ಅವರನ್ನು ಹೀಗೆ ನೋಡೋದು ಬೇಡ ಅಂದುಕೊಂಡಿದ್ದೆ…
Team Udayavani, Nov 26, 2018, 11:40 AM IST
“ಅಂಬರೀಷ್ ಅವರ ನಿಧನ ನನ್ನನ್ನು ತುಂಬಾ ಕಾಡುತ್ತಿದೆ…’ ರವಿಚಂದ್ರನ್ ತುಂಬಾ ದುಃಖದಿಂದಲೇ ಈ ಮಾತನ್ನು ಹೊರಹಾಕಿದರು. ಅಷ್ಟೇ ಅಲ್ಲ, ನಾನು ಅವರನ್ನು ಕೊನೆಯ ಸಮಯದಲ್ಲಿ ನೋಡೋದು ಬೇಡ ಅಂದುಕೊಂಡಿದ್ದೆ. ಅವರು ನೋವಲ್ಲಿ ಇರುವುದನ್ನು ನಾನು ಯಾವತ್ತಿಗೂ ಕಂಡಿಲ್ಲ. ಅಂಬರೀಷ್ ರಾಜಕೀಯ ಪ್ರವೇಶಿಸಿದ ಮೇಲೆ ಸ್ವಲ್ಪ ದೂರ ಉಳಿದಿದ್ದೆ.
ಯಾಕಂದ್ರೆ, ನಾನು ಯಾವಗಲೂ ಸಿನಿಮಾ ಕೆಲಸದಲ್ಲಿರುತ್ತಿದ್ದೆ. ಆದರೂ, ಅಂಬರೀಷ್, ನಾನು ಎಲ್ಲೇ ಇರಲಿ, ಹುಡುಕಿ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರು. ಈಗ ಅಂಬಿ ನೆನಪು ಮಾತ್ರ. ನನ್ನ ಪ್ರತಿ ಹುಟ್ಟುಹಬ್ಬದ ಸಮಯದಲ್ಲಿ ಅವರು ನೆನಪಾಗುತ್ತಾರೆ. ಅದರೂ, ಅಂಬರೀಷ್ ಅವರು ನನ್ನೊಳಗೆ ಜೀವಂತವಾಗಿದ್ದಾರೆ. ಇಂದು ಬರೋದಾ ಬೇಡವಾ ಎಂಬ ವಿಷಯ ಕಾಡುತ್ತಿತ್ತು.
ಅಂಬರೀಷ್ ನನ್ನೊಳಗೆ ಜೀವಂತವಾಗಿದ್ದಾನೆ. ಹಾಗಾಗಿ ಕೊನೆ ಘಳಿಗೆಯಲ್ಲಿ ಇಲ್ಲಿಗೆ ಬಂದು ನೋಡ್ಬೇಕಾ ಬೇಡವಾ, ಅವನು ನನ್ನೊಳಗೆ ಜೀವಂತವಾಗಿರಲಿ ಎಂದು ಅಂದುಕೊಂಡಿದ್ದೆ. ಆದರೆ ಮನಸ್ಸು ಕೇಳಲಿಲ್ಲ. ಕೊನೆಯ ಸಲ ನೋಡೋಣ ಅಂತ ಬಂದೆ’ ಎಂದು ರವಿಚಂದ್ರನ್ ಗೆಳೆಯ ಅಂಬರೀಷ್ ಕುರಿತು ಹೇಳಿಕೊಂಡರು.