ಮನರೂಪ ಅಖಾಡಕ್ಕಿಳಿದ ಅಗ್ನಿಸಾಕ್ಷಿ ರಾಧಿಕಾ!
Team Udayavani, Nov 19, 2019, 8:00 AM IST
ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಮನರೂಪ ಇದೇ ತಿಂಗಳ 22ರಂದು ತೆರೆಗಾಣಲಿದೆ. ಅಪರೂಪದ್ದೊಂದು ಕಥೆಯೊಂದಿಗೆ, ದಟ್ಟ ಕಾಡಲ್ಲಿ ಎದುರಾಗೋ ಸೂಕ್ಷ್ಮ ಕದಲಿಕೆಯ ಜೊತೆಗೆ ತೆರೆದುಕೊಳ್ಳುವ ಮನೋಲೋಕದ ಮಜಲುಗಳನ್ನು ಒಳಗೊಂಡಿರುವ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಇದು ಭಿನ್ನ ಜಾಡಿನ ಪ್ರಯೋಗಾತ್ಮಕ ಚಿತ್ರವೆಂಬ ಸುಳಿವು ಸಿಕ್ಕಿತ್ತು. ಆ ನಂತರ ಹಂತ ಹಂತವಾಗಿ ಬಯಲಾಗುತ್ತಾ ಬಂದಿದ್ದ ಕೆಲ ವಿಚಾರಗಳು ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾದ ಟ್ರೇಲರ್ನೊಂದಿಗೆ ಮನರೂಪ ಭರ್ಜರಿಯಾಗಿಯೇ ಸೌಂಡು ಮಾಡಲಾರಂಭಿಸಿದೆ.
ಈ ಸಿನಿಮಾದಲ್ಲಿ ಥರ ಥರದ ಪಾತ್ರಗಳಿವೆ. ನಮ್ಮದೇ ಭಾವಗಳ ಪಾತ್ರಗಳಾ ತರೆ ಮೇಲೆ ಮೂಡಿ ಬರುತ್ತಿವೆಯೇನೋ ಎಂಬ ಫೀಲ್ ಹುಟ್ಟುವಂಥಾ ತಾಜಾತನ ಹೊದ್ದ ಈ ಪಾತ್ರಗಳಲ್ಲಿ ರಂಗಭೂಮಿಯೂ ಸೇರಿದಂತೆ ನಟನೆಯಲ್ಲಿ ಪಳಗಿಕೊಂಡಿರುವ ಕಲಾವಿದರೇ ನಟಿಸಿದ್ದಾರೆ. ಕಿರುತೆರಲ್ಲಿ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ಅಗ್ನಿಸಾಕ್ಷಿ ಧಾರಾವಾಹಿಯ ರಾಧಿಕಾ ಎಂಬ ಪಾತ್ರದಿಂದ ಮನೆ ಮಾತಾಗಿರುವ ಅನುಷಾ ರಾವ್ ಕೂಡಾ ಈ ಚಿತ್ರದ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಿರಣ್ ಹೆಗ್ಡೆ ಈ ಕಥೆ ಹೇಳಿದಾಗಲೇ ಅದರ ತಾಜಾತನ, ಹೊಸತನ ಅವರಿಗೆ ಇಷ್ಟವಾಗಿತ್ತಂತೆ. ಇನ್ನುಳಿದಂತೆ ನಿರ್ದೇಶಕರ ಸಿನಿಮಾ ಪ್ರೇಮವನ್ನೂ ಮೆಚ್ಚಿಕೊಂಡ ಅವರು ನಟಿಸಲು ಒಪ್ಪಿಕೊಂಡಿದ್ದರಂತೆ. ಅವರ ಪಾತ್ರ ಏನೆಂಬುದರ ಬಗ್ಗೆ ಚಿತ್ರತಂಡ ಈವರೆಗೂ ಯಾವ ಮಾಹಿತಿಯನ್ನೂ ಕೂಡಾ ಬಿಟ್ಟು ಕೊಟ್ಟಿಲ್ಲ. ಆದರೆ ಅದು ಎಲ್ಲರನ್ನೂ ಆವರಿಸಿಕೊಳ್ಳುವಂತಿದೆ ಎಂಬ ಭರವಸೆ ಖುದ್ದು ಅನುಷಾ ಅವರಲ್ಲಿದೆ. ಇದೊಂದು ಹೊಸಾ ಬಗೆಯ ಚಿತ್ರವಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಚಿತ್ರ ಎಂಬುದು ಅನುಷಾ ಅಭಿಮತ. ಧಾರಾವಾಹಿ ಜಗತ್ತಲ್ಲಿ ದೊಡ್ಡ ಹೆಸರು ಮಾಡಿರುವ ಅನುಷಾ ರಾವ್ ಪಾಲಿಗೆ ಹಿರಿತೆರೆಯಲ್ಲಿಯೂ ಈ ಸಿನಿಮಾ ಪಾತ್ರ ಅಂಥಾದ್ದೇ ಬ್ರೇಕ್ ನೀಡೋ ಲಕ್ಷಣಗಳಿವೆ.