ಕೆಲವರ ಧನದಾಹಕ್ಕೆ ಅಂದು ದ. ಆಫ್ರಿಕಾದೊಂದಿಗೆ ಕ್ರಿಕೆಟ್ ಕೂಡಾ ತಲೆತಗ್ಗಿಸಿತ್ತು!


ಕೀರ್ತನ್ ಶೆಟ್ಟಿ ಬೋಳ, Jun 19, 2021, 9:10 AM IST

how money ruled cricket in 1992 world cup

12 ನಿಮಿಷಗಳು.. ಅದು ವಿಶ್ವಕಪ್ ಸೆಮಿಫೈನಲ್ ಪಂದ್ಯವೊಂದರ ಕೊನೆಯ 12 ನಿಮಿಷಗಳು.. ಆಟಗಾರರ, ಅಸಂಖ್ಯ ಅಭಿಮಾನಿಗಳ ಕನಸನ್ನು ನುಚ್ಚು ನೂರು ಮಾಡಿದ್ದ 12 ನಿಮಿಷಗಳು. ಹಣದ ದುರಾಸೆ, ವಾಹಿನಿಗಳ ದರ್ಪ, ತಲೆಬುಡವಿಲ್ಲದ ನಿಯಮಗಳ ಕಾರಣದಿಂದ ಕ್ರಿಕೆಟ್ ನತ್ತ ಜನರು ಅಪಹ್ಯಾಸ ಮಾಡುವಂತಾದ ಆ 12 ನಿಮಿಷಗಳು..!

ಹೌದು, ಅದು 1992ರ ಏಕದಿನ ವಿಶ್ವಕಪ್ ನ ಸೆಮಿಫೈನಲ್ ಪಂದ್ಯ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವದು. ಈಗ ನಿಮಗೆ ಗೊತ್ತಾಗಿರಬಹುದು, “ಅದೇ ಅಲ್ವಾ.. ದಕ್ಷಿಣ ಆಫ್ರಿಕಾ ಒಂದು ಎಸೆತದಲ್ಲಿ 22 ರನ್ ಗಳಿಸಬೇಕಾಗಿದ್ದ ಪಂದ್ಯ ..” ಎಂದು. ಹೌದು, ಅದೇ ಪಂದ್ಯ.. ಅಸಾಧ್ಯ ಗುರಿ ಬೆನ್ನತ್ತಲಾಗದ ದಕ್ಷಿಣ ಆಫ್ರಿಕಾ ಅಂದು ಇಂಗ್ಲೆಂಡ್ ಗೆ ಸೋತಿತ್ತು. ಆದರೆ ಗೆದ್ದ ಆಂಗ್ಲರ ಮುಖದಲ್ಲೂ ಸಂತಸವಿರಲಿಲ್ಲ. ಯಾಕೆ ಗೊತ್ತಾ, ಅದರ ಹಿಂದಿನ ಕಥೆ ಮುಂದೆ ಓದಿ.

ವರ್ಣಭೇದ ನೀತಿ ಮತ್ತು ಕ್ರಿಕೆಟ್

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಜಾರಿಯಲ್ಲಿದ್ದ ಕಾಲವದು. ಅಲ್ಲಿ ಬಿಳಿಯರ ಅಧಿಕಾರ ನಡೆಯುತ್ತಿತ್ತು. ಆಫ್ರಿಕಾ ಮೂಲ ನಿವಾಸಿಗಳಿಗೆ, ಕರಿಯರಿಗೆ, ಭಾರತ ಮತ್ತು ಪಾಕಿಸ್ಥಾನಿಗಳಿಗೆ ಯಾವುದೇ ಸೌಲಭ್ಯವಿರದ ಕಾಲವದು. ಇವರಿಗೆ ಮತದಾನದ ಹಕ್ಕು ಕೂಡಾ ಇರಲಿಲ್ಲ. ಕಪ್ಪು ವರ್ಣೀಯರನ್ನು ಕೀಳಾಗಿ ಕಾಣಲಾಗುತ್ತಿತ್ತು. ಇದನ್ನು ಖಂಡಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಕ್ರಿಕೆಟ್ ನಿಂದ ದೂರ ಇಡಲಾಗಿತ್ತು. ಅದು ಕೂಡ ಬರೋಬ್ಬರಿ 22 ವರ್ಷಗಳ ಕಾಲ.

ವರ್ಣಭೇದ ನೀತಿಯ ವಿರುದ್ಧ ನೆಲ್ಸನ್ ಮಂಡೇಲಾ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೋರಾಟಗಳು ನಡೆಯುತ್ತಿತ್ತು. 1991 ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಗೆ ಮತ್ತೆ ಮಾನ್ಯತೆ ನೀಡಲಾಯಿತು. ಮತ್ತೆ ಕ್ರಿಕೆಟ್ ಚಟುವಟಿಕೆಗಳನ್ನು ಆರಂಭಿಸಿದ ಹರಿಣಗಳು ಮುಂದಿನ ವರ್ಷ (1992) ನಡೆಯಲಿದ್ದ ಏಕದಿನ ವಿಶ್ವಕಪ್ ನಲ್ಲಿ ಆಡುವ ಕನಸು ಕಾಣುತ್ತಿದ್ದರು. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಕಾರಣ ದ. ಆಫ್ರಿಕಾದಲ್ಲಿ ವರ್ಣಭೇದ ನೀತಿ ಇನ್ನೂ ಜಾರಿಯಲ್ಲಿತ್ತು.

1992 ಏಕದಿನ ವಿಶ್ವಕಪ್

1992 ಏಕದಿನ ವಿಶ್ವಕಪ್ ನ್ನು ಆಯೋಜನೆ ಮಾಡಿದ್ದು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು. ವಿಶ್ವ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಉತ್ತುಂಗದಲ್ಲಿದ್ದ ಕಾಲವದು. ಅದರ ಹಿಂದಿನ ವಿಶ್ವಕಪ್ ನಲ್ಲಿ ಕಾಂಗರೂಗಳೇ ಜಯಿಸಿದ್ದರು. ವಿಶ್ವ ಕ್ರಿಕೆಟ್ ಗೆ ಆದಾಯ ತಂದುಕೊಡುವ ಪ್ರಮುಖ ತಾಣವಾಗಿತ್ತು ಆಸೀಸ್.

ಇತ್ತ ವರ್ಣಭೇದ ನೀತಿ ಇನ್ನೂ ಜೀವಂತವಾಗಿದ್ದ ಕಾರಣ ಈ ವಿಶ್ವಕಪ್ ಗೆ ಆಡಲು ದ. ಆಫ್ರಿಕಾಗೆ ಐಸಿಸಿ ಅನುಮತಿ ನೀಡಿರಲಿಲ್ಲ. ಆದರೆ ನೆಲ್ಸನ್ ಮಂಡೇಲಾ ಅವರ ಮುತುವರ್ಜಿಯ ಮಧ್ಯಸ್ಥಿಕೆಯ ಕಾರಣದಿಂದ ಕೆಪ್ಲರ್ ವೆಸೆಲ್ಸ್ ನಾಯಕತ್ವದ ದ. ಆಫ್ರಿಕಾ ತಂಡ ವಿಶ್ವಕಪ್ ಗಾಗಿ ಆಸ್ಟ್ರೇಲಿಯಾ ವಿಮಾನವೇರಿತ್ತು. ಆದರೆ ಐಸಿಸಿ ಒಂದು ಷರತ್ತು ವಿಧಿಸಿತ್ತು.

ಹೌದು, ವರ್ಣಭೇದ ನೀತಿಯನ್ನು ಕೊನೆಗೊಳಿಸಬೇಕೇ ಎನ್ನುವುದರ ಬಗ್ಗೆ ಹರಿಣಗಳ ನಾಡಿನಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. 22 ಮಿಲಿಯನ್ ಜನರ ಭವಿಷ್ಯವನ್ನು ಸುಮಾರು 2.8 ಮಿಲಿಯನ್ ಬಿಳಿಯ ದಕ್ಷಿಣ ಆಫ್ರಿಕಾ ಜನರು ನಿರ್ಧರಿಸಬೇಕಿತ್ತು. ಇದರಲ್ಲಿ ನಾವು ಜಯ ಗಳಿಸುತ್ತೇವೆ ಎಂಬ ನಂಬಿಕೆಯಿಂದಲೇ ನೆಲ್ಸನ್ ಮಂಡೇಲಾ ಐಸಿಸಿಯನ್ನು ಒಪ್ಪಿಸಿದ್ದು. ಆದರೆ ಆ ಜನಾಭಿಪ್ರಾಯದ ಫಲಿತಾಂಶ ವಿಶ್ವಕಪ್ ಕೂಟ ನಡೆಯುತ್ತಿರುವಾಗಲೇ ಬರುವುದರಲ್ಲಿತ್ತು. ಹೀಗಾಗಿ ವಿಶ್ವಕಪ್ ನಲ್ಲಿ ಭಾಗವಹಿಸಬಹುದು ಆದರೆ ಜನಾಭಿಪ್ರಾಯದಲ್ಲಿಒಂದು ವೇಳೆ ಕಪ್ಪು ವರ್ಣೀಯರಿಗೆ ಸೋಲಾದರೆ ದಕ್ಷಿಣ ಆಫ್ರಿಕಾ ತಂಡ ಕೂಡಲೇ ವಿಶ್ವಕಪ್ ನಿಂದ ಹೊರಹೋಗಬೇಕು ಎಂದು ಐಸಿಸಿ ಕರಾರು ವಿಧಿಸಿತ್ತು.

ಹೀಗಾಗಿ ವಿಶ್ವಕಪ್ ನಲ್ಲಿ ದ. ಆಪ್ರಿಕಾಗೆ ಕಳೆದುಕೊಳ್ಳಲೇನು ಇರಲಿಲ್ಲ, ಕೆಪ್ಲರ್ ವೆಸೆಲ್ಸ್, ಓಮರ್ ಹೆನ್ರಿಯಂತಹ ಹಿರಿಯ ಆಟಗಾರರು, ಜಾಂಟಿ ರೋಡ್ಸ್, ಹ್ಯಾನ್ಸಿ ಕ್ರೋನಿಯೆರಂತಹ ಕಿರಿಯ ಆಟಗಾರರು ಇವು ತಮ್ಮ ಕ್ರಿಕೆಟ್ ಜೀವನದ ಕೊನೆಯ ಕೆಲವು ಪಂದ್ಯಗಳು ಎಂಬಂತೆ ಆಡುತ್ತಿದ್ದರು. ಯಾಕೆಂದರೆ ಅವರ ಕ್ರಿಕೆಟ್ ಭವಿಷ್ಯ ತವರರೂರಿನ ನಿರ್ಣಯದ ಮೇಲೆ ಅವಲಂಬಿತವಾಗಿತ್ತು. 22 ವರ್ಷಗಳ ಕ್ರಿಕೆಟ್ ವನವಾಸ ಮತ್ತು ಕೆಲವೇ ಕೆಲವು ದಿನಗಳ ಕ್ರಿಕೆಟ್ ಭವಿಷ್ಯ. ಹೀಗಾಗಿ ಯಾವುದೇ ಒತ್ತಡವಿಲ್ಲದೆ, ಸಂಪೂರ್ಣವಾಗಿ ಅನುಭವಿಸಿ ಆಡಲು ಹೊರಟಿತ್ತು ತಂಡ. ಹೀಗಾಗಿ ಮೊದಲ ಪಂದ್ಯದಲ್ಲೇ ಕಾಂಗರೂಗಳನ್ನು ಮಣಿಸಿತ್ತು.

ಪಾಕಿಸ್ಥಾನ ವಿರುದ್ಧದ ಜಾಂಟಿ ರೋಡ್ಸ್ ರ ಐತಿಹಾಸಿಕ ರನ್ ಔಟ್ ಮಾಡಿದ್ದು ಇದೇ ಕೂಟದಲ್ಲಿ. ಎಲ್ಲಾ ವೈರುಧ್ಯಗಳ ನಡುವೆ ದ. ಆಫ್ರಿಕಾ ಹೊಸ ಹುರುಪಿನಲ್ಲಿ ಆಡಿತ್ತು. ಸೆಮಿ ಫೈನಲ್ ಗೆ ಪ್ರವೇಶ ಪಡೆದಿತ್ತು. ಆದರೆ ಸೆಮಿಫೈನಲ್ ಆಡಲು ತಡೆಯೊಂದಿತ್ತು. ಕಾರಣ ಸೆಮಿಫೈನಲ್ ಗೂ ಮೊದಲು ವರ್ಣಭೇದ ನೀತಿಯ ಜನಾಭಿಪ್ರಾಯದ ಫಲಿತಾಂಶ ಬರುವುದರಲ್ಲಿತ್ತು. ನೆನಪಿರಲಿ, ಇಲ್ಲಿ ಕರಿಯ ವರ್ಣೀಯರಿಗೆ ಜಯವಾದರೆ ಮಾತ್ರ ಸೆಮಿಫೈನಲ್ ಇಲ್ಲವಾದರೆ ಮರಳಿ ತವರಿಗೆ! ಆದರೆ ಅದೃಷ್ಟವೆಂಬಂತೆ 68.72% ಜನರು ವರ್ಣಭೇದ ನೀತಿಗೆ ವಿರುದ್ಧ ಮತ ಹಾಕಿದರು. ಹೊಸ ದಕ್ಷಿಣ ಆಫ್ರಿಕಾದ ಉಗಮವಾಯಿತು. ಕ್ರಿಕೆಟ್ ಆಡಲು ದಾರಿ ಸುಗಮವಾಗಿತ್ತು. ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಮಾರ್ಚ್ 22 1992 ದಕ್ಷಿಣ ಆಫ್ರಿಕಾ- ಇಂಗ್ಲೆಂಡ್ ಸೆಮಿ ಫೈನಲ್ ಪಂದ್ಯಕ್ಕೆ ಎಲ್ಲವೂ ಸಿದ್ದವಾಗಿತ್ತು. ಇಲ್ಲಿಂದ ಅಸಲಿ ಕಹಾನಿ ಆರಂಭ.

ಎಲ್ಲಾ ಅಡೆತಡೆಗಳು ದೂರಾಗಿತ್ತು. ತವರು ನೆಲದಲ್ಲಿ ಸಂತಸ ಮೂಡಿತ್ತು. ಇತ್ತ ತಂಡ ವಿಶ್ವಕಪ್ ನ ಸೆಮಿ ಫೈನಲ್ ಗೇರಿತ್ತು. ಇನ್ನೆರಡೇ ಮೆಟ್ಟಿಲು. ಹೊಸ ದಕ್ಷಿಣ ಆಫ್ರಿಕಾಗೆ ವಿಶ್ವ ಕಪ್ ಗೆಲುವಿಗಿಂತ ದೊಡ್ಡ ಉಡುಗೊರೆ ಏನಿದೆ. ಕೆಚ್ಚೆದೆಯಿಂದ ಆಡಿ ಗೆಲ್ಲಬೇಕು ಎಂದು ಆಟಗಾರರು ಸಿದ್ದರಾಗಿದ್ದರು. ಆದರೆ ಟಾಸ್ ಸಮಯದಲ್ಲಿ ನಾಯಕ ಕೆಪ್ಲರ್ ಎಲ್ಲರಿಗೂ ಶಾಕ್ ನೀಡಿದ್ದರು. ಕಾರಣ ಟಾಸ್ ಗೆದ್ದ ಕೆಪ್ಲರ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಣಯ ಮಾಡಿದ್ದರು. ಅದರಲ್ಲೇನಿದೆ ಎಂದುಕೊಂಡರೆ ನೀವು ಮೊದಲು ಮಳೆ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು.

ಇದು ಕ್ರಿಕೆಟ್ ನಲ್ಲಿ ಒಂದು ವಿಚಿತ್ರ ನಿಯಮ. ಒಂದು ವೇಳೆ ಮಳೆ ಬಂದರೆ ಮೊದಲ ಇನ್ನಿಂಗ್ಸ್ ನ ಕಡಿಮೆ ರನ್ ಬಂದ ಓವರ್ ಗಳನ್ನು ಎರಡನೇ ತಂಡದ ಬ್ಯಾಟಿಂಗ್ ವೇಳೆ ಕಡಿತಗೊಳಿಸಲಾಗುತ್ತದೆ. ಉದಾಹರಣೆ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ 50 ಓವರ್ ನಲ್ಲಿ 200 ರನ್ ಗಳಿಸಿದೆ. ಆದರಲ್ಲಿ 8 ಮೇಡನ್ ಓವರ್ ಮಾಡಲಾಗಿದೆ. ಚೇಸಿಂಗ್ ಮಾಡುವ ವೇಳೆ ಮಳೆ ಬಂದರೆ ಚೇಸಿಂಗ್ ಮಾಡುವ ತಂಡ 42 ಓವರ್ ಗಳಲ್ಲಿ 200 ರನ್ ಗಳಿಸಬೇಕು. ಓವರ್ ಮಾತ್ರ ಕಡಿತ ರನ್ ಗುರಿ ಅಷ್ಟೇ! ಇದು ನಿಯಮ. ಹೀಗಾಗಿ ಟಾಸ್ ಗೆದ್ದ ತಂಡಗಳು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದವು.

ಈ ನಿಯಮದಿಂದ ಕೆಲ ತಂಡಗಳು ಸಮಸ್ಯೆಯನ್ನೂ ಅನುಭವಿಸಿದ್ದವು. ಲೀಗ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ಥಾನವನ್ನು ಕೇವಲ 74 ರನ್ ಗೆ ಆಲ್ ಔಟ್ ಮಾಡಿತ್ತು. ಆದರೆ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಮಳೆ ಬಂತು. ಮಳೆ ನಿಯಮ ಅಳವಡಿಸಲಾಯಿತು. ಅದರಂತೆ ಇಂಗ್ಲೆಂಡ್ 16 ಓವರ್ ಗಳಲ್ಲಿ 64 ರನ್ ಗಳಿಸುವ ಗುರಿ ನೀಡಲಾಯಿತು! ಆದರೆ ಮತ್ತೆ ಮಳೆ ಬಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿಯಿತು.

ಇಷ್ಟೆಲ್ಲಾ ಗೊತ್ತಿದ್ದರೂ ದ.ಆಫ್ರಿಕಾ ನಾಯಕ ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಕಾರಣ ಆ ವಿಶ್ವಕಪ್ ನಲ್ಲಿ ದ.ಆಫ್ರಿಕಾ ಚೇಸಿಂಗ್ ವೇಳೆ ಎಲ್ಲಾ ಪಂದ್ಯಗಳನ್ನು ಜಯಿಸಿತ್ತು. ಇದೇ ಅದೃಷ್ಟದ ಬೆನ್ನತ್ತಿ ಹೋದ ಕೆಪ್ಲರ್ ಈಗ ತಪ್ಪು ಮಾಡಿದ್ದರು!

ಇದೀಗ ಮತ್ತೊಂದು ಅತ್ಯಂತ ವಿಚಿತ್ರ ನಿಯಮವೊಂದರ ಬಗ್ಗೆ ಓದಿ. ಆ ಸಮಯದಲ್ಲಿ ಟಿವಿಯಲ್ಲಿ ಕ್ರಿಕೆಟ್ ನ ನೇರಪ್ರಸಾರ ಭಾರೀ ಪ್ರಚಾರ ಪಡೆದಿತ್ತು. ಅದು ಸಂಘಟಕರಿಗೂ ಉತ್ತಮ ಆದಾಯದ ಮೂಲವಾಗಿತ್ತು. ಹೀಗಾಗಿ ಐಸಿಸಿ ಗಿಂತ ನೇರಪ್ರಸಾರ ಮಾಡುವ ಚಾನೆಲ್ ಕೂಟದ ಮೇಲೆ ಹಿಡಿತ ಸಾಧಿಸುತ್ತಿತ್ತು. ಚಾನೆಲ್ ನ ಹಣಕಾಸಿನ ಲಾಭಕ್ಕಾಗಿ ಅದು ಯಾವ ಸಮಯಕ್ಕೆ ಪಂದ್ಯ ಮುಗಿಯಬೇಕು ಎಂದು ಸೂಚಿಸುತ್ತದೆಯೋ ಆ ಸಮಯಕ್ಕೆ ಇನ್ನಿಂಗ್ಸ್ ಅಂತ್ಯವಾಗಲೇಬೇಕು. 50 ಓವರ್ ಗಳು ಮುಗಿದಿಲ್ಲವಾದರೂ ತಂಡ ಇನ್ನಿಂಗ್ಸ್ ಮುಗಿಸಲೇಬೇಕು! ಎಂತಹ ವಿಚಿತ್ರ ನಿಯಮ!

ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿತ್ತು. ಆದರೆ 45 ಓವರ್ ಮುಗಿಯುತ್ತಿದ್ದಂತೆ ಚಾನೆಲ್ ನೀಡಿದ್ದ ಗಡುವು ಮುಗಿದಿತ್ತು. ಆರು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದ ಇಂಗ್ಲೆಂಡ್ ಅನಿವಾರ್ಯವಾಗಿ ಇನ್ನಿಂಗ್ಸ್ ಅಂತ್ಯ ಮಾಡಬೇಕಾಯಿತು.

ದಕ್ಷಿಣ ಆಫ್ರಿಕಾಗೆ 45 ಓವರ್ ನಲ್ಲಿ 253 ರನ್ ಗುರಿ ನೀಡಲಾಯಿತು. ಆದರೆ ಇಂಗ್ಲೆಂಡ್ ಬೌಲರ್ ಗಳ ಕರಾರುವಾಕ್ ದಾಳಿಗೆ ಆಫ್ರಿಕನ್ನರು ರನ್ ಗಳಿಸಲು ಪರದಾಡಿದರು. ಒಂದು ಹಂತದಲ್ಲಿ 130 ರನ್ ಗೆ ತಂಡ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ವೇಗವಾಗಿ ಬ್ಯಾಟ್ ಬೀಸಿದ ಜಾಂಟಿ ರೋಡ್ಸ್ 43 ರನ್ ಗಳಿಸಿದರು. ಕೊನೆಯಲ್ಲಿ ಮ್ಯಾಕ್ ಮಿಲನ್ ಮತ್ತು ರಿಚರ್ಡ್ಸನ್ 18 ಎಸೆತಗಳಲ್ಲಿ 25 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಗೆಲುವಿಗೆ 13 ಎಸೆತಗಳಲ್ಲಿ 22 ರನ್ ಅಗತ್ಯವಿತ್ತು. ಪಂದ್ಯ ರೋಮಾಂಚನಕಾರಿ ಸ್ಥಿತಿಯಲ್ಲಿತ್ತು. ಆದರೆ ದಕ್ಷಿಣ ಆಫ್ರಿಕಾದ ಅದೃಷ್ಟ ಕೈಕೊಟ್ಟಿತ್ತು, ಮಳೆ ಆರಂಭವಾಗಿತ್ತು..!

ಡಗೌಟ್ ನಲ್ಲಿದ್ದ ಆಟಗಾರರು ಮತ್ತೆ ಪಂದ್ಯ ಆರಂಭವಾಗಲು ಕಾಯುತ್ತಿದ್ದರು.  ಎರಡೂ ತಂಡಗಳ ಆಟಗಾರರಿಗೆ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದ ಅನುಭವ. ನಿಂತ ಸ್ಥಿತಿಯಿಂದಲೇ ಪಂದ್ಯ ಆರಂಭವಾಗಲಿ ಎಂದು ದಕ್ಷಿಣ ಆಫ್ರಿಕಾ ಆಟಗಾರರು, ಅಭಿಮಾನಿಗಳು ದೇವರಲ್ಲಿ ಬೇಡುತ್ತಿದ್ದರು. ಆದರೆ ಹಾಗಾಗಲಿಲ್ಲ, ಮಳೆ ನಿಯಮ ಅಳವಡಿಸಲಾಯಿತು. ಯಾಕೆಂದರೆ ಚಾನೆಲ್ ನೀಡಿದ್ದ ಸಮಯ ಮುಗಿಯುತ್ತಾ ಬಂದಿತ್ತು. ಅದರೊಳಗೆ ಪಂದ್ಯ ಮುಗಿಸಲೇಕಿತ್ತು!

ಮಳೆ ನಿಂತಿತು, ದ.ಆಫ್ರಿಕಾ 7 ಎಸೆತಗಳಲ್ಲಿ 22 ರನ್ ಗಳಿಸಬೇಕು ಎಂದು ಘೋಷಿಸಲಾಯಿತು. ಕಷ್ಟ ಆದರೆ ಅಸಾಧ್ಯವಲ್ಲ ಎಂಬ ಭಾವನೆಯಲ್ಲಿದ್ದ ಮ್ಯಾಕ್ ಮಿಲನ್ ಮತ್ತು ರಿಚರ್ಡ್ಸನ್ ಬ್ಯಾಟ್ ಹಿಡಿದು ಮೈದಾನಕ್ಕೆ ಆಗಮಿಸಿದರು. ಆದರೆ ಅಷ್ಟರಲ್ಲಿ ಮತ್ತೆ ದೊಡ್ಡ ಪರದೆಯಲ್ಲಿ ಬೇರೆಯದೇ ಟಾರ್ಗೆಟ್ ನೀಡಲಾಯಿತು. ಒಂದು ಎಸೆತದಲ್ಲಿ 22 ರನ್ ಗುರಿ. ಹೌದು,  ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ದ.ಆಫ್ರಿಕಾ ಬೌಲರ್ ಮೇರಿಕ್ ಪ್ರಿಂಗಲ್ ಮಾಡಿದ್ದ ಎರಡು ಮೇಡನ್ ಓವರ್ ಈಗ ಅವರ ತಂಡಕ್ಕೆ ತಿರುಗುಬಾಣವಾಯಿತು. ಮಳೆ ನಿಯಮ ಅಳವಡಿಸಲಾಗಿತ್ತು, ಕೇವಲ ಒಂದು ಎಸೆತದಲ್ಲಿ 22 ರನ್! ಇದು ಅಸಾಧ್ಯ.

ಅಭಿಮಾನಿಗಳು ನಿರಾಶರಾಗಿದ್ದರು. ದಕ್ಷಿಣ ಆಫ್ರಿಕಾ ಆಟಗಾರರಿಗೆ ನಿಂತ ನೆಲವೇ ಕುಸಿದ ಅನುಭವ. ನಿಯಮವನ್ನು ಮರುಪರಿಶೀಲಿಸಲು ಸ್ವತಃ ಇಂಗ್ಲೆಂಡ್ ನಾಯಕ ಗ್ರಹಾಂ ಗೂಚ್ ಮನವಿ ಮಾಡಿದರು. ಹಣದ ಹಿಂದೆ ಬಿದ್ದಿದ್ದ ಆಯೋಜಕರಿಗೆ, ಚಾನೆಲ್ ನವರಿಗೆ ನಿಜವಾದ ಕ್ರಿಕೆಟ್ ನ ಕೂಗು ಅರಣ್ಯ ರೋದನವಾಯಿತಷ್ಟೇ. ಅವರ ಹಠ ಬಿಡಲಿಲ್ಲ. ಕೊನೆಯ ಎಸೆತವನ್ನು ಆಡಿದ ಮ್ಯಾಕ್ ಮಿಲನ್ ಒಂಟಿ ರನ್ ತೆಗೆದರು. ಪಂದ್ಯ ಮುಕ್ತಾಯವಾಯಿತು. ಪಂದ್ಯ ಗೆದ್ದರೂ ಇಂಗ್ಲೆಂಡ್ ಆಟಗಾರರಿಗೆ ಸಂತಸವಿರಲಿಲ್ಲ. ಬೇಸರದಿಂದಲೇ ದಕ್ಷಿಣ ಆಫ್ರಿಕಾ ಆಟಗಾರರ ಕೈ ಕುಲುಕಿದರು. ವಿಚಿತ್ರ ಏನೆಂದರೆ ಚಾನೆಲ್ ನೀಡಿದ್ದ ಸಮಯದ ಗಡುವು ಮುಗಿಸಲು ಇನ್ನೂ ಎರಡು ನಿಮಿಷ ಬಾಕಿ ಇತ್ತು!

ಚಾನೆಲ್, ಆಯೋಜಕರ ದುರಾಸೆಗೆ ಅಂದು ದಕ್ಷಿಣ ಆಫ್ರಿಕಾ ಸೋಲನುಭವಿಸಿತ್ತು. ಅದರೊಂದಿಗೆ ಕ್ರಿಕೆಟ್ ಕೂಡಾ ತಲೆ ತಗ್ಗಿಸಿತ್ತು. ಅವಮಾನದಿಂದಲೇ ಕೂಟಕ್ಕೆ ಆಗಮಿಸಿದ್ದ ತಂಡ ಅವಮಾನದಿಂದಲೇ ಕೂಟ ಮುಗಿಸಿತ್ತು. ಮಳೆ ನಿಯಮ ಗೆದ್ದಿತ್ತು, ಆದರೆ ಕ್ರಿಕೆಟ್ ಸೋತಿತ್ತು..!

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.