ಭಾರತೀಯ ಸಂಸ್ಕೃತಿ ಮೆಲೊಂದು ಚಿತ್ರಣ!
Team Udayavani, Sep 28, 2022, 7:37 PM IST
ಭಾರತೀಯ ಸಂಸ್ಕೃತಿ, ಆಚರಣೆ, ಆಚಾರ-ವಿಚಾರ ಎಲ್ಲದಕ್ಕೂ ತನ್ನದೇ ಆದ ಮಹತ್ವವಿದೆ. ಭಾರತ ದೇಶದ ಸಂಸ್ಕೃತಿ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಈಗ ಇದೇ ವಿಷಯವನ್ನು ಇಲ್ಲೊಂದು ಚಿತ್ರತಂಡ ಸಿನಿಮಾ ರೂಪದಲ್ಲಿ ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಸಂಸ್ಕಾರ ಭಾರತ’.
“ಅನಾಮಿಕ ಮತ್ತು ಇತರೆ ಕಥೆಗಳು’ ಎನ್ನುವ ಕಥಾ ಸಂಕಲನದಿಂದ ಆಯ್ದಕೊಂಡ “ಅನಾಮಿಕ’ ಕಥೆಯೊಂದು “ಸಂಸ್ಕಾರ ಭಾರತ’ ಸಿನಿಮಾದಲ್ಲಿ ದೃಶ್ಯ ರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ “ಸಂಸ್ಕಾರ ಭಾರತ’ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ಕರ್ನಾಟಕ ಪ್ರಸ್ ಕ್ಲಬ್ ಕೌನ್ಸಿಲ್ನ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಾಗರನವಿಲೆ, “ಸಂಸ್ಕಾರ ಭಾರತ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. “ಗ್ಲೋಬಲ್ ಮ್ಯಾನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಡಾ. ವಿ. ನಾಗರಾಜ್ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಸಂಸ್ಕಾರ ಭಾರತ’ ಸಿನಿಮಾಕ್ಕೆ ನಾಗೇಶ್ ಎನ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಸಿನಿಮಾದ ನಾಯಕ ಅಪ್ಪಟ ಭಾರತೀಯ ಸಂಪ್ರದಾಯದ ಬಗ್ಗೆ ಅಭಿಮಾನವಿರುವ ಯುವಕ. ವೈಚಾರಿಕತೆ ಹಾಗೂ ಅದರ ಹಿಂದಿರುವ ವೈಜ್ಞಾನಿಕತೆಯ ಕುರಿತಾಗಿ ಸಂಶೋಧನೆ ನಡೆಸಲು ಅನಾಮಿಕ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದ, ಪಂಡಿತರೊಬ್ಬರನ್ನು ಅರಸಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಹುಡುಕಾಡುವಾಗ, ಅವನಿಗೆ ಕಾಡುವ ಅನೇಕ ಜೀವಂತ ಸಮಸ್ಯೆಗಳು ಸನ್ನಿವೇಶಗಳ ರೂಪದಲ್ಲಿ ಎದುರಾಗುತ್ತದೆ. ಮುಂದೆ ಅದನ್ನು ಆತ ಹೇಗೆ ಎದುರಿಸುತ್ತಾನೆ, ಅನಾಮಿಕನನ್ನು ಯಾವ ರೀತಿ ಕಂಡು ಹಿಡಿಯುತ್ತಾನೆ? ಆ ಮೂಲಕ ಸಂಶೋಧನೆ ನಡೆಸಿ ನಮ್ಮ ಸಂಸðತಿಯನ್ನು ಹೇಗೆ ಎತ್ತಿ ಹಿಡಿಯುತ್ತಾನೆ ಎಂಬುದು ಸಿನಿಮಾದ ಕಥೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿತು.
“ಸಂಸ್ಕಾರ ಭಾರತ’ ಸಿನಿಮಾದಲ್ಲಿ ಸ್ವದೇಶವನ್ನು ಇಷ್ಟ ಪಡುವ ಹುಡುಗನಾಗಿ ನಾಯಕನ ಪಾತ್ರದಲ್ಲಿ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ವಿದೇಶದ ಬಗ್ಗೆ ವ್ಯಾಮೋಹ ಹೊಂದಿರುವ ಹುಡುಗಿಯಾಗಿ ಅರ್ಚನಾ ನಾಯಕಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ಎಂ. ಡಿ. ಕೌಶಿಕ್, ಎಂ. ಕೆ. ಮಠ, ಗಿರೀಶ್ ಬೈಂದೂರು, ನಾಗರಾಜ್ ವಿ., ಪೂರ್ಣಿಮಾ, ರಾಧಿಕಾ, ಅನಿಲ್, ಹಮ್ಜಾ, ಬೇಬಿ ಫಾತಿಮಾ, ಮಾ. ಫಹದ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಪ್ರಸ್ತುತ ಚರ್ಚೆಯಲ್ಲಿರುವ ಹತ್ತಾರು ಸಾಮಾಜಿಕ ವಿಷಯಗಳು ಈ ಸಿನಿಮಾದಲ್ಲಿದ್ದು, ನೈಜತೆಗೆ ಹತ್ತಿರವಿರುವಂತೆ ಸಿನಿಮಾ ತೆರೆಮೇಲೆ ಬರಲಿದೆ’ ಎಂಬುದು ಚಿತ್ರತಂಡದ ಮಾತು. “ಸಂಸ್ಕಾರ ಭಾರತ’ ಸಿನಿಮಾದ ಹಾಡುಗಳಿಗೆ ರಾಜ್ ಭಾಸ್ಕರ್ ಸಂಗೀತ ಸಂಯೋಜಿಸುತ್ತಿದ್ದು, ಹಿರಿಯ ಸಾಹಿತಿ ಡಾ. ದೊಡ್ಡೆರಂಗೇಗೌಡ ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದಾರೆ. ಚಿತ್ರಕ್ಕೆ ಪಿ. ವಿ. ಆರ್. ಸ್ವಾಮಿ ಛಾಯಾಗ್ರಹಣ, ನಾಗೇಶ್ ನಾರಾಯಣ್ ಸಂಕಲನವಿದೆ.
ಕುಂದಾಪುರ, ಬೆಂಗಳೂರು ಸುತ್ತಮುತ್ತ ಸುಮಾರು 25 ದಿನಗಳ ಕಾಲ ಮೂರು ಹಂತಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ