ಗಾಂಧಿನಗರಕ್ಕೆ ನಿಧಿ
Team Udayavani, Dec 19, 2018, 11:43 AM IST
ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕ ನಟ, ನಟಿಯರ ಮಕ್ಕಳು ಎಂಟ್ರಿಯಾಗಿದ್ದಾರೆ. ಆ ಸಾಲಿಗೆ ಇದೀಗ ಮತ್ತೂಬ್ಬ ನಟಿಯೊಬ್ಬರ ಪುತ್ರಿಯ ಆಗಮನವಾಗುವ ಸುದ್ದಿ ಹೊರಬಿದ್ದಿದೆ. ಹೌದು, ಸುಧಾರಾಣಿ ಪುತ್ರಿ ನಿಧಿ ಗಾಂಧಿನಗರಕ್ಕೆ ಕಾಲಿಡುವ ಸೂಚನೆ ಸಿಕ್ಕಿದೆ. ಅಷ್ಟಾಗಿಯೂ ಸುಧಾರಾಣಿ ಪುತ್ರಿ ನಿಧಿ ಯಾವ ಸಿನಿಮಾ ಮೂಲಕ ಕಾಲಿಡುತ್ತಿದ್ದಾರೆ ಎಂಬ ಪ್ರಶ್ನೆಗೆ ನಿರ್ದೇಶಕ ಪ್ರೇಮ್ ಉತ್ತರವಾಗುತ್ತಾರೆ.
ಹೌದು, ಪ್ರೇಮ್ ಇದೀಗ ತಮ್ಮ ಪತ್ನಿ ರಕ್ಷಿತಾ ಅವರ ಸಹೋದರ ಅಭಿಷೇಕ್ಗೊಂದು ಚಿತ್ರ ಮಾಡಲು ಅಣಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಅಭಿಷೇಕ್ಗೆ ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸುವ ಯೋಚನೆ ಅವರಿಗಿದೆ. ಇನ್ನು, ಈ ಬಾರಿ ಹೊಸಬರನ್ನೇ ಇಟ್ಟುಕೊಂಡು ಹೊಸತನದ ಸಿನಿಮಾ ಮಾಡೋಕೆ ಪ್ರೇಮ್ ಸಿಕ್ಕಾಪಟ್ಟೆ ಪ್ಲಾನ್ ಮಾಡಿದ್ದಾರೆ.
ಹಾಗಾಗಿ ಅಭಿಷೇಕ್ಗೆ ಜೋಡಿಯಾಗಿ ಸುಧಾರಾಣಿ ಅವರ ಪುತ್ರಿ ನಿಧಿ ಅವರನ್ನು ಮಾಡುವ ಯೋಚನೆ ಕೂಡ ಅವರಿಗಿದೆ ಎನ್ನುವ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಅಂದಹಾಗೆ, ಈಗಾಗಲೇ ಸುಧಾರಾಣಿ ಅವರ ಪುತ್ರಿ ನಿಧಿಯನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಅಂತ ಸಾಕಷ್ಟು ನಿರ್ದೇಶಕ, ನಿರ್ಮಾಪಕರು ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಪ್ರೇಮ್ ಸುಧಾರಾಣಿ ಪುತ್ರಿಯನ್ನು ನಾಯಕಿಯನ್ನಾಗಿಸುತ್ತಾರೆ ಎಂಬ ಸುದ್ದಿಯದ್ದೇ ಕಾರುಬಾರು.
ಅದೇನೆ ಇರಲಿ, ಪ್ರೇಮ್ ಸದ್ಯಕ್ಕೆ ಹೊಸಬರ ಚಿತ್ರ ಮಾಡುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇನ್ನು, ರಘು ಹಾಸನ್ ನಿರ್ದೇಶನ ಮಾಡುತ್ತಿರುವ ‘ಗಾಂಧಿಗಿರಿ’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ ಬಳಿಕ ತಮ್ಮ ಹೊಸ ಚಿತ್ರಕ್ಕೆ ಕೈ ಹಾಕುವ ಬಗ್ಗೆ ಯೋಚಿಸಿದ್ದಾರೆ. ಎಲ್ಲಾ ಸರಿ, ಪ್ರೇಮ್ ಹೊಸಬರಿಗೆ ಯಾವ ಕಥೆ ಹೆಣೆದಿರಬಹುದು? ಅದರಲ್ಲೂ ರಕ್ಷಿತಾ ಸಹೋದರ ಅಭಿಷೇಕ್ ಅವರನ್ನು ನಾಯಕರನ್ನಾಗಿ ಪರಿಚಯಿಸುತ್ತಿದ್ದು, ಸುಧಾರಾಣಿ ಪುತ್ರಿಯನ್ನೂ ಪರಿಚಯ ಮಾಡಲು ಹೊರಟಿದ್ದಾರೆ ಅಂದಮೇಲೆ, ಕಥೆಯಲ್ಲೇನೋ ಹೊಸತನ ಇರಲೇಬೇಕು ಎಂಬ ಲೆಕ್ಕಾಚಾರ ಈಗಾಗಲೇ ಗಾಂಧಿನಗರದಲ್ಲಿ ಜೋರಾಗಿದೆ.