ಪ್ರೀತಿ ಪಾತ್ರರಿಗೆ ನೀವು ಮುಖ್ಯ, ಹುಷಾರಾಗಿರಿ..: ಶಿವರಾಜ್ ಕುಮಾರ್
Team Udayavani, May 21, 2021, 10:00 AM IST
“ಒಳ್ಳೆಯ ಗುಣಮಟ್ಟದ ರುಚಿಕರವಾದಊಟ ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ, ಇಸ್ಕಾನ್ಊಟ ನೀಡುತ್ತಿದ್ದೇವೆ…’ – ಶಿವರಾಜ್ಕುಮಾರ್ ಹೀಗೆ ಹೇಳಿದ್ದು, “ಆಸರೆ’ ಮೂಲಕ ನೀಡುತ್ತಿರುವ ಊಟದ ಬಗ್ಗೆ.
ಬೆಂಗಳೂರಿನ ನಾಗವಾರ ಪ್ರದೇಶದ ಸುತ್ತಮುತ್ತದಲ್ಲಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ ಕುಮಾರ್ ಹಾಗೂ ಶಿವರಾಜ ಕುಮಾರ್ ಅಭಿಮಾನಿಗಳು ಸೇರಿಕೊಂಡು “ಆಸರೆ’ ಎಂಬ ಹೆಸರಿನಲ್ಲಿ ಸಹಾಯ ಮಾಡುತ್ತಿದ್ದಾರೆ.
ನಾಗವಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿನಿತ್ಯ 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ವಿಶೇಷ ವಾಹನ ವ್ಯವಸ್ಥೆಯನ್ನುಕೂಡ ಮಾಡಲಾಗಿದ್ದು, ಈ ವಾಹನದ ಮೂಲಕ ಅಗತ್ಯ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. “ಆಸರೆ.. ಹಸಿದ ಹೊಟ್ಟೆಗೆಕೈ ತುತ್ತು’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಸಾಮಾಜಿಕ ಕಾರ್ಯವನ್ನು ಇದೇ ತಿಂಗಳ ಕೊನೆಯವರೆಗೂ ನೀಡುವ ಉದ್ದೇಶವಿದೆ.
ಈ ಬಗ್ಗೆ ಮಾತನಾಡುವ ಶಿವಣ್ಣ, “ಇಂತಹ ಕಷ್ಟದ ಸಮಯದಲ್ಲಿ ಎಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋದು ಅನಿವಾರ್ಯ. ಹಾಗಾಗಿ, ನಮ್ಮಕೈಯಿಂದ ಏನು ಮಾಡಲಾಗುತ್ತದೋ, ಅದನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಿವಣ್ಣ.
ಇದನ್ನೂಓದಿ: ಜ್ಯೂನಿಯರ್ ಎನ್ ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ
ಕಳೆದ ಬಾರಿಯ ಲಾಕ್ಡೌನ್ನಲ್ಲಿ ಶಿವಣ್ಣ, ಮನೆಯಲ್ಲಿದ್ದುಕೊಂಡು ಒಂದಷ್ಟು ಸಿನಿಮಾ, ವೆಬ್ ಸಿರೀಸ್ಗಳನ್ನು ನೋಡಿ ಖುಷಿಪಟ್ಟಿದ್ದರು. ಈ ಬಾರಿಯ ಲಾಕ್ಡೌನ್ನಲ್ಲೂ ಶಿವಣ್ಣ ಅದನ್ನು ಮುಂದುವರೆಸಿದ್ದಾರೆ. “ಈ ಬಾರಿಯೂ ನಾನು ಹೊಸ ಹೊಸ ಸಿನಿಮಾ, ವೆಬ್ ಸೀರಿಸ್ಗಳನ್ನು ನೋಡುತ್ತಿದ್ದೇನೆ. ಮನೆ ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಮನೆಯಲ್ಲೇ ಇದ್ದೇನೆ. ಯಾರನ್ನೂಕೂಡಾ ಭೇಟಿಯಾಗುತ್ತಿಲ್ಲ’ ಎನ್ನುವುದು ಶಿವಣ್ಣ ಮಾತು.
ಯಾರೇ ಶಿವರಾಜ್ಕುಮಾರ್ ಅವರನ್ನು ಭೇಟಿಯಾದರೂ ಮೊದಲು ಕೇಳುವ ಪ್ರಶ್ನೆ ನಿಮ್ಮ ಫಿಟ್ನೆಸ್ ರಹಸ್ಯವೇನು ಎಂಬುದು. ಅದಕ್ಕೆ ಕಾರಣ ಶಿವಣ್ಣ ಫಿಟ್ ಅಂಡ್ ಫೈನ್ ಆಗಿರೋದು. ಈಗ ಶಿವಣ್ಣ ಮತ್ತಷ್ಟು ಫಿಟ್ ಆಗಲಿದ್ದಾರೆ. ಲಾಕ್ಡೌನ್ನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಜಿಮ್ನಲ್ಲಿ ಕಳೆಯುತ್ತಿದ್ದಾರೆ. ಈ ಮೂಲಕ ತಮ್ಮ ಹೊಸ ಸಿನಿಮಾದಲ್ಲಿ ಮತ್ತಷ್ಟು ಫಿಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ.
ಪ್ರೀತಿ ಪಾತ್ರರಿಗೆ ನೀವು ಮುಖ್ಯ
ತಮ್ಮ ಅಭಿಮಾನಿಗಳಿಗೆ ನಟ ಶಿವರಾಜ್ಕುಮಾರ್ ಒಂದುಕಿವಿಮಾತು ಹೇಳಿದ್ದಾರೆ. ಅದು ಕೊರೊನಾ ಕುರಿತು ಸರ್ಕಾರದ ಮಾರ್ಗಸೂಚಿಯನ್ನುಕಟ್ಟುನಿಟ್ಟಾಗಿ ಅನುಸರಿಸಬೇಕೆಂದು. “ಇದು ಎಲ್ಲರಿಗೂ ಕಷ್ಟದ ಸಮಯ. ನಮಗೆ ಬಂದಿರುವ ಈ ತೊಂದರೆಯನ್ನು ನಾವೇ ಓಡಿಸಬೇಕು. ದಯವಿಟ್ಟು ಎಲ್ಲರೂ ರೂಲ್ಸ್ ಅನ್ನುಕಟ್ಟುನಿಟ್ಟಾಗಿ ಫಾಲೋ ಮಾಡಿ. ನಮ್ಮಿಂದ ಮತ್ತೂಬ್ಬರಿಗೆ ತೊಂದರೆಯಾಗೋದು ಬೇಡ.
ಎಲ್ಲರೂ ಪರಸ್ಪರ ಚೆನ್ನಾಗಿದ್ದಾಗ ಮಾತ್ರ ಈ ಸಮಾಜ ನಡೆಯಲು ಸಾಧ್ಯ. ನಿಮ್ಮಕುಟುಂಬಕ್ಕೆ ನೀವು ತುಂಬಾ ಮುಖ್ಯ.ಕೇವಲ ದುಡಿಮೆಗಷ್ಟೇ ಅಲ್ಲ, ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಇರುವಿಕೆ ತುಂಬಾ ಮುಖ್ಯ. ಹಾಗಾಗಿ, ಎಲ್ಲರೂ ಮಾಸ್ಕ್ ಹಾಕಿ, ಸಾಮಾಜಿಕ ಅಂತರಕಾಪಾಡಿಕೊಂಡು ಆದಷ್ಟು ಬೇಗಕೊರೊನಾ ಮುಕ್ತವಾಗಿಸೋಣ’ ಎನ್ನುವುದು ಶಿವಣ್ಣ ಕಿವಿಮಾತು.
ಸದ್ಯ ಶಿವರಾಜ್ಕುಮಾರ್ ಅಭಿನಯದ “ಭಜರಂಗಿ-2′ ಬಿಡುಗಡೆಯ ಹಂತಕ್ಕೆ ಬಂದಿದೆ. ಇದಲ್ಲದೇ, “ಶಿವಪ್ಪ’ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಶಿವರಾಜ್ಕುಮಾರ್ ಅವರ125ನೇ ಸಿನಿಮಾ “ವೇದ’ ಅನೌನ್ಸ್ ಆಗಿದೆ.
ರವಿಪ್ರಕಾಶ್ ರೈ