ಶೂಟಿಂಗ್ಗೆ ಅನುಮತಿ ಕೋರಿ ಸಿಎಂಗೆ ಮನವಿ
Team Udayavani, May 4, 2020, 10:15 AM IST
ಕೋವಿಡ್ 19 ಹರಡುವಿಕೆಯಿಂದ ದೇಶವ್ಯಾಪಿ ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಎಲ್ಲಾ ಕ್ಷೇತ್ರವೂ ಸ್ಥಗಿತಗೊಂಡು ಎಲ್ಲರೂ ಹಲವು ಸಮಸ್ಯೆಗೆ ಸಿಲುಕಿದ್ದಾರೆ. ಇದಕ್ಕೆ ಸಿನಿಮಾ ರಂಗವೂ ಹೊರತಲ್ಲ. ಇದೀಗ ಲಾಕ್ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಹೀಗಾಗಿ ಚಿತ್ರೀಕರಣಕ್ಕೆ ಅನುಮತಿ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಲಾಕ್ಡೌನ್ನಿಂದ ಕಿರುತೆರೆ ಕೂಡ ಸಂಪೂರ್ಣ ನೆಲಕಚ್ಚಿದೆ. ಇದನ್ನೇ ನಂಬಿ ಬದುಕುತ್ತಿರುವವರ ಸಮಸ್ಯೆ ತೀರಾ ಹದಗೆಟ್ಟಿದೆ. ಕನ್ನಡದಲ್ಲಿ ಏನಿಲ್ಲವೆಂದರೂ, 120ಕ್ಕೂ ಹೆಚ್ಚು ಧಾರಾವಾಹಿಗಳು ಹಲವು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿದ್ದು, ಸುಮಾರು 20 ಸಾವಿರದಷ್ಟು ತಂತ್ರಜ್ಞರು, ಕಲಾವಿದರು ಹಾಗು ಇತರೆ ವಿಭಾಗದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶೂಟಿಂಗ್ ನಡೆಸಲು ಅನುಮತಿ ನೀಡಿದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಶೂಟಿಂಗ್ ನಡೆಸುತ್ತೇವೆ. ಚಿತ್ರೀಕರಣ ಜಾಗದಲ್ಲಿ 20ಕ್ಕು ಹೆಚ್ಚು ಮಂದಿ ಸೇರದಂತೆ ಎಚ್ಚರವಹಿಸುತ್ತೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.