಕ್ಷಗಾನ ವ್ಯಾವಹಾರಿಕ ವಾದ್ದರಿಂದ ಕೆಲವು ಮೇಳಗಳ ಯಜಮಾನರಿಗೆ ಬೆಳಗ್ಗೆ ಸಿಗುವ ವೀಳ್ಯ ಮುಖ್ಯ ಹೊರತು, ಪ್ರದರ್ಶನದ ಗುಣಮಟ್ಟ ಮುಖ್ಯವಾಗಿಲ್ಲ. ಹೀಗಾಗಿ ಕಲೆಯ ಮೌಲ್ಯ ಕುಸಿಯುತ್ತಿದೆ. ಯಜಮಾನನಿಗೆ ಪ್ರಥಮವಾಗಿ ಕಲೆಯ ಬಗ್ಗೆ ಗೌರವ, ಪ್ರೀತಿ ಅಗತ್ಯ.

ಯಕ್ಷಗಾನದ ಮೌಲ್ಯ ಕುಸಿಯುತ್ತಿದೆ ಎನ್ನುತ್ತೀರಿ; ಆದರೆ ಮೇಳಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆಯಲ್ಲ?
ಇದಕ್ಕೆ ಕಾರಣವೇ ಯಕ್ಷಗಾನದ ಮೌಲ್ಯ ಕುಸಿದಿರುವುದು. ಹಿಂದೆ ಮೇಳಗಳಿಗೆ ಗುಣಮಟ್ಟ ಮುಖ್ಯವಾಗಿತ್ತು. ಒಬ್ಬ ಕಲಾವಿದನನ್ನ ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಅವನು ಅಭಿನಯಿಸುವ ಮೇಳದ ಆಟವನ್ನು ನೋಡಿ, ಅವನಲ್ಲಿರುವ ಸಂಪ್ರದಾಯ, ಅವನ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವನ್ನು ತಿಳಿದು ಮೇಳಕ್ಕೆ ಸೇರ್ಪಡೆಗೊಳಿಸಿಕೊಳ್ಳು ತ್ತಿದ್ದರು. ಯಕ್ಷಗಾನ ಆಡಿಸುವವರು ಮೇಳದ ವಿಶೇಷತೆಯನ್ನು ಗಮನಿಸಿ ಆಟ ನೀಡುತ್ತಿದ್ದರು. ಆದರೆ ಈಗ ಬಣ್ಣ ಹಚ್ಚಲು ಬಂದವರೆಲ್ಲ ಎರಡನೇ ವೇಷಧಾರಿಗಳಾಗಿದ್ದಾರೆ. ಮೌಲ್ಯ ಇಲ್ಲದಿದ್ದರೂ ಕಲೆಯ ಮೇಲಿನ ಪ್ರೀತಿಯಿಂದ ಪ್ರದರ್ಶನ ನೀಡುವರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಮೇಳಗಳ ಸಂಖ್ಯೆ ಹೆಚ್ಚುತ್ತಾ ಇದೆ.

ಆಗಿನ ಕಾಲದ ಕಲಾವಿದರಿಗೆ ಹೋಲಿಸಿ ದರೆ ಈಗಿನವರ ತಯಾರಿ ಕಡಿಮೆ ಎಂಬ ಅಭಿಪ್ರಾಯವಿದೆ. ಪ್ರದರ್ಶನಕ್ಕೆ ಮುಂಚೆ ತಯಾರಿ ಯಾಕೆ ಅಗತ್ಯ ಮತ್ತು ಹೇಗಿರಬೇಕು?
ಹಿಂದೆ ನಾವು ಕಾಲ್ನಡಿಗೆಯಲ್ಲಿ ಒಂದೂರಿಂದ- ಇನ್ನೊಂದೂರಿಗೆ ತಲುಪುತ್ತಿದ್ದೆವು. ಆಗೆಲ್ಲ ಹಿರಿಯ ಕಲಾವಿದರಲ್ಲಿ ಪುರಾಣ ಕಥೆಗಳು, ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಸುತ್ತ ದಾರಿ ಸವೆಸುತ್ತಿದ್ದೆವು. ಮೇಳದ ಚೌಕಿಯಲ್ಲೂ ಪ್ರಸಂಗ ಪುಸ್ತಕ, ರಾಮಾಯಣ, ಮಹಾಭಾರತ ಪುಸ್ತಕಗಳ ಅಭ್ಯಾಸ ನಡೆಸುತ್ತಿದ್ದೆವು. ಪ್ರದರ್ಶನಕ್ಕೆ ಅಣಿಯಾಗುವ ಮುನ್ನ ಹಿರಿಯ ಕಲಾವಿದರು, ಎದುರು ವೇಷಧಾರಿಗಳ ಜತೆ ಚರ್ಚೆ ನಡೆಸುತ್ತಿದ್ದೆವು. ಭಾಗವತರು ತಪ್ಪುಗಳನ್ನು ಪಟ್ಟಿ ಮಾಡಿ ಬೆಳಗ್ಗೆ ತಿಳಿಸುತ್ತಿದ್ದರು. ಆಗಿನ ಕಾಲಕ್ಕೆ ಹೋಲಿಸಿದರೆ ಈಗಿನವರ ತಯಾರಿ ಏನೇನು ಸಾಲದು. ಈಗ ಕಲಾವಿದರಿಗೆ ಮೊಬೈಲ್‌, ಯೂಟ್ಯೂಬ್‌ ಸರ್ವಸ್ವವಾಗಿದೆ. ಆದರೆ ಇವುಗಳು ತಪ್ಪುಗಳಿಂದ, ಏಕಾಭಿಪ್ರಾಯಗಳಿಂದ ತುಂಬಿರುತ್ತವೆ. ಈಗಿನ ಬಹುತೇಕ ಕಲಾವಿದರು ರಂಗಸ್ಥಳಕ್ಕೆ ಹೋಗುವ ಹತ್ತು ನಿಮಿಷ ಮುಂಚೆ ಕಾರಲ್ಲಿ ಬರುತ್ತಾರೆ. ವೇಷ ಹಾಕಿ ನೇರ ರಂಗಸ್ಥಳ ಹೊಕ್ಕಿ ಅಷ್ಟೇ ವೇಗದಲ್ಲಿ ಮುಗಿಸಿ ಮನೆ ಸೇರುತ್ತಾರೆ. ಹೀಗಾಗಿ ಎಲ್ಲ ಪ್ರದರ್ಶನಗಳು ಏಕರೂಪತೆಯಿಂದ ಕೂಡಿರುತ್ತದೆ.

ಪ್ರದರ್ಶನದಲ್ಲಿ ಪದ್ಯ ಎತ್ತುಗಡಿ ಮಾಡುವ ಕಲಾವಿದರೇ ಈಗ ಮಾಯವಾಗು ತ್ತಿದ್ದಾರೆ. ನಿಮ್ಮ ಹಲವಾರು ಪಾತ್ರದ ಯಶಸ್ವಿಗೆ ಪದ್ಯ ಎತ್ತುಗಡಿ ಕಾರಣ ಎಂಬ ಮಾತಿದೆ. ಪದ್ಯ ಎತ್ತುಗಡಿಯ ಮಹತ್ವವೇನು ?
ಯಕ್ಷಗಾನದಲ್ಲಿ ಪ್ರದರ್ಶನವನ್ನು ಇನ್ನಷ್ಟು ಸೊಗಸುಗೊಳಿಸಲು ಹಾಗೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಪದ್ಯ ಎತ್ತುಗಡಿ ಅತ್ಯಂತ ಮುಖ್ಯ ವಾದದ್ದು. ಆದರೆ ಪದ್ಯ ಎತ್ತಲು ಶ್ರುತಿ ಮಾಹಿತಿ, ಸ್ವರ ಭಾರ ಎಲ್ಲವೂ ಬೇಕಾಗುತ್ತದೆ. ಮೈಕ್‌ ಇಲ್ಲದ ಕಾಲದಲ್ಲಿ ಕಲಾವಿದರು ಸ್ವರದಿಂದಲೇ ಮೈಲುಗಟ್ಟಲೆ ತಲುಪಿ ಎಲ್ಲರನ್ನು ಸೆಳೆಯುತ್ತಿದ್ದೆವು. ನನ್ನ ಹಲವಾರು ಪಾತ್ರಗಳನ್ನು ಜನರು ಮೆಚ್ಚಿಕೊಳ್ಳುವುದಕ್ಕೆ ಪದ್ಯ ಎತ್ತುಗಡಿ ಕಾರಣವಿರಬಹುದು. ಆದರೆ ಇವತ್ತು ಪದ್ಯ ಎತ್ತುವ ಕಲಾವಿದರೇ ಸಿಗುತ್ತಿಲ್ಲ.

ಯಕ್ಷಗಾನದಲ್ಲಿ ಈಗ ಐದಾರು ಮಹಿಷಾ ಸುರ, ಎಳೆಂಟು ದೇವಿಯರು ಒಟ್ಟಿಗೆ ಪ್ರವೇಶಿಸುತ್ತಾರೆ. ಹೀಗೆ ಒಂದೇ ಪ್ರಸಂಗಕ್ಕೆ ಒಂದೇ ಸನ್ನಿವೇಶಕ್ಕೆ ಬಹು ಕಲಾವಿದರನ್ನು ಬಳಸುವ ಬಗ್ಗೆ ನಿಮ್ಮ ಅಭಿಪ್ರಾಯ?
ಅಂಥವುಗಳನ್ನು ಯಕ್ಷಗಾನ ಅಂತ ಕರೆಯಬೇಡಿ. ಅದು ಆಡಂಬರ ಅಷ್ಟೆ. ಇದರಿಂದ ಯಕ್ಷಗಾನದ ನಿಜಸತ್ವ ಬೆಳೆಯಲು ಅಸಾಧ್ಯ. ಹಿಂದೆ ರಾತ್ರಿ ಬಣ್ಣ ಹಚ್ಚಿದ ಕಲಾವಿದ ಬೆಳಗಿನ ತನಕ ಪಾತ್ರಕ್ಕೆ ಜೀವ ತುಂಬುತ್ತಿದ್ದ. ಆದರೆ ಈಗ ಒಂದೆರಡು ಗಂಟೆ ಅಭಿನಯಿಸುವ ತಾಕತ್ತಿಲ್ಲದೆ ಎರಡು ಮೂರು ಜನ ಪಾತ್ರ ಮಾಡಬೇಕಾಗಿದೆ.

ಹೊಸ ಪ್ರಸಂಗದ ಪ್ರದರ್ಶನ ಅನಿವಾರ್ಯ ಎನ್ನುವ ಪರಿಸ್ಥಿತಿ ಇದೆ. ಹೊಸ ಪ್ರಸಂಗಗಳು ಯಾವ ರೀತಿ ಇರಬೇಕು ಅಂತ ಬಯಸುತ್ತೀರಾ?
ಹೊಸ ಪ್ರಸಂಗಕ್ಕೆ ಸ್ವಲ್ಪವಾದರೂ ಪುರಾಣ ಅಥವಾ ಹಳೆ ಪ್ರಸಂಗದ ರೀತಿಯ ಟಚ್‌ಗಳಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಾಸ್ತ್ರೀಯವಾದ ಪದ್ಯಗಳಿರಬೇಕು. ಪ್ರಸಂಗಕರ್ತನಿಗೆ ಒಂದಷ್ಟು ಪ್ರಬುದ್ಧತೆ ಇರಬೇಕು.

ನೀವು ಈಗಿನ ಯಕ್ಷಗಾನ ಪ್ರದರ್ಶನ ಗಳನ್ನು ನೋಡುತ್ತಾ ಇದ್ದೀರಾ? ಯಾವ ರೀತಿ ಪ್ರದರ್ಶನ ನೋಡಲು ಬಯಸುತ್ತೀರಿ?
ಒಂದೆರಡು ವರ್ಷದಿಂದ ಯಕ್ಷಗಾನ ಪ್ರದರ್ಶನವನ್ನು ನೋಡುವುದನ್ನ ಬಿಟ್ಟಿದ್ದೇನೆ. ಯಾಕೆಂದರೆ ಈಗಿನ ಕೆಲವು ಮೇಳಗಳ ಭಾಗವತರ ಪದ್ಯಗಳು, ವೇಷಭೂಷಣ, ಪಾತ್ರ ಪೋಷಣೆ ಯಾವುದೂ ನನಗೆ ಯಕ್ಷಗಾನೀಯವಾಗಿ ತೋರುವುದಿಲ್ಲ. ಬುದ್ಧಿ ಮಾತು ಹೇಳಿದರೆ, ಕೇಳುವ ಸೌಜನ್ಯ, ಔದಾರ್ಯ ಕೂಡ ಕಡಿಮೆಯಾಗಿದೆ. ಹೀಗಾಗಿ ಆಟ ನೋಡುತ್ತಿಲ್ಲ. ಒಳ್ಳೆಯ ಕಲಾವಿದರು, ಒಳ್ಳೆ ಪೌರಾಣಿಕ ಪ್ರಸಂಗಗಳಿದ್ದರೆ ನೋಡುತ್ತೇನೆ.

ಬಡಗಿನಲ್ಲಿ ಕರ್ಣ, ಭೀಷ್ಮ, ಇನ್ನಿತರ ನಿಮ್ಮ ಪೇಟೆಂಟ್‌ ವೇಷಗಳನ್ನು ನಿಮಗೆ ತಪ್ತಿ ನೀಡುವಂತೆ ಪ್ರದರ್ಶಿಸುವ ಕಲಾವಿದರು ಯಾರಾದರೂ ಇದ್ದಾರಾ?
ಪ್ರಸ್ತುತ ಕೋಟ ಸುರೇಶ ಬಂಗೇರ, ಆಜ್ರಿ ಗೋಪಾಲ ಗಾಣಿಗ ಮತ್ತೆ ಹವ್ಯಾಸಿಗಳಲ್ಲಿ ಅಶೋಕ್‌ ಆಚಾರ್ಯ ಸಾೖಬ್ರಕಟ್ಟೆ ಮೊದಲಾದವರು ಒಂದಷ್ಟು ಮಟ್ಟಿಗೆ ತೃಪ್ತಿ ನೀಡುವಂತೆ ಅಭಿನಯಿಸುತ್ತಾರೆ.

  ರಾಜೇಶ್‌ ಗಾಣಿಗ, ಅಚ್ಲಾಡಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.