ಕನ್ನಡಿಗರ ಮರಾಠಿ ಚಿತ್ರ
Team Udayavani, Apr 3, 2018, 11:42 AM IST
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕನ್ನಡ ಮಾತ್ರವಲ್ಲ, ಈಗಾಗಲೇ ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಮರಾಠಿ ಭಾಷೆಯಲ್ಲೂ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೌದು, ಆ ಚಿತ್ರಕ್ಕೀಗ ಸೋಮವಾರ ಚಾಲನೆಯೂ ಸಿಕ್ಕಿದೆ. ವಿಶೇಷವೆಂದರೆ, ಮರಾಠಿ ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಕನ್ನಡಿಗರೇ ಕೆಲಸ ಮಾಡುತ್ತಿದ್ದಾರೆ.
ರಾಕ್ಲೈನ್ ವೆಂಕಟೇಶ್ ಮತ್ತು ಸಚಿನ್ ಈ ಚಿತ್ರ ನಿರ್ಮಾಣ ಮಾಡಿದರೆ. ಚಿತ್ರವನ್ನು ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡಿಗರಾಗಿರುವ ದಿಲೀಪ್, ಹಲವು ಜಾಹಿರಾತು ಸಿನಿಮಾ ನಿರ್ದೇಶಿಸಿದ್ದಾರೆ. ಮಲಯಾಳಂ ಚಿತ್ರವೊಂದಕ್ಕೂ ಆ್ಯಕ್ಷನ್-ಕಟ್ ಹೇಳಿದ್ದು, ಇದೀಗ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಮರಾಠಿ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಆ ಚಿತ್ರಕ್ಕೆ “ತೂ ಪಿ ಆಣಿತೀಸ್ರ’ (ನಾನು ನೀನು ಮತ್ತೂಬ್ಬ) ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ಮರಾಠಿ ಚಿತ್ರರಂಗದ “ದುನಿಯಾ ದರಿ’, “ಮುಂಬೈ ಪುಣೆ ಮುಂಬೈ’ ಖ್ಯಾತಿಯ ಸೊಪ್ನಿಲ್ ಜೋಶಿ ನಾಯಕ. ಅವರಿಗೆ ಋತುಜಾ ಶಿಂಧೆ ನಾಯಕಿಯಾಗಿದ್ದಾರೆ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ.
ಪ್ರೀತಿ ಗೀತಿ ಇತ್ಯಾದಿ ಅಂಶಗಳನ್ನೊಳಗೊಂಡಿರುವ ಒಂದು ಯಂಗ್ ಕಪಲ್ ಹಿನ್ನೆಲೆಯಲ್ಲಿ ಸಾಗುವ ಚಿತ್ರವಿದು. ಚಿತ್ರಕ್ಕೆ ಅಶೋಕ್ ಕಶ್ಯಪ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದಲೂ ನಿರ್ದೇಶಕ ದಿಲೀಪ್ ಅವರೊಂದಿಗಿನ ಗೆಳೆತನ ಈ ಚಿತ್ರಕ್ಕೆ ಕೆಲಸ ಮಾಡುವಂತಾಗಿದೆ ಎಂಬುದು ಅಶೋಕ್ ಕಶ್ಯಪ್ ಮಾತು.