ಸಿಂಗಲ್ ಸ್ಕ್ರೀನ್ನಲ್ಲಿ ಪ್ರದರ್ಶನ ಪ್ರಾರಂಭ
ಕೋವಿಡ್ ನಡುವೆಯೂ ಆಶಾಕಿರಣ , ನಿಧಾನವಾಗಿ ಚಿತ್ರಮಂದಿರಗಳತ್ತ ಪ್ರೇಕ್ಷಕ
Team Udayavani, Oct 17, 2020, 12:19 PM IST
ಬೆಂಗಳೂರು: ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಮತ್ತೆ ಬಾಗಿಲು ತೆರೆದಿದ್ದು, ಶುಕ್ರವಾರದಿಂದ ರಾಜ್ಯದ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾಗಳ ಪ್ರದರ್ಶನ ಆರಂಭವಾಗಿದೆ.
ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಇಟ್ಟುಕೊಂಡು ಥಿಯೇಟರ್ಗಳು ಓಪನ್ ಆಗಿದ್ದು, ಕೋವಿಡ್ ಭಯ- ಆತಂಕದ ನಡುವೆಯೇ ಪ್ರೇಕ್ಷಕರು ನಿಧಾನವಾಗಿ ಥಿಯೇಟರ್ಗಳ ಮುಖ ಮಾಡುತ್ತಿದ್ದಾರೆ.
ರೀರಿಲೀಸ್ ಸಿನಿಮಾವಾದರೂ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕೆಂದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸಿದ್ದಾರೆ. ಶಿವಾರ್ಜುನ, ಲವ್ ಮಾಕ್ಟೇಲ್, “ಥರ್ಡ್ ಕ್ಲಾಸ್’, “5 ಅಡಿ 7 ಅಂಗುಲ’, ಮಾಯ ಬಜಾರ್, ಕಾಣದಂತೆ ಮಾಯವಾದನು, ಶಿವಾಜಿ ಸುರತ್ಕಲ್ ಚಿತ್ರಗಳುಈವಾರ ಮರುಬಿಡುಗಡೆಯಾಗಿವೆ. ಇನ್ನು ಅನೇಕ ಚಿತ್ರಮಂದಿರಗಳು ಟಿಕೆಟ್ ಬೆಲೆಯಲ್ಲಿ ಕೊಂಚ ಕಡಿತಗೊಳಿಸಿ, ಪ್ರೇಕ್ಷಕರನ್ನು ಸೆಳೆಯುತ್ತಿವೆ. ಗಾಂಧಿನಗರದ 3
ಚಿತ್ರಮಂದಿರಗಳಲ್ಲಿ ಪ್ರದರ್ಶನ: ಗಾಂಧಿನಗರದಲ್ಲಿರುವ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಪೈಕಿ ಕೇವಲ ಸಂತೋಷ್, ತ್ರಿವೇಣಿ, ಭೂಮಿಕಾ ಚಿತ್ರಮಂದಿರಗಳಲ್ಲಿ ಮಾತ್ರ ರೀ-ರಿಲೀಸ್ ಆದ ಸಿನಿಮಾಗಳು ಪ್ರದರ್ಶನಗೊಂಡವು.ಸಂತೋಷ್ಚಿತ್ರಮಂದಿರದಲ್ಲಿ “ಶಿವಾರ್ಜುನ’ ಚಿತ್ರದ ಮಾರ್ನಿಂಗ್ ಶೋಗೆ 120ಕ್ಕೂ ಹೆಚ್ಚು ಮತ್ತು ಮಧ್ಯಾಹ್ನದ ಶೋಗೆ 140ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಾಗಿದ್ದರು. ಇನ್ನು ತ್ರಿವೇಣಿ ಚಿತ್ರಮಂದಿರದಲ್ಲಿ “ಐದು ಅಡಿ ಏಳು ಅಂಗುಲ’ ಚಿತ್ರಪ್ರದರ್ಶನವಾಗುತ್ತಿದ್ದು, ಮಾರ್ನಿಂಗ್ ಶೋನಲ್ಲಿ ಸುಮಾರು 80 ಮತ್ತು ಮಧ್ಯಾಹ್ನದ ಶೋಗೆ 95 ಪ್ರೇಕ್ಷಕರು ಹಾಜರಾಗಿದ್ದರು. ಉಳಿದಂತೆ “ಥರ್ಡ್ ಕ್ಲಾಸ್’ ಚಿತ್ರ ಪ್ರದರ್ಶನವಾಗುತ್ತಿರುವ ಭೂಮಿಕಾ ಚಿತ್ರಮಂದಿರದಲ್ಲಿ ಕೂಡ ಮಾರ್ನಿಂಗ್ ಶೋಗೆ ಸುಮಾರು 100 ಮತ್ತು ಮಧ್ಯಾಹ್ನ ಶೋಗೆ 90 ಪ್ರೇಕ್ಷಕರಿದ್ದರು.
4200ಕ್ಕೂ ಹೆಚ್ಚು ಪ್ರೇಕ್ಷಕರಿಂದ ವೀಕ್ಷಣೆ:
ರಾಜ್ಯಾದ್ಯಂತ ಅ. 15ರಂದು ಐನಾಕ್ಸ್, ಪಿವಿಆರ್, ಸಿನಿಪೋಲ್, ಸತ್ಯಂ ಸಿನಿಮಾಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳು ಆರಂಭವಾಗಿದ್ದರೂ, ಬೆಂಗಳೂರನ್ನು ಹೊರತುಪಡಿಸಿ ಉಳಿದೆಡೆ ಅಷ್ಟಾಗಿ ಪ್ರೇಕಕರು ಮಲ್ಟಿಪ್ಲೆಕ್ಸ್ನತ್ತ ಮುಖ ಮಾಡಲಿಲ್ಲ. ಶುಕ್ರವಾರ ಬೆಂಗಳೂರಿನಲ್ಲಿ 150 ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳುಹಾಗೂ 14 ಸಿಂಗಲ್ ಸ್ಕ್ರೀನ್ಗಳಲ್ಲಿ ಸಿನಿಮಾಗಳು ಪ್ರದರ್ಶನವಾದವು. ಒಟ್ಟು ಶುಕ್ರವಾರ ರೀ-ರಿಲೀಸ್ ಆದ ಸಿನಿಮಾಗಳು ಸುಮಾರು 220ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ರಾಜ್ಯಾದ್ಯಂತ ಸರಿ ಸುಮಾರು 4200 ಮಂದಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. ಅಲ್ಲದೆ ಉತ್ತಮ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.
ಮಗನ ಚಿತ್ರ ನೋಡಿ ಚಿರಂಜೀವಿ ಸರ್ಜಾ ತಾಯಿ ಕಣ್ಣೀರು: ಈ ವಾರ ರೀ-ರಿಲೀಸ್ ಆದ ಸಿನಿಮಾಗಳ ಪೈಕಿ “ಶಿವಾರ್ಜುನ’ನಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿರು ನಿಧನದ ಬಳಿಕ “ಶಿವಾರ್ಜುನ’ ಸಿನಿಮಾ ರೀ-ರಿಲೀಸ್ ಆಗಿದ್ದು, ಕೆ.ಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ ಸೇರಿದಂತೆ ಕುಟುಂಬದವರು ಚಿತ್ರ ವೀಕ್ಷಿಸಿದರು.ಈವೇಳೆ ತೆರೆಮೇಲೆ ಮಗನನ್ನು ಕಂಡ ತಾಯಿ ಅಮ್ಮಾಜಿ ಕಣ್ಣೀರಿಟ್ಟರು.
ಮೊದಲ ಹಂತವಾಗಿ ಈ ವಾರ ಬೆಂಗಳೂರಿನಲ್ಲಿರುವ ಪಿವಿಆರ್ ಗಳಲ್ಲಿ ಮಾತ್ರ ಸ್ಕ್ರೀನಿಂಗ್ ಶುರುವಾಗಿದೆ. ಆಡಿಯನ್ಸ್ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ಇನ್ನೊಂದು ವಾರದ ಬಳಿಕ ರಾಜ್ಯದ ಉಳಿದ ಸೆಂಟರ್ಗಳಲ್ಲಿ ಸ್ಕ್ರೀನಿಂಗ್ ಶುರುವಾಗಲಿದೆ. ಸದ್ಯ 99 ರೂ. 149 ರೂ. ಮತ್ತು 199 ರೂ. ದರವನ್ನು ಇಟ್ಟುಕೊಂಡು ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. – ಜ್ಯೋತಿ ಕುಮಾರ್, ಪಿವಿಆರ್ ಪ್ರೋಗ್ರಾಮಿಂಗ್ ಮ್ಯಾನೇಜರ್
ರಾಜ್ಯದಲ್ಲಿ ಮೊದಲ ದಿನವೇ 25ಕ್ಕೂ ಹೆಚ್ಚು ಪ್ರದರ್ಶನಗಳು ಆಗಿದೆ. ಬೆಂಗಳೂರಿನ ಭೂಮಿಕಾ ಥಿಯೇಟರ್ನಲ್ಲಿ ಮಾರ್ನಿಂಗ್ಶೋನಲ್ಲಿ ಸುಮಾರು 130 ಜನ ಸಿನಿಮಾ ನೋಡಿದ್ದಾರೆ. ಬಿಡುಗಡೆಯಾದ ಬಹುತೇಕಕಡೆಗಳಲ್ಲಿ ನಿಧಾನವಾಗಿಆಡಿಯನ್ಸ್ ಬಂದು ಸಿನಿಮಾ ನೋಡ್ತಿದ್ದಾರೆ. ಈ ವಾರಾಂತ್ಯಕ್ಕೆ ಆಡಿಯನ್ಸ್ ಸಂಖ್ಯೆ ಹೆಚ್ಚಾಗಬಹುದು. –ಜಗದೀಶ್, “ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ, ನಿರ್ಮಾಪಕ