ಕೋವಿಡ್ ನಿಂದ ಭಾವನನ್ನು ಕಳೆದು ಕೊಂಡ ಗಟ್ಟಿಮೇಳ ನಟ ಪವನ್ : ನೋವಿನಲ್ಲಿ ಹೇಳಿದ್ದೇನು ಗೊತ್ತಾ?
Team Udayavani, Apr 24, 2021, 3:53 PM IST
ಬೆಂಗಳೂರು : ಕೋವಿಡ್ ಸೋಂಕಿನಿಂದ ಧಾರಾವಾಹಿ ನಟ ಪವನ್ ಕುಮಾರ್ ಅವರ ಭಾವ ಮತ್ತು ಭಾವನ ತಂದೆ ಮೃತ ಪಟ್ಟಿದ್ದಾರೆ. ಕಳೆದ ಎರಡು ದಿನದಲ್ಲಿ ಸಂಬಧಿಕರನ್ನು ಕಳೆದುಕೊಂಡಿರುವ ಪವನ್ ನೋವಿನ ಮಾತುಗಳನ್ನಾಡಿ ವಿಡಿಯೋ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಅವರು, ಇದು ಮೊದಲು ಬಂದ ಕೋವಿಡ್ ಅಲೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಯಾರ ಮಾತನ್ನೂ ಕೇಳಬೇಡಿ.. ಹುಷಾರಾಗಿರಿ.. ಅಂತ ಜನರಲ್ಲಿ ಕೇಳಿಕೊಂಡಿದ್ದಾರೆ.
ಸೋಂಕಿನಿಂದ ಭಾವ ಹಾಗೂ ಭಾವನ ತಂದೆಯನ್ನ ಎರಡು ದಿನದಲ್ಲಿ ಕಳೆದುಕೊಂಡಿದ್ದಾರೆ. ಇನ್ನೂ ಮೂರು ಜನ ಕೋವಿಡ್ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಗೆ ಹೋದ್ರೆ ಅಲ್ಲಿ ಏನಾಗ್ತಿದೆ.? ಇಷ್ಟೊಂದೆಲ್ಲ ಜನರು ಸಾಯುತ್ತಿರುವುದು ನಿಜಾನಾ.. ? ಸ್ಮಶಾನದಲ್ಲಿ ಯಾಕೆ ಹೆಣಗಳನ್ನ ಸುಡಲು ಸರದಿ ನಿಲ್ಲಬೇಕು ಅನ್ನೋ ಬಗ್ಗೆ ಪವನ್ ಕುಮಾರ್ ವಿಡಿಯೋದಲ್ಲಿ ವಿವರಿಸಿದ್ದಾರೆ.
‘ನನ್ನ ಭಾವನನ್ನ ಕಳೆದುಕೊಂಡೆ, ಒಂದೇ ದಿನ ಕಣ್ಣಾರೆ 6 ಸಾವು ನೋಡಿದೆ. ದಯವಿಟ್ಟು ನಾನು ಹೇಳುತ್ತಿರುವುದನ್ನ ಅರ್ಥ ಮಾಡಿಕೊಳ್ಳಿ. ಹೋದ ವರ್ಷದ ರೀತಿ ಈ ವರ್ಷದ ಕೊರೊನಾ ಇಲ್ಲ, ತುಂಬ ಕೆಟ್ಟದಾಗಿದೆ. ವಾಸ್ತವ ಬೇರೆಯೇ ಇದೆ. ನಾನು ಹಾಗೂ ನನ್ನ ಕುಟುಂಬ ಇದಕ್ಕೆ ಸಾಕ್ಷಿ. ಎರಡು ದಿನದ ಗ್ಯಾಪ್ನಲ್ಲಿ ನನ್ನ ಭಾವ ಹಾಗೂ ನನ್ನ ಭಾವನ ತಂದೆಯನ್ನ ಕಳೆದುಕೊಂಡಿದ್ದೇನೆ. ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಅದರಿಂದ ಧೈರ್ಯ ಬರುತ್ತೆ ಅಂತ ಹೇಳ್ತಾರೆ, ಭಂಡ ಧೈರ್ಯ ಬರುತ್ತೆ. ಸರ್ಕಾರದವರು ಆರಾಮಾಗಿ ಓಡಾಡ್ತಾರೆ, ಇನ್ನೊಂದಿಷ್ಟು ಜನರು ಕೋವಿಡ್ ಅಂಟಿಸಿಕೊಳ್ಳುವುದಲ್ಲದೇ ಬೇರೆಯವರಿಗೂ ಅಂಟಿಸುತ್ತಾರೆ’ ಅಂತ ಪವನ್ ತಮ್ಮ ನೋವಿನ ನುಡಿಗಳನ್ನು ಆಡಿದ್ದಾರೆ.
View this post on Instagram