ಶಿವರಾಜಕುಮಾರ್ ಈಗ ದ್ರೋಣ
Team Udayavani, Jun 11, 2018, 2:11 PM IST
ಶಿವರಾಜಕುಮಾರ್ “ಹರಿಹರ’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ಆ ಟೈಟಲ್ ಅನೌನ್ಸ್ ಆದ ಕೆಲ ದಿನಗಳ ನಂತರ “ಹರಿಹರ’ ಶೀರ್ಷಿಕೆ ಬದಲಾಗುವುದು ಎಂದು ನಿರ್ದೇಶಕ ಪ್ರಮೋದ್ ಚಕ್ರವರ್ತಿ ಹೇಳಿಕೊಂಡಿದ್ದರು. ಹಾಗಾದರೆ ಶಿವಣ್ಣ ಚಿತ್ರದ ಟೈಟಲ್ ಏನಿರಬಹುದೆಂಬ ಕುತೂಹಲ ಅನೇಕರಿಗಿತ್ತು. ಈಗ ಟೈಟಲ್ ಅಂತಿಮವಾಗಿದ್ದು, “ದ್ರೋಣ’ ಎಂದು ಟೈಟಲ್ ಇಡಲಾಗಿದೆ.
ಈ ಮೂಲಕ ಶಿವಣ್ಣ “ದ್ರೋಣ’ ಆಗಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ. ರಿವೇಂಜ್, ಸೆಂಟಿಮೆಂಟ್, ಕಾಮಿಡಿ ಜೊತೆಗೆ ಮನರಂಜನೆಯೇ ಮುಖ್ಯ ಉದ್ದೇಶ ಇಲ್ಲಿರಲಿದೆ. ಶಿವಣ್ಣ ಇಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜೂನ್ 22 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಚಿತ್ರದ ಫೋಟೋಶೂಟ್ ಕೂಡಾ ನಡೆದಿದ್ದು, ಶಿವಣ್ಣ ಕ್ಲಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೊಡು, ಆನಂದ್ ಮುಂತಾದವರಿದ್ದಾರೆ. ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣ, ರಾವ್ ಕ್ರಿಶ್ ಸಂಕಲನವಿದೆ. ಈ ಚಿತ್ರ ಡಾಲ್ಫಿನ್ ಮೀಡಿಯಾ ಹೌಸ್ನಡಿ ನಿರ್ಮಾಣವಾಗುತ್ತಿದೆ.
ಸದ್ಯ ಶಿವರಾಜಕುಮಾರ್ “ದಿ ವಿಲನ್’ ಹಾಗೂ “ಕವಚ’ ಚಿತ್ರೀಕರಣ ಮುಗಿದಿದ್ದು, “ದ್ರೋಣ’ ಆರಂಭವಾಗುತ್ತಿದೆ.